ಜುಲೈ 22 ಸೋಮವಾರ, ಕ್ರಿಕೆಟ್ ಅಭಿಮಾನಿಗಳಿಗೆ ಶೀಘ್ರದಲ್ಲೇ ಸಂತಸ ಸುದ್ದಿಯೊಂದು ಸಿಗಲಿದೆ. ಬಹುನಿರೀಕ್ಷಿತದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಸರಣಿ ನಡೆಯುವ ಸಾಧ್ಯತೆ ಇದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು 2025ರಲ್ಲಿ ತಟಸ್ಥ ಸ್ಥಳದಲ್ಲಿ ಟಿ20 ಸರಣಿಗೆ ಭಾರತವನ್ನು ಆಹ್ವಾನಿಸಬಹುದು. ಇನ್ನೊಂದೆಡೆ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಪಾಕಿಸ್ತಾನದಿಂದ ಹೊರಗೆ ಸ್ಥಳಾಂತರಿಸಲು ಅವಕಾಶ ನೀಡದಿರುವ ತನ್ನ ನಿರ್ಧಾರಕ್ಕೆ ಮಂಡಳಿ (ಪಿಸಿಬಿ) ದೃಢವಾಗಿದೆ.

ಜುಲೈ 19-22 ರಿಂದ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಭೇಟಿಯಾಗಲಿರುವ ನಖ್ವಿ ಮುಂದಿನ ವರ್ಷ 2025ರ ಸಮಯದಲ್ಲಿ ತಟಸ್ಥ ಸ್ಥಳದಲ್ಲಿ ಟಿ20 ಸರಣಿಗೆ ಭಾರತವನ್ನು ಆಹ್ವಾನಿಸಲಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಸರಣಿ ಆಯೋಜಿಸುವ ಬಗ್ಗೆ ಜಯ್ ಶಾ ಮತ್ತು ಮೊಹ್ಸಿನ್ ನಖ್ವಿ ಭೇಟಿಯ ಸಮಯದಲ್ಲಿ ಈ ಪ್ರಸ್ತಾಪವನ್ನು ಚರ್ಚಿಸಲಾಗುವುದು ಎಂದು ಪಿಸಿಬಿ ಮೂಲಗಳು ಮಾಹಿತಿ ನೀಡಿವೆ. ಈ ಚರ್ಚೆಯು ವಾರ್ಷಿಕ ಸಮ್ಮೇಳನದ ಪ್ರಮುಖ ಭಾಗವಾಗಲಿದೆ.
ಪ್ರಮುಖವಾಗಿ ಸಮ್ಮೇಳನದ ಅಜೆಂಡಾವು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ತಟಸ್ಥ ಸ್ಥಳಗಳಿಗೆ ಬದಲಾಯಿಸುವ ಸಾಧ್ಯತೆಯನ್ನು ಒಳಗೊಂಡಿದೆ. ವಿಶೇಷವಾಗಿ ಭಾರತ ಸರ್ಕಾರ ಮತ್ತು ಬಿಸಿಸಿಐ ಕಳವಳ ವ್ಯಕ್ತಪಡಿಸಿದ ನಂತರ, ಭದ್ರತೆ ಮತ್ತು ರಾಜಕೀಯ ಕಾಳಜಿಗಳ ನಡುವೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿಸುವುದಿಲ್ಲ ಎಂದು ಸೂಚಿಸಿದೆ.
ಭಾರತ ತಂಡದ ಎಲ್ಲಾ ಪಂದ್ಯಗಳು ಲಾಹೋರ್ನಲ್ಲಿ ನಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಜೊತೆಗೆ ಇಡೀ ಸರಣಿಯಲ್ಲಿ ಭಾರತ ತಂಡವು ಅದೇ ಹೋಟೆಲ್ನಲ್ಲಿ ಉಳಿಯುತ್ತದೆ ಎಂದು ಪಾಕಿಸ್ತಾನ ಹೇಳಿದೆ. ಒಂದೇ ನಗರದಲ್ಲಿರುವುದರಿಂದ ಭೇಟಿ ನೀಡುವ ತಂಡಕ್ಕೆ ಸಂಪೂರ್ಣ ಭದ್ರತೆ ಒದಗಿಸುವುದು ಸುಲಭವಾಗುತ್ತದೆ ಎಂದೂ ಹೇಳಲಾಗಿದೆ.
ಇದಲ್ಲದೆ, ಪಂಚತಾರಾ ಹೋಟೆಲ್ ನಿರ್ಮಿಸಲು ಲಾಹೋರ್ನ ಗಡಾಫಿ ಕ್ರಿಕೆಟ್ ಸ್ಟೇಡಿಯಂ ಬಳಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಪಿಸಿಬಿ ಇತ್ತೀಚೆಗೆ ಘೋಷಿಸಿತು. ಪಿಸಿಬಿ ಹೋಟೆಲ್ ಅನ್ನು ಸ್ವತಃ ನಿರ್ಮಿಸಲು ಯೋಜಿಸಿದೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಕೆಲಸವನ್ನು ಪೂರ್ಣಗೊಳಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಕೊಲಂಬೊದಲ್ಲಿ ನಡೆಯುವ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಪಿಸಿಬಿ ಮುಖ್ಯಸ್ಥ ಮತ್ತು ಜಯ್ ಶಾ ಭೇಟಿಯಾಗುವ ನಿರೀಕ್ಷೆಯಿದೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಶಾ ಮನವೊಲಿಸಲು ನಖ್ವಿ ಪ್ರಯತ್ನಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಬಿಸಿಸಿಐ ಅಲ್ಲ, ಭಾರತ ಸರ್ಕಾರ.
ಭಾರತ ತಂಡ ಕಳೆದ ವರ್ಷ ಏಷ್ಯಾಕಪ್ಗಾಗಿ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿತ್ತು. ಇದರಿಂದಾಗಿ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಯಿತು.
ಪಾಕಿಸ್ತಾನ ಮತ್ತು ಭಾರತ 2012 ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡಿಲ್ಲ. ಮುಂಬೈ ದಾಳಿ ನಂತರ ಭಾರತ ಸರ್ಕಾರವು ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಪಂದ್ಯಗಳನ್ನು ಐಸಿಸಿ ಅಥವಾ ಎಸಿಸಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸಿದೆ.