
ಕರ್ನಾಟಕದ ಕ್ರಿಕೆಟರ್, ಭಾರತ ತಂಡದ ಆಟಗಾರ ಪ್ರಸಿದ್ಧ್ ಕೃಷ್ಣ ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡಿದ್ದು, ಸುದೀರ್ಘ ವಿಶ್ರಾಂತಿಯ ಬಳಿಕ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಕ್ರಿಕೆಟ್ಗೆ ಮರಳುವ ಬಗ್ಗೆ ಸೂಚನೆ ನೀಡಿದ್ದಾರೆ.
2022ರ ಸೆಪ್ಟೆಂಬರ್ನಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ ಪ್ರಸಿದ್ಧ್ ಕೃಷ್ಣ ಸದ್ಯ ಚೇತರಿಕೆಯ ಹಾದಿಯಲ್ಲಿದ್ದು, ಶೀಘ್ರದಲ್ಲೇ ಕ್ರಿಕೆಟ್ ಬರುತ್ತೇನೆ ಎಂದು ಹೇಳಿದ್ದಾರೆ. ಫೆಬ್ರವರಿ 16ರಂದು ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಆಸ್ಪತ್ರೆಯಲ್ಲಿರುವ ಫೋಟೊಗಳನ್ನು ಹಂಚಿಕೊಂಡಿರುವ ಅವರು, "ಸಾಕಷ್ಟು ಕ್ರಿಕೆಟ್ನಿಂದ ಹೊರಗುಳಿದಿದ್ದಕ್ಕೆ ವಿಷಾದವಿದೆ, ಶೀಘ್ರದಲ್ಲೇ ಹಿಂದಿರುಗುತ್ತೇನೆ" ಎಂದು ಬರೆದುಕೊಂಡಿದ್ದಾರೆ.
2022ರ ಸೆಪ್ಟೆಂಬರ್ನಲ್ಲಿ ನ್ಯೂಜಿಲೆಂಡ್ ಎ ವಿರುದ್ಧ ಭಾರತ ಎ ತಂಡದ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಗೆ ಮೊದಲು ಪ್ರಸಿದ್ಧ್ ಕೃಷ್ಣ ಬೆನ್ನುನೋವಿಗೆ ಒಳಗಾಗಿದ್ದರು. ನಂತರ ಟೂರ್ನಿಯಿಂದ ಅವರು ಹೊರಗುಳಿಯಬೇಕಾಯಿತು. ಅವರ ಬದಲಿಗೆ ಆಲ್ರೌಂಡರ್ ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಪಡೆದಿದ್ದರು.

ಉತ್ತಮ ಪ್ರದರ್ಶನ ನೀಡುತ್ತಿದ್ದ ಪ್ರಸಿದ್ಧ್
ಟೀಂ ಇಂಡಿಯಾ ಪರವಾಗಿ ಕೆಲವೇ ಪಂದ್ಯಗಳನ್ನಾಡಿದ್ದರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. ಉತ್ತಮ ಲೈನ್ ಮತ್ತು ಲೆಂತ್ನಲ್ಲಿ ಬೌಲಿಂಗ್ ಮಾಡುತ್ತಿದ್ದ ಅವರು ತಂಡದಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಸಮಯದಲ್ಲೇ ಗಾಯದ ಸಮಸ್ಯೆಗೆ ತುತ್ತಾದರು.
2022ರ ಆಗಸ್ಟ್ನಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಕೊನೆಯ ಬಾರಿಗೆ ಭಾರತ ತಂಡಕ್ಕಾಗಿ ಆಡಿದ್ದರು. 26 ವರ್ಷದ ಪ್ರಸಿದ್ಧ್ ಕೃಷ್ಣ ಭಾರತದ ಪರವಾಗಿ ಕೇವಲ 14 ಏಕದಿನ ಪಂದ್ಯಗಳನ್ನಾಡಿದ್ದು 25 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತಲಾ ನಾಲ್ಕು ವಿಕೆಟ್ಗಳನ್ನು ಪಡೆದುಕೊಂಡಿದ್ದರು.
ಸದ್ಯ ಗಾಯದಿಂದ ಚೇತರಿಸಿಕೊಂಡಿರುವ ಅವರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ವಾಪಸಾಗುವ ಉತ್ಸಾಹದಲ್ಲಿದ್ದಾರೆ. ಏಕದಿನ ವಿಶ್ವಕಪ್ ಇರುವುದರಿಂದ ಆಯ್ಕೆದಾರರು ಕೂಡ ಪ್ರಸಿದ್ಧ್ ಆಟದ ಮೇಲೆ ಗಮನ ಹರಿಸಲಿದ್ದಾರೆ.

ರಾಜಸ್ಥಾನ ರಾಯಲ್ಸ್ ಪರವಾಗಿ ಕಣಕ್ಕೆ
2023ರ ಐಪಿಎಲ್ನಲ್ಲಿ ಪ್ರಸಿದ್ಧ್ ಕೃಷ್ಣ ರಾಜಸ್ಥಾನ ರಾಯಲ್ಸ್ ಪರವಾಗಿ ಆಡಲಿದ್ದಾರೆ. ಐಪಿಎಲ್ಗೆ ಮುನ್ನ ಅವರು ಗುಣಮುಖರಾಗುತ್ತಾರೆ ಎನ್ನುವ ಭರವಸೆಯಿಂದಲೇ ರಾಜಸ್ಥಾನ ರಾಯಲ್ಸ್ ಅವರನ್ನು 10 ಕೋಟಿ ರುಪಾಯಿಗಳಿಗೆ ತಂಡದಲ್ಲಿ ಉಳಿಸಿಕೊಂಡಿತ್ತು.
2022ರ ಐಪಿಎಲ್ನಲ್ಲಿ ಪ್ರಸಿದ್ಧ್ ಕೃಷ್ಣ 17 ಪಂದ್ಯಗಳಲ್ಲಿ 19 ವಿಕೆಟ್ ಪಡೆದು ಮಿಂಚಿದ್ದರು. ರಾಜಸ್ತಾನ ರಾಯಲ್ಸ್ ಕಳೆದ ಬಾರಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು. ಇದುವರೆಗೂ 51 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ಪ್ರಸಿದ್ಧ್ ಕೃಷ್ಣ 8.92 ಎಕಾನಮಿಯಲ್ಲಿ 49 ವಿಕೆಟ್ ಪಡೆದುಕೊಂಡಿದ್ದಾರೆ.