ಐಪಿಎಲ್ 16ನೇ ಆವೃತ್ತಿಯಲ್ಲಿ ಆರ್ಸಿಬಿ 3ನೇ ಗೆಲುವು ಸಾಧಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ ಅಮೋಘ ಪ್ರದರ್ಶನ ನೀಡಿದ್ದು 24 ರನ್ಗಳ ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ತಂಡದ ಮನಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಪಂದ್ಯ ಈಗ ಆರಂಭಿಕ ಹಂತದಲ್ಲಿದ್ದು ಅಂಕಪಟ್ಟಿಯ ಮೇಲೆ ಹೆಚ್ಚಿನ ಗಮನಹರಿಸುವುದಿಲ್ಲ ಎಂದಿದ್ದಾರೆ.
ಈ ಆವೃತ್ತಿಯಲ್ಲಿ ಆರ್ಸಿಬಿ ಆಡಿರುವ 6 ಪಂದ್ಯಗಳಲ್ಲಿ 3ನೇ ಗೆಲುವನ್ನು ಆರ್ಸಿಬಿ ಸಾಧಿಸಿದೆ. 24 ರನ್ಗಳ ಅಂತರದ ಗೆಲುವು ಸಾಧಿಸಿರುವ ಕಾರಣ ಆರ್ಸಿಬಿ ರನ್ರೇಟ್ನಲ್ಲಿಯೂ ಪ್ರಗತಿ ಕಂಡಿದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡ 8ನೇ ಸ್ಥಾನದಲ್ಲಿದ್ದು ಈಗ ಅಗ್ರ 4ರ ಸನಿಹಕ್ಕೆ ಬಂದು ತಲುಪಿದೆ.

ವಿರಾಟ್ ಕೊಹ್ಲಿ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ್ದು ಒಟ್ಟಾರೆಯಾಗಿ ತಂಡ ಬಹಳ ಆತ್ಮವಿಶ್ವಾಸದಲ್ಲಿರುವುದನ್ನು ವ್ಯಕ್ತಪಡಿಸಿದ್ದಾರೆ. "ಈ ಗೆಲುವು ನಮ್ಮ ತಂಡವನ್ನು ಅಜೇಯ ತಂಡವನ್ನಾಗಿಸುವುದಿಲ್ಲ ಅಥವಾ ಈ ಪಂದ್ಯಕ್ಕೂ ಹಿಂದಿನ ಅಂಕದಿಂದಾಗಿ ನಾವು ಕೆಟ್ಟ ತಂಡ ಎನಿಸಿಕೊಳ್ಳುವುದಿಲ್ಲ. ಕೇವಲ ಐದು ಅಥವಾ ಆರು ಪಂದ್ಯಗಳನ್ನು ಆಡಿದ ಆಧಾರದಲ್ಲಿ ಈ ಅಂಕಪಟ್ಟಿ ನಮ್ಮ ಮನಸ್ಥಿತಿಗಳನ್ನು ಹೇಳಲು ಸಾಧ್ಯವಿಲ್ಲ.ನಮ್ಮ ಪ್ರಯತ್ನವನ್ನು ನಡೆಸಲಿದ್ದು ಗೆಲುವಿನ ಲಯವನ್ನು ಮುಂದುವರಿಸುವ ಪ್ರಯತ್ನದಲ್ಲಿದ್ದೇವೆ" ಎಂದಿದ್ದಾರೆ ವಿರಾಟ್ ಕೊಹ್ಲಿ.
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್ಗೆ 137 ರನ್ಗಳ ಬೃಹತ್ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಆಸರೆಯಾದರು. ಅದರಲ್ಲೂ ಪವರ್ಪ್ಲೇ ಅವಧಿಯಲ್ಲಿ ಇಬ್ಬರು ಆಟಗಾರರು ಸ್ಪೋಟಕ ಪ್ರದರ್ಶನ ನೀಡಿದ್ದು ದೊಡ್ಡ ಮೊತ್ತದ ಭರವಸೆ ಮೂಡಿಸಿದ್ದರು. ಆದರೆ ಬಳಿಕ ರನ್ವೇಗ ಕಡಿಮೆಯಾದ ಕಾರಣ ತಂಡ ಸಂಕಷ್ಟಕ್ಕೆ ಸಿಲುಕುವ ಭೀತು ಉಂಟಾಗಿತ್ತು. ಈ ವಿಚಾರವಾಗಿಯೂ ಕೊಹ್ಲಿ ವಿವರಣೆ ನೀಡಿದ್ದಾರೆ.
"ಪ್ರಥಮಾರ್ಥದಲ್ಲಿ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಯಿತು. ಈ ಸಂದರ್ಭದಲ್ಲಿ ಫಾಫ್ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದರು. ನಾವಿಬ್ಬರೂ ಜೊತೆಯಾಟವನ್ನು ಸಾಧ್ಯವಾದಷ್ಟು ವಿಸ್ತರಿಸಿದರೆ ಆಗ 20 ರನ್ ದೊರೆಯುವ ವಿಶ್ವಾಸವಿತ್ತು. 7-8 ಓವರ್ಗಳ ಬಳಿಕ ಸವಾಲು ಎದುರಾಯಿತು. ಆಗ ಸಾಧ್ಯವಾದಷ್ಟು ಹೆಚ್ಚು ಕಾಲ ಕ್ರೀಸ್ನಲ್ಲಿದ್ದು ರನ್ಗಳನ್ನು ಕಲೆಹಾಕಲು ನಿರ್ಧರಿಸಿದೆವು. ನಾವು ಮತ್ತಷ್ಟು ಹೆಚ್ಚು ಕಾಳ ನಿಂತಿದ್ದರೆ 190-200ರ ಗುರಿ ನೀಡುವ ಸಾಧ್ಯತೆಯಿತ್ತು. ಆದರೆ ಇಲ್ಲಿ 175 ರನ್ ಉತ್ತಮವಾದ ಸ್ಕೋರ್ ಆಗಲಿದೆ ಎಂದು ನಮಗೆ ಅನಿಸಿತ್ತು" ಎಂದಿದ್ದಾರೆ ವಿರಾಟ್ ಕೊಹ್ಲಿ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಅವರ 59 ರನ್ ಹಾಗೂ ಫಾಫ್ ಡು ಪ್ಲೆಸಿಸ್ ಅವರ 84 ರನ್ಗಳ ಕೊಡುಗೆಯ ಕಾರಣದಿಂದಾಗಿ 174 ರನ್ಗಳನ್ನು ಗಳಿಸಿತ್ತು. ಇದನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರ್ಸಿಬಿ ವೇಗಿ ಮೊಹಮ್ಮದ್ ಸಿರಾಜ್ ದೊಡ್ಡ ಆಘಾತವನ್ನು ನೀಡಿದರು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನಿಡುತ್ತಿರುವ ಸಿರಾಜ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಸತತವಾಗಿ ಆಘಾತ ನೀಡಿದರು.
ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಲ್ಕು ಆಟಗಾರರನ್ನು ತನ್ನ ಬೌಲಿಂಗ್ ದಾಳಿಯನ್ನು ಫೆವಿಲಿಯನ್ಗೆ ಅಟ್ಟಿದ್ದರೆ ಒಂದು ಅದ್ಭುತ ರನೌಟ್ ಕೂಡ ಮಾಡಿ ಆರ್ಸಿಬಿ ತಂಡಕ್ಕೆ ಮೇಲುಗೈ ಉಂಟು ಮಾಡಿದರು. ಸಿರಾಜ್ ಅವರ ಈ ಬೌಲಿಂಗ್ ದಾಳಿಯ ಕಾರಣದಿಂದಾಗಿ ಆರ್ಸಿಬಿ ತಂಡ ಈ ಪಂದ್ಯದಲ್ಲಿ 24 ರನ್ಗಳ ಅಂತರದ ಗೆಲುವು ಸಾಧಿಸಿದಂತಾಗಿದೆ.