ಏಷ್ಯಾ ಕಪ್ ಟಿ20 ಟೂರ್ನಿ ಕುತೂಹಲ ಘಟ್ಟದತ್ತ ಮನೆ ಮಾಡಿದೆ. ಟೀಮ ಇಂಡಿಯಾ, ಸೂಪರ್ 4 ಹಂತದಲ್ಲಿ ಬಾಂಗ್ಲಾ ತಂಡವನ್ನು ಮಣಿಸಿ, ಫೈನಲ್ಗೆ ಪ್ರವೇಶವನ್ನು ಪಡೆದಿದೆ. ಇನ್ನು ಸೂಪರ್ 4 ಹಂತದಲ್ಲಿ ತಲಾ ಒಂದೊಂದು ಪಂದ್ಯವನ್ನು ಗೆದ್ದಿರುವ ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳು ಗುರುವಾರ ದುಬೈನಲ್ಲಿ ಕಾದಾಟ ನಡೆಸಲಿವೆ. ಸೂಪರ್ 4 ಹಂತದ ಮಹತ್ವದ ಪಂದ್ಯ ಇದಾಗಿದ್ದು, ಪ್ರಸಕ್ತ ಏಷ್ಯಾ ಕಪ್ ಟಿ20 ಟೂರ್ನಿಯ ಸೆಮಿಫೈನಲ್ನಂತೆ ಈ ಪಂದ್ಯ ಕಾಣುತ್ತಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಸೆ.28 ರಂದು ಟೀಮ್ ಇಂಡಿಯಾ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.
ಉಭಯ ತಂಡಗಳು ಬಲಿಷ್ಠವಾಗಿವೆ. ಪಾಕಿಸ್ತಾನ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ ಸೋತು, ಮಹತ್ವದ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿತ್ತು. ಇನ್ನು ಬಾಂಗ್ಲಾದೇಶ ಸಹ ಶ್ರೀಲಂಕಾ ತಂಡವನ್ನು ಸೋಲಿಸಿ, ಭಾರತದ ವಿರುದ್ಧ ಆಘಾತ ಅನುಭವಿಸಿತ್ತು. ಹೀಗಾಗಿ ತಲಾ ಒಂದೊಂದು ಪಂದ್ಯವನ್ನು ಗೆದ್ದ ತಂಡಗಳು ಗುರುವಾರ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸುವುದು ಉಭಯ ತಂಡಗಳಿಗೆ ಅನಿವಾರ್ಯವಾಗಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಪಾಕ್ ಬಲಿಷ್ಠವಾಗಿದೆ. ಉಭಯ ತಂಡಗಳು ಒಟ್ಟು 25 ಪಂದ್ಯಗಳನ್ನು ಆಡಿದ್ದು, ಪಾಕ್ 20 ಗೆಲುವು, ಬಾಂಗ್ಲಾ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕೆ ಇಳಿದಿದ್ದ ಬಾಂಗ್ಲಾದೇಶ ಕೈ ಸುಟ್ಟುಕೊಂಡಿತ್ತು. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಲಿದೆ. ಸ್ಟಾರ್ ಭರವಸೆಯ ಆಟಗಾರರ ಮೇಲೆ ಈ ಪಂದ್ಯದಲ್ಲಿ ಒತ್ತಡ ಇರಲಿದೆ. ಭಾರತದ ವಿರುದ್ಧ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದ ಸೈಫ್ ಅಲಿ, ಪಾಕ್ ವಿರುದ್ಧವೂ ಇಂತಹದ್ದೇ ಮತ್ತೊಂದು ಇನಿಂಗ್ಸ್ ಕಟ್ಟಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ಗಳು ಸಮಯೋಚಿತ ಆಟದ ಪ್ರದರ್ಶನ ನಿಡಿದ್ದೇ ಆದಲ್ಲಿ ಗೆಲುವಿನ ಕನಸು ನನಸಾಗುತ್ತದೆ. ಇನ್ನು ಮುಸ್ತಾಫಿಜುರ್ ರಹಮಾನ್ ಮುಂದಾಳತ್ವದ ಬೌಲರ್ಗಳು ಬಿಗುವಿನ ದಾಳಿ ನಡೆಸಿ ಪಾಕ್ ತಂಡದ ಬೌಲರ್ಗಳನ್ನು ಕಟ್ಟಿ ಹಾಕಬೇಕಿದೆ.
ಲಂಕಾ ತಂಡದ ವಿರುದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಸ್ಥಿರ ಬ್ಯಾಟಿಂಗ್ ನಡೆಸಿದ್ದರು. ಹುಸೇನ್ ತಲಾತ್ ಹಾಗೂ ಮೊಹಮ್ಮದ್ ನವಾಜ್ ಗುರುವಾರವೂ ಭರ್ಜರಿ ಪ್ರದರ್ಶನ ನೀಡಬೇಕಿದೆ. ಇನ್ನು ಪಾಕ್ ತಂಡದ ಟಾಪ್ ಆರ್ಡರ್ ಬ್ಯಾಟರ್ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ವೇಗದ ಬೌಲರ್ ಶಾಹಿನ್ ಶಾ ಆಫ್ರಿದಿ ಮತ್ತೊಮ್ಮೆ ಕರಾರುವಾಕ್ ದಾಳಿ ನಡೆಸಬೇಕಿದೆ. ಅಂದಾಗ ಮಾತ್ರ ಫೈನಲ್ಗೆ ಅರ್ಹತೆ ಪಡೆಯುವ ಕನಸು ನನಸಾಗುತ್ತದೆ. ಆಲ್ರೌಂಡರ್ ಹ್ಯಾರೀಸ್ ರೌಫ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಬೇಕಿದೆ. ಹುಸೇನ್ ತಲಾತ್ ಸಹ ಶಿಸ್ತು ಬದ್ಧ ದಾಳಿ ಸಂಘಟಿಸಬೇಕಿದೆ.