India-Pakistan Match: ಪಾಕಿಸ್ತಾನವು ಭಾರತದ ವಿರುದ್ಧ ಟಿ-20 ವಿಶ್ವಕಪ್ 2026 ಆಡುವುದಿಲ್ಲ ಎನ್ನುವ ನಿಲುವನ್ನು ಬದಲಾಯಿಸಿಕೊಂಡಿದೆ. ಐಸಿಸಿ ಜೊತೆ ಪಿಸಿಬಿ ಸಭೆ ನಡೆದ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆದೆ. ಇದರಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹಾಗಾದ್ರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ನಿರ್ಧಾರಕ್ಕೆ ಬರಲು ಪ್ರಮಖ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತ-ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಪಂದ್ಯಕ್ಕಾಗಿ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಿದೆ. ಪಾಕಿಸ್ತಾನ ಸರ್ಕಾರ ತನ್ನ ತಂಡಕ್ಕೆ ಭಾರತದ ವಿರುದ್ಧ ನಿಗದಿತ ಪಂದ್ಯವನ್ನು ಆಡಲು ಅನುಮತಿ ನೀಡಿದ್ದು, ಬಹಿಷ್ಕಾರದ ನಿರ್ಧಾರವನ್ನು ಅಧಿಕೃತವಾಗಿ ಹಿಂತೆಗೆದುಕೊಂಡಿದೆ. ಇದರಿಂದಾಗಿ ಟಿ-20 ವಿಶ್ವಕಪ್ 2026ರ ಅತ್ಯಂತ ನಿರೀಕ್ಷಿತ ಪಂದ್ಯ ನಿಗದಿಯಂತೆ ನಡೆಯುವುದು ಖಚಿತ ಆದಂತಾಗಿದೆ.

ಭಾರತದ ವಿರುದ್ಧ ಪಂದ್ಯ ಆಡಲು ಒಪ್ಪಿಗೆ: ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡುವೆ ಉಂಟಾಗಿದ್ದ ಗೊಂದಲ ಇದೀಗ ಬಹುತೇಕ ಅಂತ್ಯಗೊಂಡಿದೆ. ಹಲವು ಹಂತದ ಮಾತುಕತೆಗಳು, ಮಿತ್ರ ರಾಷ್ಟ್ರಗಳ ಮನವೊಲಿಕೆ ಹಾಗೂ ಐಸಿಸಿಯ ದೃಢ ನಿಲುವಿನ ಬಳಿಕ ಪಾಕಿಸ್ತಾನ ತನ್ನ ಕಠಿಣ ನಿಲುವನ್ನು ಹಿಂತೆಗೆದುಕೊಂಡು ಭಾರತದ ವಿರುದ್ಧ ಪಂದ್ಯ ಆಡಲು ಒಪ್ಪಿಗೆ ಸೂಚಿಸಿದೆ.
ಪಂದ್ಯ ಬಹಿಷ್ಕರಿಸಿದ್ದೇಕೆ?: ಭದ್ರತಾ ಕಾರಣಗಳನ್ನು ಮುಂದಿಟ್ಟು ಭಾರತದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸಿದ್ದ ಹಿನ್ನೆಲೆ ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್ನಿಂದ ಹೊರಗಿಡಲಾಗಿತ್ತು. ಬಾಂಗ್ಲಾದೇಶದ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಸೇರಿಸಲಾಯಿತು. ಈ ಬೆಳವಣಿಗೆಯ ಬಳಿಕ ಪಾಕಿಸ್ತಾನ, ಬಾಂಗ್ಲಾದೇಶದೊಂದಿಗೆ ನಿಲ್ಲುವ ನೆಪದಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿತ್ತು.
ಆದರೆ, ಐಸಿಸಿಯೊಂದಿಗೆ ನಡೆದ ಚರ್ಚೆಗಳಲ್ಲಿ ಈ ನಿಲುವಿಗೆ ಬೆಂಬಲ ದೊರಕಲಿಲ್ಲ. ಐಸಿಸಿ, ಟೂರ್ನಿಯ ವೇಳಾಪಟ್ಟಿ ಮತ್ತು ಆಯೋಜನೆ ವಿಚಾರಗಳಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಇಟ್ಟ ಬೇಡಿಕೆಗಳನ್ನು ಕೂಡ ತಿರಸ್ಕರಿಸುವ ಮೂಲಕ ಪಾಕ್ಗೆ ಹೊಡೆ ಕೊಟ್ಟಿತ್ತು. ಬಳಿಕ ಪಾಕ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಐಸಿಸಿಯಿಂದ ಕಠಿಣ ಕ್ರಮ ಎದುರಾಗುವ ಭಯ, ಟೂರ್ನಿಯಿಂದ ಹೊರಗುಳಿಯುವ ಅಪಾಯ ಹಾಗೂ ಭಾರತದ ವಿರುದ್ಧ ಪಂದ್ಯ ನಡೆಯದಿದ್ದರೆ ಉಂಟಾಗುವ ಭಾರಿ ಆರ್ಥಿಕ ನಷ್ಟ ಈ ಎಲ್ಲಾ ಅಂಶಗಳನ್ನ ಮುಂದಿಟ್ಟು ಪಾಕಿಸ್ತಾನಕ್ಕೆ ಮರುಪರಿಶೀಲನೆಗೆ ಮಿತ್ರ ರಾಷ್ಟ್ರಗಳು ಒತ್ತಾಯಿಸಿವೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಶ್ರೀಲಂಕಾ ಸರ್ಕಾರವೂ ಪಾಕಿಸ್ತಾನ ತನ್ನ ನಿರ್ಧಾರವನ್ನು ಬದಲಾಯಿಸಬೇಕೆಂದು ಮನವಿ ಮಾಡಿವೆ ಎನ್ನಲಾಗಿದೆ.
ಬೆದರಿದ ಪಾಕಿಸ್ತಾನ: ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ನೇರವಾಗಿ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆಗ ಬೆದರಿದ ಪಾಕ್ ಪ್ರಧಾನಿ ಈ ಭಾರತದ ಜೊತೆಗೆ ಪಂದ್ಯ ಆಡಲು ಒಪ್ಪುವಂತೆ ಪಿಸಿಬಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಇದಕ್ಕೆ ಅಸ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಸ್ತು ಎಂದಿದ್ದು, ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವು ಫೆಬ್ರವರಿ 15, 2026ರಂದು ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುವುದು ಖಚಿತವಾಗಿದೆ. ಈ ಪಂದ್ಯ ವೀಕ್ಷಣೆಗೆ ವಿಶ್ವಾದ್ಯಂತ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.
ಪಾಕಿಸ್ತಾನ ಸರ್ಕಾರದ ಹೇಳಿಕೆಯಲ್ಲಿ ಏನಿದೆ?: "ಬಹುಪಕ್ಷೀಯ ಮಾತುಕತೆಗಳು ಮತ್ತು ಮಿತ್ರ ದೇಶಗಳ ಮನವಿಗಳ ಹಿನ್ನೆಲೆಯಲ್ಲಿ, ಕ್ರಿಕೆಟ್ನ ನಿರಂತರತೆ ಮತ್ತು ಕ್ರೀಡಾ ಮನೋಭಾವವನ್ನು ಕಾಪಾಡುವ ಉದ್ದೇಶದಿಂದ ತಂಡಕ್ಕೆ ನಿಗದಿತ ಪಂದ್ಯವನ್ನು ಆಡುವಂತೆ ನಿರ್ದೇಶಿಸಲಾಗಿದೆ," ಎಂದು ಪಾಕಿಸ್ತಾನ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಈ ನಿರ್ಧಾರದಿಂದಾಗಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಒಪ್ಪಿಗೆ ಸಿಕ್ಕಿದೆ. ಇನ್ನೂ
ಅಲ್ಲದೆ, ಕ್ರಿಕೆಟ್ನ ಉತ್ಸಾಹವನ್ನು ಕಾಪಾಡುವ ಹಾಗೂ ಭಾಗವಹಿಸುವ ಎಲ್ಲಾ ರಾಷ್ಟ್ರಗಳಲ್ಲಿ ಈ ಜಾಗತಿಕ ಕ್ರೀಡೆಯ ನಿರಂತರತೆಯನ್ನು ಬೆಂಬಲಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ, ಸರ್ಕಾರದ ಅಧಿಕೃತ ಹೇಳಿಕೆಗೂ ಮುನ್ನ ಐಸಿಸಿ ಜೊತೆ ನಡೆದ ಚರ್ಚೆಗಳ ವಿವರವನ್ನು ಪ್ರಧಾನಿಗೆ ನೀಡಿದ್ದರು. ಅಂತಿಮ ತೀರ್ಮಾನಕ್ಕೆ ಬರಲು ಒಂದು ದಿನ ಬೇಕಾಗಬಹುದು ಎಂದು ಅವರು ಈ ಹಿಂದೆ ಹೇಳಿದ್ದರು. ಬಾಂಗ್ಲಾದೇಶದ ವಿಷಯದಲ್ಲಿ ಪಾಕಿಸ್ತಾನ ನೈತಿಕ ಬೆಂಬಲ ನೀಡಿದ್ದುದಾಗಿ ನಖ್ವಿ ತಿಳಿಸಿದ್ದಾರೆ.
ಬಿಸಿಬಿ ಕ್ರಿಕೆಟ್ ಮಂಡಳಿ ಹೇಳಿದ್ದೇನು?: ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತದಲ್ಲಿ ಆಡಲು ನಿರಾಕರಿಸಿದ ಹಿನ್ನೆಲೆ ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್ನಿಂದ ಹೊರಗಿಡಲಾಗಿತ್ತು. ಈ ವಿಚಾರದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮೀನುಲ್ ಇಸ್ಲಾಂ, ಪಾಕಿಸ್ತಾನಕ್ಕೆ ಧನ್ಯವಾದ ತಿಳಿಸಿದ್ದಾರೆ. ಆದರೆ, ಭಾರತದ ವಿರುದ್ಧ ಪಂದ್ಯ ನಡೆಯುವುದು ಕ್ರಿಕೆಟ್ನ ಹಿತಾಸಕ್ತಿಗೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಸಿಸಿ ಹೇಳಿದ್ದೇನು?: ಈ ಕುರಿತು ಐಸಿಸಿ ದುಬೈನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಾರತದಲ್ಲಿ ಆಡಲು ನಿರಾಕರಿಸಿದ್ದಕ್ಕಾಗಿ ಬಾಂಗ್ಲಾದೇಶಕ್ಕೆ ಯಾವುದೇ ರೀತಿಯ ಆರ್ಥಿಕ, ಕ್ರೀಡಾ ಅಥವಾ ಆಡಳಿತಾತ್ಮಕ ದಂಡ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಬಾಂಗ್ಲಾದೇಶದ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಜೊತೆಗೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ವಿವಾದ ಪರಿಹಾರ ಸಮಿತಿಯನ್ನು ಸಂಪರ್ಕಿಸುವ ಹಕ್ಕು ಇರುತ್ತದೆ ಎಂದು ತಿಳಿಸಿದೆ.
ಪಾಕಿಸ್ತಾನಕ್ಕೆ ಈ ವಿಚಾರದಲ್ಲಿ ಹಿನ್ನಡೆ ಆಗಿರುವುದು ಸ್ಪಷ್ಟವಾಗಿದೆ. ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖವಾಜಾ ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ ಮೊಹ್ಸಿನ್ ನಖ್ವಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ವಿಶ್ವಕಪ್ನಿಂದ ಹೊರಗುಳಿದ ಕಾರಣ ಬಾಂಗ್ಲಾದೇಶಕ್ಕೆ ಉಂಟಾದ ನಷ್ಟವನ್ನು ಸರಿದೂಗಿಸಲು ಭಾರತ-ಪಾಕಿಸ್ತಾನ ಕ್ರಿಕೆಟ್ ಪುನರಾರಂಭ, ಬಾಂಗ್ಲಾದೇಶ ಸೇರಿಸಿ ತ್ರಿಕೋನ ಸರಣಿಯ ಆಯೋಜನೆ ಮುಂತಾದ ವಿಚಾರಗಳು ಇದರಲ್ಲಿ ಸೇರಿವೆ.
ಆದರೆ ದ್ವಿಪಕ್ಷೀಯ ಸರಣಿಗಳು ಹಾಗೂ ತ್ರಿಕೋನ ಸರಣಿಗಳು ಐಸಿಸಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿ ಈ ಬೇಡಿಕೆಗಳನ್ನು ತಿರಸ್ಕರಿಸಲಾಗಿದೆ. ಮುಂದಿನ ಅಂಡರ್-19 ವಿಶ್ವಕಪ್ ಆತಿಥ್ಯವನ್ನು ಬಾಂಗ್ಲಾದೇಶಕ್ಕೆ ನೀಡುವ ವಿಚಾರವನ್ನು ಮಾತ್ರ ಐಸಿಸಿ ಪರಿಗಣಿಸಬಹುದು ಎಂದು ತಿಳಿಸಿದೆ.