ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಆಡಲು ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಪ್ರಯಾಣಿಸುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟವಾಗಿ ತಿಳಿಸಿದೆ. ಮತ್ತೊಂದೆಡೆ ಪಾಕಿಸ್ತಾನ ರಾಜಕೀಯ ವ್ಯವಸ್ಥೆಯಲ್ಲಿ ಉಂಟಾಗಿರುವ ಕಲಹಗಳಿಂದ ದಿನದಿಂದ ದಿನಕ್ಕೆ ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ಇದರ ಮಧ್ಯೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಸಂಪೂರ್ಣವಾಗಿ ಬೇರೆ ದೇಶದಲ್ಲಿ ನಡೆಯುವ ಸಾಧ್ಯತೆಯಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅವರ ಕಾರ್ಯಕರ್ತರು ಇಸ್ಲಾಮಾಬಾದ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿ ಯಾವ ಸಂದರ್ಭದಲ್ಲಿ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಇದು ಕ್ರೀಡೆಗಳ ಮೇಲೆ ನೇರವಾಗಿ ಬೀರುತ್ತಿದೆ. ಶ್ರೀಲಂಕಾದ 'ಎ' ತಂಡ ಇದೀಗ ತಮ್ಮ ದೇಶಕ್ಕೆ ಮರಳುತ್ತಿದೆ. ಪಾಕಿಸ್ತಾನ ಶಾಹೀನ್ಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯನ್ನು ಮಧ್ಯದಲ್ಲಿಯೇ ಶ್ರೀಲಂಕಾ ತವರಿಗೆ ಮರಳು ನಿರ್ಧಾರ ಮಾಡಿದೆ.

ಚಾಂಪಿಯನ್ಸ್ ಟ್ರೋಫಿ 2025ರ ವೇಳಾಪಟ್ಟಿಯನ್ನು ನಿರ್ಧರಿಸುವ ಐಸಿಸಿ ಮಂಡಳಿಯ ವರ್ಚುವಲ್ ಸಭೆಗೆ ಒಂದು ದಿನ ಮೊದಲು ಈ ಬೆಳೆವಣಿಗೆ ಆಗಿರುವುದು ಪಿಸಿಬಿಗೆ ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆಯಿದೆ. ಹೀಗಿರುವಾಗ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆತಿಥ್ಯದ ಬಗ್ಗೆ ಕುತೂಹಲಗಳು ಹೆಚ್ಚುತ್ತಿವೆ. ಟೂರ್ನಿಯಲ್ಲಿ ಭಾಗವಹಿಸಲಿರುವ ದೇಶದ ತಂಡಗಳ ಕೂಡ ಭದ್ರತಾ ದೃಷ್ಟಿಯಿಂದ ಪಾಕಿಸ್ತಾನದಿಂದ ಚಾಂಪಿಯನ್ಸ್ ಟ್ರೋಫಿಯನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ನಡೆಸಲು ಒಪ್ಪಿಕೊಳ್ಳಬಹುದು.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಪರಿಣಾಮದಿಂದಾಗಿ ಶ್ರೀಲಂಕಾ ಎ ತಂಡ ತನ್ನ ಪ್ರವಾಸವನ್ನು ರದ್ದುಗೊಳಿಸಿರುವು ಮಂಗಳವಾರ ನಿರ್ಧರಿಸಿದೆ. ಇದಾದ ನಂತರ ಪಾಕಿಸ್ತಾನ ಶಾಹೀನ್ಸ್ ಮತ್ತು ಶ್ರೀಲಂಕಾ ಎ ನಡುವಿನ ಕೊನೆಯ ಎರಡು 50 ಓವರ್ಗಳ ಪಂದ್ಯಗಳನ್ನು ಪಿಸಿಬಿ ಮುಂದೂಡಿದೆ. ರದ್ದಾದ ಪಂದ್ಯಗಳು ಬುಧವಾರ ಮತ್ತು ಶುಕ್ರವಾರ ನಡೆಯಬೇಕಿತ್ತು.
ಇದೀಗ ಐಸಿಸಿ ಆತಿಥ್ಯವನ್ನು ಪಾಕಿಸ್ತಾನದಿಂದ ತೆಗೆದುಕೊಳ್ಳಬೇಕೇ ಅಥವಾ ಬೇರೆ ಆಯ್ಕೆ ಇದೆಯೇ ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಿದೆ. ಶ್ರೀಲಂಕಾ ಎ ತಂಡದ ಪ್ರವಾಸ ರದ್ದಾದ ಕಾರಣ, ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ತೆರಳುವ ಆಟಗಾರರ ಸುರಕ್ಷತೆಯ ಬಗ್ಗೆ ಆತಂಕ ಉಂಟಾಗಿದೆ.
ಪಾಕಿಸ್ತಾನದ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಐಸಿಸಿ ತೆಗೆದುಕೊಳ್ಳುವ ನಿರ್ಧಾರವು ಪಾಕಿಸ್ತಾನದ ಪರವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 'ಭಾರತವು ಪಾಕಿಸ್ತಾನಕ್ಕೆ ಕ್ರಿಕೆಟ್ ಆಡಲು ಬರದಿದ್ದರೆ, ನಾವು ಭಾರತಕ್ಕೆ ಆಡಲು ಹೋಗುವುದಿಲ್ಲ ಎಂದು ಹೇಳಿದರು. ಈ ಹೇಳಿಕೆಯನ್ನು ಮೊಹ್ಸಿನ್ ನಖ್ಜಿ ಹಲವಾರು ಬಾರಿ ಪುನರಾವರ್ತಿಸಿದ್ದಾರೆ.