ಮುಂಬರುವ 2023ರ ಏಷ್ಯಾ ಕಪ್ ಮತ್ತು ವಿಶ್ವಕಪ್ನಲ್ಲಿ ಭಾರತ ತಂಡದ ನಿರ್ಣಾಯಕ 4 ಮತ್ತು 5ನೇ ಬ್ಯಾಟಿಂಗ್ ಕ್ರಮಾಂಕಗಳಿಗಾಗಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಲಭ್ಯತೆ ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬೆನ್ನು ಮೂಳೆ ಮುರಿತಕ್ಕಾಗಿ ಶ್ರೇಯಸ್ ಅಯ್ಯರ್ ಶಸ್ತ್ರಚಿಕಿತ್ಸೆ ಮಾಡಿಸಿದ್ದರೆ, ಕೆಎಲ್ ರಾಹುಲ್ ಅವರು ತೊಡೆಯ ಗಾಯದ ಕಾರಣದಿಂದ ಶಸ್ತ್ರಚಿಕಿತ್ಸೆ ಪಡೆದು ಪುನರ್ವಸತಿ ಆರಂಭಿಸಿದ್ದಾರೆ.

ಐಸಿಸಿ ಪಂದ್ಯಾವಳಿಗೆ ಎರಡೇ ತಿಂಗಳು ಬಾಕಿ ಉಳಿದಿರುವ ಕಾರಣ, ಮಧ್ಯಮ ಕ್ರಮಾಂಕದಲ್ಲಿ ಆ ಶೂನ್ಯವನ್ನು ತುಂಬಲು ಭಾರತಕ್ಕೆ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಈ ಇಬ್ಬರು ಆಟಗಾರರ ಅಗತ್ಯವಿದೆ ಎಂದು ಪ್ರಗ್ಯಾನ್ ಓಜಾ ಒತ್ತಿ ಹೇಳಿದರು.
"2023ರ ಏಕದಿನ ವಿಶ್ವಕಪ್ನಲ್ಲಿ ಭಾರತಕ್ಕೆ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಬಹಳ ಮುಖ್ಯ. ಅವರು ಐರ್ಲೆಂಡ್ ವಿರುದ್ಧದ ಸರಣಿಯ ಭಾಗವಾಗಿಲ್ಲ, ಆದರೆ ಅವರನ್ನು ಪರಿಗಣಿಸಲಾಗುವುದು ಎಂದು ನಾನು ಭಾವಿಸುತ್ತೇನೆ," ಎಂದರು.
"ಫಿಟ್ನೆಸ್ ಮತ್ತು ಚೇತರಿಕೆಯ ವಿಷಯದಲ್ಲಿ ಅವರು ಯಾ ಹಂತದಲ್ಲಿದ್ದಾ ಎಂದು ನನಗೆ ತಿಳಿದಿಲ್ಲ. ಆದರೆ, ಅವರು ಏಷ್ಯಾ ಕಪ್ ಮತ್ತು ವಿಶ್ವಕಪ್ಗೆ ಬಹಳ ನಿರ್ಣಾಯಕರಾಗಿದ್ದಾರೆ," ಎಂದು ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ತಿಳಿಸಿದರು.

2019ರ ಏಕದಿನ ವಿಶ್ವಕಪ್ನಲ್ಲಿ ಭಾರತದ ಮಧ್ಯಮ ಕ್ರಮಾಂಕದ ಆಟಗಾರರ ಹೆಣಗಾಟ ಹೈಲೈಟ್ ಮಾಡಿದ ಪ್ರಗ್ಯಾನ್ ಓಜಾ, "50-ಓವರ್ಗಳ ಸ್ವರೂಪದಲ್ಲಿ ತಮ್ಮ ಸ್ಥಿರತೆಯಿಂದಾಗಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಭಾರತದ ಅವಕಾಶಗಳನ್ನು ಹೆಚ್ಚಿಸುತ್ತಾರೆ,"ಎಂದು ಸಲಹೆ ನೀಡಿದ್ದಾರೆ.
ಸ್ಥಿರತೆ, ಅನುಭವ, ಫಾರ್ಮ್, ಪ್ರದರ್ಶನ, ತಂಡಕ್ಕೆ ಕೊಡುಗೆ ಮತ್ತು ರನ್ ಗಳಿಸುವ ವಿಷಯದಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಇಬ್ಬರೂ ಅಗ್ರವಾಗಿದ್ದಾರೆ. ಇಬ್ಬರಿಗೂ ಸಾಕಷ್ಟು ಅನುಭವವಿದೆ. ಭಾರತವು 4 ಮತ್ತು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರರನ್ನು ಹುಡುಕುತ್ತಿದೆ. ಇವುಗಳು ನಾವು ಹೆಚ್ಚಿನ ಸಮಯ ಸವಾಲುಗಳನ್ನು ಎದುರಿಸುವ ಕ್ರಮಾಂಕಗಳಾಗಿವೆ,'' ಎಂದು ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಅಭಿಪ್ರಾಯಪಟ್ಟರು.
ಬಿಸಿಸಿಐ ಅಧಿಕೃತ ಬಿಡುಗಡೆಯಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಗಾಯಗಳ ಮಾಹಿತಿ ಹಂಚಿಕೊಂಡಿದ್ದು, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸವನ್ನು ಪುನರಾರಂಭಿಸಿದ್ದಾರೆ ಮತ್ತು ಪ್ರಸ್ತುತ ಸ್ಟ್ರೇಂಥ್ ಮತ್ತು ಫಿಟ್ನೆಸ್ ಡ್ರಿಲ್ಗಳಿಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದೆ.
ಬಿಸಿಸಿಐ ವೈದ್ಯಕೀಯ ತಂಡವು ಇಬ್ಬರು ಆಟಗಾರರ ಪ್ರಗತಿಯಿಂದ ತೃಪ್ತಿಯಾಗಿದೆ. ಮುಂಬರುವ ದಿನಗಳಲ್ಲಿ ಕೌಶಲ್ಯ, ಸಾಮರ್ಥ್ಯ ಮತ್ತು ಕಂಡೀಷನಿಂಗ್ ಎರಡರಲ್ಲೂ ಅವರ ಒತ್ತಡವನ್ನು ಹೆಚ್ಚಿಸಲಿದೆ,'' ಎಂದು ಬಿಸಿಸಿಐ ಹೇಳಿದೆ.