ನವದೆಹಲಿ, ಡಿ. 11 : ಪಾಕಿಸ್ತಾನವನ್ನು ಬಗ್ಗು ಬಡಿದು ವಿಶ್ವಕಪ್ ಎತ್ತಿಹಿಡಿದ ಭಾರತದ ಅಂಧರ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಡಿಸೆಂಬರ್ 7 ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಐದು ವಿಕೆಟ್ ಗಳಿಂದ ಸೋಲಿಸಿ ಟ್ರೋಫಿ ಎತ್ತಿ ಹಿಡಿದಿತ್ತು.
ಈ ಹಿನ್ನೆಲೆಯಲ್ಲಿ ಅಂಧರ ತಂಡದ ನಾಯಕ, ಆಲ್ ರೌಂಡರ್ ಶಿವಮೊಗ್ಗದ ಶೇಖರ್ ನಾಯ್ಕ್ ಅವರಿಗೆ ಮೋದಿ ಬುಧವಾರ ವಿಶೇಷ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮೋದಿ, ನೀವು ದೇಶದ ಗೌರವ ಹೆಚ್ಚಿಸಿದಲ್ಲದೇ ಎಷ್ಟೋ ಜನರಿಗೆ ಪ್ರೇರಣೆಯಾಗಿದ್ದೀರಿ ಎಂದು ಹೇಳಿದರು.[ವಿನಯ್, ಅರವಿಂದ್ ದಾಳಿಗೆ ತತ್ತರಿಸಿ ಶರಣಾದ ತಮಿಳುನಾಡು]

ಈ ವೇಳೆ ಮೋದಿ ಕ್ರಿಕೆಟ್ ನಲ್ಲಿ ಅಂಧರು ಉಪಯೋಗಿಸುವ ಚೆಂಡೊಂದನ್ನು ಆಟಗಾರರಿಗೆ ನೀಡಿ ಎಲ್ಲರೂ ಹಸ್ತಾಕ್ಷರ ಹಾಕುವಂತೆ ತಿಳಿಸಿದರು. ನಂತರ ಇದನ್ನು ಮ್ಯೂಸಿಯಂ ವೊಂದರಲ್ಲಿ ಕಾಪಾಡಲಾಗುವುದು ಎಂದು ಮಾಹಿತಿ ನೀಡಿದರು.
ಕರ್ನಾಟಕದ ವಿರೇಶ್ ಎಚ್.ಆರ್. ಸೇರಿದಂತೆ ತಂಡದ ಎಲ್ಲ ಆಟಗಾರರಿಗೆ ಪ್ರತ್ಯೇಕವಾಗಿ ಹಸ್ತಲಾಘವ ನೀಡಿ ಅಭಿನಂದಿಸಿದರು. ಅಲ್ಲದೇ ತಮ್ಮ ಟ್ವಿಟ್ಟರ್ ಖಾತೆಯಲ್ಲೂ 11 ಜನ ಆಟಗಾರರ ಫೋಟೋ ಹಾಕಿ ಗೌರವ ಸೂಚಿಸಿದ್ದಾರೆ. [ಟೆಸ್ಟ್: ಏಳನೇ ಆಕರ್ಷಕ ಶತಕ ಸಿಡಿಸಿದ ವಿರಾಟ್ ಕೊಹ್ಲಿ]
ಕೇಂದ್ರ ಸಚಿವ ಅನಂತ ಕುಮಾರ್ ಅಭಿನಂದನೆ
ಜಯಭೇರಿ ಬಾರಿಸಿರುವ ಭಾರತದ ಅಂಧರ ತಂಡವನ್ನು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅಭಿನಂದಿಸಿದ್ದಾರೆ. ಭಾರತ ತಂಡದ ಈ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿರುವ ಅವರು ರಾಷ್ಟ್ರಕ್ಕೆ ಕೀರ್ತಿ ತಂದಿರುವ ಶೇಖರ್ ನಾಯ್ಕ್ ಸೇರಿದಂತೆ ತಂಡದ ಎಲ್ಲ ಸದಸ್ಯರನ್ನು ಅಭಿನಂದಿಸಿದ್ದಾರೆ.