
ಮುಂಬೈ, ಜುಲೈ 21: ವಿಶ್ವಕಪ್ ಟೂರ್ನಿ ವೇಳೆ ಗಾಯಾಳು ವಿಜಯ್ ಶಂಕರ್ ಅವರ ಬದಲಾಗಿ ಟೀಮ್ ಇಂಡಿಯಾದ ಒತ್ತಾಯದ ಮೇರೆಗೆ ತಂಡ ಸೇರಿಕೊಂಡಿದ್ದ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಯಿಂದ ಹೊರಗಿಟ್ಟಿದ್ದೇಕೆ ಎಂಬುದನ್ನು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ವಿವರಿಸಿದ್ದಾರೆ.
ಅಂದಹಗಾಗೆ ಮಯಾಂಕ್ ಅಗರ್ವಾಲ್ ಅವರನ್ನು ಇದೀಗ ತಂಡದಿಂದ ಕೈಬಿಟ್ಟಿರುವುದು ಅಷ್ಟೇನು ಅಚ್ಚರಿ ತಂದಿಲ್ಲ ಆದರೆ ಅಂಬಾಟಿ ರಾಯುಡು ಬದಲಾಗಿ ಮಯಾಂಕ್ಗೆ ಸ್ಥಾನ ನಿಡಿದ್ದಾಗ ಎಲ್ಲರಿಗೂ ಎಚ್ಚರಿ ಎದುರಾಗಿತ್ತು.
"ಯಾವುದೇ ಸರಣಿ ಅಥವಾ ಟೂರ್ನಿ ಮಧ್ಯೆ ನಾನು ಪತ್ರಿಕಾಗೋಷ್ಠಿ ನಡೆಸುವುದಿಲ್ಲ. ಇದರಿಂದಾಗಿ ಹಲವು ಊಹಾಪೋಹಗಳು ತಲೆಯೆತ್ತಿವೆ. ಧವನ್ ಗಾಯಗೊಂಡಾಗ ತಂಡದಲ್ಲಿ ಈಗಾಗಲೇ ಕೆ.ಎಲ್ ರಾಹುಲ್ ಬದಲಿ ಆರಂಭಿಕರಾಗಿದ್ದರು. ಇನ್ನು ತಂಡದ ಅಗ್ರ ಕ್ರಮಾಂಕದಲ್ಲಿ ಎರಡಗೈ ಬ್ಯಾಟರ್ನ ಅಗತ್ಯವಿದ್ದ ಕಾರಣ ಪಂತ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗೆ ಆರಂಭಿಕನ ಸ್ಥಾನದಲ್ಲಿ ಅವಕಾಶ ನೀಡಿದ್ದೇಕೆ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಬಳಿಕ ಆಲ್ರೌಂಡರ್ ವಿಜಯ್ ಶಂಕರ್ ಅವರ ಬದಲಾಗಿ ಆರಂಭಿಕ ಬ್ಯಾಟ್ಸ್ಮನ್ ಆಯ್ಕೆ ಮಾಡಿದ್ದೇಕೆ ಎಂಬ ಪ್ರಶಸ್ನೆಯೂ ಕಾಡಿತ್ತು," ಎಂದು ಪ್ರಸಾದ್ ಹೇಳಿದ್ದಾರೆ.
"ಶಂಕರ್ ಗಾಯಗೊಂಡ ಸಂದರ್ಭದಲ್ಲಿ ಕೆ.ಎಲ್ ರಾಹುಲ್ ಕೂಡ ಕ್ಷೇತ್ರ ರಕ್ಷಣೆ ವೇಳೆ ಗಾಯಕ್ಕೆ ತುತ್ತಾಗಿದ್ದರು. ರಾಹುಲ್ ಆಡುತ್ತಾರೆಯೇ ಇಲ್ಲವೇ ಎಂಬ ಗುಮಾನಿಯಿತ್ತು. ಹೀಗಾಗಿ ಬದಲಿ ಆರಂಭಿಕ ಬ್ಯಾಟ್ಸ್ಮನ್ ಅಗತ್ಯವಿದ್ದರಿಂದ ಮಯಾಂಕ್ಗೆ ಬುಲಾವ್ ನೀಡಲಾಯಿತು," ಎಂದು ಮಯಾಂಕ್ ಅಗರ್ವಾಲ್ ಆಯ್ಕೆ ಹಿಂದಿನ ಗುಟ್ಟನ್ನು ಪ್ರಸಾದ್ ಬಿಚ್ಚಿಟ್ಟಿದ್ದಾರೆ.
ಇದೀಗ ಟೀಮ್ ಇಂಡಿಯಾದ ಎಂದಿನ ಓಪನರ್ ಶಿಖರ್ ಧವನ್ ಗಾಯದಿಂ ಚೇತರಿಸಿ ತಂಡಕ್ಕೆ ಮರಳಿದ ಹಿನ್ನಲೆಯಲ್ಲಿ ಸಹಜವಾಗಿಯೇ ಮಯಾಂಕ್ ಅಗರ್ವಾಲ್ ಸೀಮಿತ ಓವರ್ಗಳ ತಂಡದಿಂದ ಹೊರಬಿದ್ದಿದ್ದಾರೆ. ಇದೇ ವೇಳೆ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಬೆನ್ನು ನೋವಿನಿಂದ ಚೇತರಿಸದ ಕಾರಣ ಅವರ ಸ್ಥಾನದಲ್ಲಿ ಟೆಸ್ಟ್ ತಂಡದಲ್ಲಿ ಮಯಾಂಕ್ ತಮ್ಮ ಆಟ ಮುಂದುವರಿಸಲಿದ್ದು, ಕೆರಿಬಿಯನ್ ನಾಡಿಗೂ ಪ್ರಯಾಣ ಬೆಳೆಸಲಿದ್ದಾರೆ.
"ಭಾರತ 'ಎ' ತಂಡಗಳ ಸರಣಿಯನ್ನು ನೀವು ಗಮನಿಸಿದರೆ ಮಯಾಂಕ್ 4 ಪಂದ್ಯಗಳಲ್ಲಿ ಎರಡು ಶತಕಗಳನ್ನು ಒಳಗೊಂಡ 287 ರನ್ಗಳನ್ನು ಗಳಿಸಿದ್ದಾರೆ. ಅದರಲ್ಲೂ ಲೈಸ್ಟರ್ಶೈರ್ ವಿರುದ್ಧ ಗಳಿಸಿದ 151 ರನ್ಗಳನ್ನು ಮರೆಯುವಂತಿಲ್ಲ. ಈ ಸರಣಿಯನ್ನೂ ಜೂನ್ ಮತ್ತು ಜುಲೈ ಅವಧಿಯಲ್ಲಿ ಆಡಿಸಲಾಗಿತ್ತು. ಹೀಗಾಗಿ ಬದಲಿ ಆರಂಭಃಇಕ ಆಟಗಾರನಾಗಿ ಮಯಾಂಕ್ ಉತ್ತಮ ಆಯ್ಕೆ ಆಗಿದ್ದರು," ಎಂದು ಪ್ರಸಾದ್ ವಿವತಿಸಿದ್ದಾರೆ.