ಇತ್ತೀಚೆಗೆ ಮುಕ್ತಾಯವಾದ ಐಸಿಸಿ 2025 ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಯಿತು. ಈ ಐಸಿಸಿ ಟೂರ್ನಿಗೂ ಮುನ್ನ ಭಾರತ ಮತ್ತು ಪಾಕಿಸ್ತಾನ ನಡುವೆ ವಿವಾದ ಉಂಟಾಗಿತ್ತು. ಪಾಕಿಸ್ತಾನ ಚಾಂಪಿಯನ್ ಟ್ರೋಫಿಯನ್ನು ಆಯೋಜಿಸಿತ್ತು. ಹೀಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ಹಿಂದೇಟು ಹಾಕಿತು. ಇಲ್ಲಿಂದ ಉಭಯ ದೇಶಗಳ ನಡುವೆ ವಿವಾದ ಮುಗಿಲೇರಿತು.
ಚಾಂಪಿಯನ್ ಟ್ರೋಫಿ ಮುಗಿದ ಬಳಿಕವೂ ಈ ವಿವಾದ ಕಮ್ಮಿ ಆಗುವಂತೆ ಕಾಣುತ್ತಿಲ್ಲ. ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ನಂತರ ಹರಾರೆಯಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ತ್ರೈಮಾಸಿಕ ವಾರ್ಷಿಕ ಸಭೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಭಾಗವಹಿಸಲಿಲ್ಲ. ಇದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನದಲ್ಲಿ ಬಾಕಿ ಉಳಿದಿರುವ ವೈಯಕ್ತಿಕ ವ್ಯವಹಾರಗಳಿಂದಾಗಿ ಮೊಹ್ಸಿನ್ ನಖ್ವಿ ಇತ್ತೀಚಿನ ಸಭೆಗಳಿಗೆ ಹರಾರೆಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ. ನಖ್ವಿ ಅವರು ಕೇಂದ್ರ ಸರ್ಕಾರದ ಪ್ರಮುಖ ಹುದ್ದೆಯಾದ ಫೆಡರಲ್ ಆಂತರಿಕ ಸಚಿವರೂ ಆಗಿದ್ದಾರೆ. ಮೊಹ್ಸಿನ್ ನಖ್ವಿ ವೈಯಕ್ತಿಕ ಕಾರಣಗಳಿಂದ ಐಸಿಸಿ ಸಭೆಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ಪಿಸಿಬಿಯ ಸಿಇಒ ಸುಮೈರ್ ಅಹ್ಮದ್ ಐಸಿಸಿ ಸಭೆಗೆ ಹಾಜರಾಗಿದ್ದರು ಎಂದು ವರದಿಗಳಾಗಿವೆ.
ವರದಿಗಳ ಪ್ರಕಾರ, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಎರಡು ಹಂತದ ವ್ಯವಸ್ಥೆಯನ್ನು ಹೊಂದುವ ಬಗ್ಗೆ ಐಸಿಸಿ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ಪಿಸಿಬಿಯ ಮೌನದಿಂದಾಗಿ ಈ ಬಗ್ಗೆ ಯಾವ ನಿಲುವು ತೆಗೆದುಕೊಂಡಿದೆ ಎಂಬುದು ತಿಳಿದಿಲ್ಲ. ಇದೇ ವೇಳೆ ಚಾಂಪಿಯನ್ಸ್ ಟ್ರೋಫಿಯ ಹಣಕಾಸಿನ ವಿಷಯಗಳನ್ನು ಐಸಿಸಿ ಮತ್ತು ಪಿಸಿಬಿ ಇನ್ನೂ ಅಂತಿಮಗೊಳಿಸಿಲ್ಲ. ಆದಾಗ್ಯೂ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವುದರಿಂದ ಪಿಸಿಬಿ ಮೂರು ಶತಕೋಟಿ ರೂ. ಗಳನ್ನು ಗಳಿಸಿದೆ ಎಂದು ಹೇಳಿಕೊಂಡಿದೆ. ಈ ಮೊತ್ತವು ಐಸಿಸಿ ತನ್ನ ಪೂರ್ಣ ಟೆಸ್ಟ್ ಮತ್ತು ಅಸೋಸಿಯೇಟ್ ಸದಸ್ಯ ರಾಷ್ಟ್ರಗಳ ನಡುವೆ ಟೂರ್ನಿಗಳ ಗಳಿಕೆಯಿಂದ ವಿತರಿಸುವ ಷೇರುಗಳ ಜೊತೆಗೆ ಆಗಿದೆ.