
ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ನಡುವೆ ಯಾರು ಶ್ರೇಷ್ಟ ಎನ್ನುವ ಚರ್ಚೆ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಆಧುನಿಕ ಕ್ರಿಕೆಟ್ನಲ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ಬೌಲರ್ ಎನ್ನುವ ಬಗ್ಗೆ ಅಭಿಮಾನಿಗಳು, ಕ್ರಿಕೆಟ್ ಪಂಡಿತರು ಚರ್ಚಿಸುತ್ತಲೇ ಇರುತ್ತಾರೆ. ಆದರೆ, ಭಾರತ ಪಾಕಿಸ್ತಾನ ನಡುವಿನ ಪಂದ್ಯಗಳು ನಡೆದಾಗ ಇಬ್ಬರೂ ಆಟಗಾರರು ವೈಯಕ್ತಿಕ ಸಾಧನೆಗಳನ್ನು ಲೆಕ್ಕಿಸದೆ ಒಬ್ಬರಿಗೊಬ್ಬರು ಅಭಿನಂದನೆ ಸಲ್ಲಿಸುತ್ತಾರೆ.
ವಿರಾಟ್ ಕೊಹ್ಲಿ ಕೆಟ್ಟ ಫಾರ್ಮ್ನಲ್ಲಿದ್ದಾಗ ನಮ್ಮದೇ ದೇಶದ ಹಲವು ಮಾಜಿ ಕ್ರಿಕೆಟಿಗರು ಕೊಹ್ಲಿಯನ್ನು ಟೀಕಿಸಿದ್ದರು. ಕೊಹ್ಲಿ ಇನ್ನು ನಿವೃತ್ತಿ ಪಡೆಯಬೇಕು ಎನ್ನುವಂತೆ ಮಾತನಾಡಿದ್ದರು. ಕಳೆದ ಟಿ20 ವಿಶ್ವಕಪ್ನಲ್ಲಿ ಕೊಹ್ಲಿಗೆ ಭಾರತ ತಂಡದಲ್ಲಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು. ಆದರೆ, ಮತ್ತೆ ಕೆಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಮಾತ್ರ ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದರು. ನಂತರ ಫಾರ್ಮ್ಗೆ ಮರಳಿದ ಕೊಹ್ಲಿ ಇತಿಹಾಸ ಸೃಷ್ಟಿಸಿದರು.
ಕೊಹ್ಲಿ ಫಾರ್ಮ್ನಲ್ಲಿಲ್ಲದ ಸಮಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಕೂಡ ಕೊಹ್ಲಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದರು. "ಈ ಸಮಯ ಕಳೆದುಹೋಗುತ್ತದೆ, ಗಟ್ಟಿಯಾಗಿರಿ" ಎಂದು ಟ್ವೀಟ್ ಮಾಡಿ, ಕೊಹ್ಲಿ ಜೊತೆಯಿರುವ ಫೋಟೊ ಹಂಚಿಕೊಂಡು ಸಂಚಲನ ಸೃಷ್ಟಿಸಿದ್ದರು. ಇಬ್ಬರು ಶ್ರೇಷ್ಟ ಕ್ರಿಕೆಟಿಗರ ಕ್ರೀಡಾ ಸ್ಫೂರ್ತಿ ಅಭಿಮಾನಿಗಳ ಮನಗೆದ್ದಿತ್ತು. ದೀರ್ಘಕಾಲದ ನಂತರ ಬಾಬರ್ ಅಜಂ ತಾವು ಕೊಹ್ಲಿ ಬಗ್ಗೆ ಮಾಡಿದ್ದ ಟ್ವೀಟ್ ಕುರಿತು ಮೌನ ಮುರಿದಿದ್ದಾರೆ.

ಆಟಗಾರರಿಗೆ ಕೆಟ್ಟ ದಿನಗಳು ಸಹಜ
ಐಸಿಸಿ ಡಿಜಿಟಲ್ ಇನ್ಸೈಡರ್ ಝೈನಾಬ್ ಅಬ್ಬಾಸ್ ಜೊತೆ ನಡೆದ ಸಂದರ್ಶನದಲ್ಲಿ ಬಾಬರ್ ಅಜಂ ಈ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿಯೊಂದಿಗಿನ ಫೋಟೊ ಹಂಚಿಕೊಳ್ಳುವುದು ಉತ್ಸಾಹ ನೀಡುತ್ತದೆ, ಕೊಹ್ಲಿ ಇನ್ನು ದೀರ್ಘಕಾಲ ಕ್ರಿಕೆಟ್ ಆಡಬೇಕು ಎಂದು ಬಾಬರ್ ಅಜಂ ಹೇಳಿದ್ದಾರೆ. "ಕ್ರೀಡಾಪಟುವಾಗಿ ಎಲ್ಲರೂ ಅಂತಹ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ" ಎಂದು ಅವರು ಹೇಳಿದರು
"ಅಂತಹ ಸಮಯದಲ್ಲಿ ನಾನು ಟ್ವೀಟ್ ಮಾಡಿದರೆ, ಅದು ಯಾರಿಗಾದರೂ ಸಹಾಯ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ನನಗೆ ಅನಿಸಿತು. ಒಬ್ಬ ಆಟಗಾರನಾಗಿ ಇನ್ನೊಬ್ಬ ಆಟಗಾರನ ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ನಿಲ್ಲಬೇಕು" ಎಂದು ಅವರು ಹೇಳಿದರು.

ಕಷ್ಟದಲ್ಲಿದ್ದಾಗಲೆ ನಮ್ಮವರು ಯಾರೆಂದು ತಿಳಿಯುವುದು
"ನೀವು ಇತರರ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದೀರಿ ಎಂದು ತಿಳಿಯುವುದು ಕಷ್ಟದ ಸಮಯದಲ್ಲಿ, ಆ ಸಮಯದಲ್ಲಿ ನಾನು ಅದನ್ನು ಮಾಡಬೇಕಾಗಿತ್ತು. ಅದರಿಂದ ಅವರಿಗೆ ಆತ್ಮವಿಶ್ವಾಸ ಸಿಗಬಹುದು ಎಂದು ನಾನು ಭಾವಿಸಿದೆ. ಅದು ಅವರಿಗೆ ಧನಾತ್ಮಕ ಚಿಂತನೆ ಮಾಡಲು ಪ್ರೇರೇಪಿಸಬಹುದು ಎನಿಸಿತು" ಎಂದು ಹೇಳಿದರು.
ಬಾಬರ್ ಅಜಂ ಟ್ವೀಟ್ ಮಾಡಿದ್ದ ಸಂದರ್ಭದಲ್ಲಿ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಮೂರು ವರ್ಷಗಳಿಂದ ಶತಕ ಗಳಿಸಲು ಪರದಾಡುತ್ತಿದ್ದರು. ನಂತರ ಒಂದು ತಿಂಗಳ ವಿರಾಮ ತೆಗೆದುಕೊಂಡ ಕೊಹ್ಲಿ ಏಷ್ಯಾಕಪ್ನಲ್ಲಿ ವಾಪಸಾದರು ಆಫ್ಘಾನಿಸ್ತಾನದ ವಿರುದ್ಧ ಶತಕ ಸಿಡಿಸಿ ಮಿಂಚಿದರು.
ನಂತರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 82 ರನ್ ಸಿಡಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.