160 ಕೋಟಿ ಕಟ್ಟಿ, ಇಲ್ಲವೇ ವಿಶ್ವಕಪ್ ಆಸೆ ಕೈಬಿಡಿ: ಬಿಸಿಸಿಐಗೆ ಐಸಿಸಿ ತಾಕೀತು

ನವದೆಹಲಿ, ಡಿಸೆಂಬರ್ 22: ಎರಡು ವರ್ಷಗಳ ಹಿಂದೆ ನಡೆದ ಟಿ20 ವಿಶ್ವಕಪ್ ಟ್ರೋಫಿಯ ವೇಳೆ ದೊರಕದ ತೆರಿಗೆ ಮನ್ನಾದ ಮೊತ್ತದ ಪರಿಹಾರವಾದ 23 ಮಿಲಿಯನ್ ಡಾಲರ್ (ಸುಮಾರು 160 ಕೋಟಿ ರೂ) ಡಿಸೆಂಬರ್ 31ರ ಒಳಗೆ ಪಾವತಿ ಮಾಡುವಂತೆ ಬಿಸಿಸಿಐಗೆ ಐಸಿಸಿ ಸೂಚನೆ ನೀಡಿದೆ.
2016ರ ವಿಶ್ವಕಪ್ ಟಿ20 ಆಯೋಜಿಸಿದ್ದಾಗ ಕೇಂದ್ರ ಅಥವಾ ರಾಜ್ಯಗಳಿಂದ ತೆರಿಗೆ ಮನ್ನಾ ವಿನಾಯಿತಿ ದೊರಕಿರಲಿಲ್ಲ. ಹೀಗಾಗಿ ತಮ್ಮಿಂದ ಪಾವತಿಯಾದ ತೆರಿಗೆ ಮೊತ್ತವನ್ನು ಪರಿಹಾರವಾಗಿ ನೀಡುವಂತೆ ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಮುಖ್ಯಸ್ಥರಾಗಿರುವ ಐಸಿಸಿ, ಬಿಸಿಸಿಐಗೆ ನಿರ್ದೇಶಿಸಿದೆ.
ಸುಪ್ರೀಂಕೋರ್ಟ್ ನೇಮಿಸಿರುವ ಬಿಸಿಸಿಐನ ಕ್ರಿಕೆಟ್ ಆಡಳಿತ ಮಂಡಳಿಗೆ (ಸಿಓಎ) ಐಸಿಸಿಯ ಬೇಡಿಕೆಯಂತೆ 160 ಕೋಟಿ ರೂ ಹಣ ಪಾವತಿ ಮಾಡಲು 9 ದಿನ ಮಾತ್ರ ಬಾಕಿ ಇದೆ.
ಒಂದು ವೇಳೆ ಈ ಅವಧಿಯಲ್ಲಿ ಪರಿಹಾರದ ಮೊತ್ತ ಪಾವತಿಸುವಲ್ಲಿ ಬಿಸಿಸಿಐ ವಿಫಲವಾದರೆ ಪ್ರಸ್ತುತದ ಹಣಕಾಸು ವರ್ಷದಲ್ಲಿ ಭಾರತದ ಆದಾಯದ ಪಾಲನ್ನು ಅಗತ್ಯಬಿದ್ದರೆ ಮುರಿದುಕೊಳ್ಳುವುದಾಗಿ ಬೆದರಿಕೆಯೊಡ್ಡಿದೆ.
ಅಲ್ಲದೆ, ಭಾರತದಲ್ಲಿ ಆಯೋಜಿಸಲು ಉದ್ದೇಶಿಸಿರುವ 2021ರ ಚಾಂಪಿಯನ್ಸ್ ಟ್ರೋಫಿ ಮತ್ತು 2023ರ ಏಕದಿನ ವಿಶ್ವಕಪ್ ಟೂರ್ನಿಗಳನ್ನು ಬೇರೆಡೆಗೆ ಸ್ಥಳಾಂತರಿಸುವುದಾಗಿ ಐಸಿಸಿ ಹೇಳಿದೆ.
ಐಸಿಸಿಯ ಎಲ್ಲ ಟೂರ್ನಿಗಳ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿರುವ ಸ್ಟಾರ್ ಟಿವಿ, 2016ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ತನ್ನ ಎಲ್ಲ ತೆರಿಗೆ ಮೊತ್ತವನ್ನು ಕಡಿತಗೊಳಿಸಿ ಹಣ ಪಾವತಿ ಮಾಡಿತ್ತು. ಈಗ ಅದು ಬಿಸಿಸಿಐ ಅದಕ್ಕೆ ಪರಿಹಾರ ನೀಡುವಂತೆ ಬೇಡಿಕೆ ಇರಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ಭಾರತವು ತೆರಿಗೆ ಮನ್ನಾ ಮಾಡುವುದಾಗಿ ಯಾವಾಗ, ಯಾವ ಸಭೆಯಲ್ಲಿ ಒಪ್ಪಿಕೊಂಡಿತ್ತು ಎಂಬುದಕ್ಕೆ ದಾಖಲೆ ನೀಡುವಂತೆ ಐಸಿಸಿಗೆ ಸವಾಲು ಹಾಕಿದೆ.
ಆದರೆ, ಇದುವರೆಗೂ ಐಸಿಸಿ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಏಕೆಂದರೆ ಅವರ ಬಳಿ ಯಾವ ದಾಖಲೆಯೂ ಇಲ್ಲ. ಭಾರತದಿಂದ ಹಣ ಕೀಳುವುದಕ್ಕಾಗಿ ಅದು ಬಯಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈ ತೆರಿಗೆ ವಿನಾಯಿತಿ ವಿವಾದವು ಬಿಸಿಸಿಐನ ಆಗಿನ ಅಧ್ಯಕ್ಷ ಎನ್. ಶ್ರೀನಿವಾಸನ್, ಐಸಿಸಿಗೆ ಹೇಳಿರಬಹುದು. ಇದು ಐಸಿಸಿಯ ಈಗಿನ ಅಧ್ಯಕ್ಷ ಮತ್ತು ಬಿಸಿಸಿಐ ಮಾಜಿ ಮುಖ್ಯಸ್ಥರ ನಡುವಿನ ಒಪ್ಪಂದವಾಗಿರಬಹುದು. ಈಗ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಶಶಾಂಕ್ ಮನೋಹರ್, ಬಿಸಿಸಿಐಅನ್ನು ಗುರಿಯನ್ನಾಗಿಸಿಕೊಂಡಿದ್ದಾರೆ ಎಂದು ಸದಸ್ಯರೊಬ್ಬರು ಆರೋಪಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications