
ಬೆಂಗಳೂರು, ಫೆಬ್ರವರಿ 26: ಭಾರತ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಅಶ್ವಿನ್ಗೆ ನಾಯಕನ ಸ್ಥಾನ ದೊರೆತಿದೆ. ಅಯ್ಯೊ ವಿರಾಟ್ ಕೋಹ್ಲಿ ಕತೆ ಏನು ಎಂದು ಚಿಂತೆ ಮಾಡಬೇಡಿ ಅವರಿಗೆ ದೊರೆತಿರುವುದು ಪಂಜಾಬ್ ತಂಡದ ನಾಯಕ ಸ್ಥಾನ.
ಐಪಿಎಲ್ನ ಹಲವು ಸೀಸನ್ಗಳಲ್ಲಿ ಚೆನ್ನೈ ಪರ ಆಡಿದ್ದ ತಮಿಳುನಾಡಿನ ಈ ಸ್ಪಿನ್ನರ್ ಅನ್ನು ಈ ಭಾರಿ ಪಂಜಾಬ್ ತಂಡದ ಮಾಲಕಿ ಪ್ರೀತಿ ಜಿಂಟಾ 7.6 ಕೋಟಿ ತೆತ್ತು ಪಂಜಾಬ್ ತಂಡಕ್ಕೆ ಖರೀದಿಸಿದ್ದಾರೆ. ಅಷ್ಟೆ ಅಲ್ಲದೆ ಅವರಿಗೆ ನಾಯಕ ಪಟ್ಟವನ್ನೂ ನೀಡಿದ್ದಾರೆ.
ಪಂಜಾಬ್ ತಂಡದಲ್ಲಿ ಹಿರಿಯ ಆಟಗಾರ ಈ ಮುಂಚೆ ನಾಯಕನ ಜವಾಬ್ದಾರಿಯನ್ನು ನಿಭಾಯಿಸಿ ಅನುಭವವಿದ್ದ ಯುವರಾಜ್ ಸಿಂಗ್ ಇದ್ದರು ಸಹ ಈ ವರೆಗೆ ಅಂತರರಾಷ್ಟ್ರೀಯ ಪಂದ್ಯದಲ್ಲಿ ನಾಯಕತ್ವ ವಹಿಸದ ಅಶ್ವಿನ್ ಅವರನ್ನು ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಕುತೂಹಲ ಕೆರಳಿಸಿದೆ.
ಆರ್.ಅಶ್ವಿನ್ ಅವರು ತಮಿಳುನಾಡು ರಾಜ್ಯ ತಂಡವನ್ನು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮುನ್ನಡೆಸಿ ಅನುಭವ ಹೊಂದಿದ್ದಾರೆ, ಅವರು ತಮ್ಮ 21 ನೇ ವಯಸ್ಸಿನಲ್ಲಿಯೇ ತಮಿಳುನಾಡು ತಂಡದ ಕ್ಯಾಪ್ಟನ್ ಆಗಿದ್ದರು.
ಯುವರಾಜ್ ಸಿಂಗ್ ಹೆಸರನ್ನು ಪಂಜಾಬ್ ತಂಡದ ಮೆಂಟರ್ ವಿರೇಂದ್ರ ಸೆಹ್ವಾಗ್ ಸೂಚಿಸಿದರಾದರೂ ಸಹ ಆಡಳಿತ ಮಂಡಳಿ ಹೊಸದಾಗಿ ಪಂಜಾಬ್ ಸೇರಿರುವ ಅಶ್ವಿನ್ ಅವರನ್ನೇ ಆಯ್ಕೆ ಮಾಡಿದೆ. ಗೇಲ್, ಯುವರಾಜ್, ಮ್ಯಾಕ್ಸ್ವೆಲ್, ಆರನ್ ಫಿಂಚ್, ಮಿಷೆಲ್ ಜಾನ್ಸನ್ ರೀತಿಯ ಹಿರಿಯ ಅನುಭವಿ ಆಟಗಾರರನ್ನು ಆರ್.ಅಶ್ವಿನ್ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲದಿಂದ ನೋಡಬೇಕಿರುವ ವಿಷಯ.
ತಂಡ ನೀಡಿರುವ ಹೊಸ ಜವಾಬ್ದಾರಿಯಿಂದ ಖುಷಿಯಾಗಿರುವ ರವಿಚಂದ್ರನ್ ಅಶ್ವಿನ್ ಅವರು 'ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ತಂಡದ ಆಟಗಾರರಲ್ಲಿರುವ ಪ್ರತಿಭೆಯನ್ನು ಗೆಲುವಾಗಿ ಪರಿವರ್ತಿಸುವ ಕಾರ್ಯವನ್ನು ಮಾಡುತ್ತೇನೆ' ಎಂದಿದ್ದಾರೆ.