
ಹೊಸದಿಲ್ಲಿ, ಜುಲೈ 18: ಇತ್ತೀಚೆಗಷ್ಟೇ ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ನ ಹನ್ನೆರಡನೇ ಆವೃತ್ತಿಯ ಟೂರ್ನಿಯಲ್ಲಿ ಭಾರತ ತಂಡಕ್ಕೆ ಕಾಡಿದ್ದು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ಯಾರೆಂಬುದು. ಇದೀಗ ತಂಡದ ಆಯ್ಕೆ ಸಮಿತಿಗೆ ಮತ್ತೊಂದು ತಲೆ ಬಿಸಿ ಎದುರಾಗಿದ್ದು, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್ಗಾಗಿ ಹುಡುಕಾಟ ನಡೆಸುವಂತಾಗಿದೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ ಮೊದಲು ಸೀಮಿತ ಓವರ್ಗಳ ಸರಣಿಗಳನ್ನು ಆಡಲಿದ್ದು ತಲಾ ಮೂರು ಟಿ20-ಐ ಮತ್ತು ಏಕದಿನ ಪಂದ್ಯಗಳಲ್ಲಿ ಪೈಪೋಟಿ ನಡೆಸಲಿದೆ. ಬಳಿಕ ಆ.22ಕ್ಕೆ ಮೊದಲ ಟೆಸ್ಟ್ ಶುರುವಾಗಲಿದೆ.
ಅಂದಹಾಗೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನು ಇಕದೇ ಶುಕ್ರವಾರ ಪ್ರಕಟಿಸುವ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾದ ಆಯ್ಕೆ ಸಮಿತಿಯಿದ್ದು, ಟೆಸ್ಟ್ ಕ್ರಿಕೆಟ್ನ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಸಂಫೂರ್ಣವಾಗಿ ಫಿಟ್ ಇಲ್ಲದೇ ಇರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದೇ ವೇಳೆ 19 ವರ್ಷದ ಮುಂಬೈಕರ್ ಸೊಂಟದ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಲ್ಲ ಎಂಬ ಸಂಗತಿಯನ್ನು ಖುದ್ದಾಗಿ ಒಪ್ಪಿಕೊಂಡಿದ್ದಾರೆ.
"ಸದ್ಯಕ್ಕೆ ನಾನು ಸಂಪೂರ್ಣ ಫಿಟ್ ಆಗಿಲ್ಲ, ಆದರೆ ಶೀಘ್ರದಲ್ಲೇ ಫಿಟ್ನೆಸ್ಗೆ ಮರಳುವ ವಿಶ್ವಾಸವಿದೆ. ಮೇ ತಿಂಗಳಿನಲ್ಲಿ ನಡೆದ ಮುಂಬೈ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ವೇಳೆ ಎದುರಿಸಿದ ಸೊಂಟದ ನೋವಿನ ಗಾಯದ ಸಮಸ್ಯೆಗೆ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದೇನೆ. ವೆಸ್ಟ್ ಇಂಡೀಸ್ ಪ್ರವಾಸ ಆಗಸ್ಟ್ನಲ್ಲಿ ಆರಂಭವಾಗಲಿದ್ದು ಅದಕ್ಕಿನ್ನೂ ಬಹಳಷ್ಟು ಸಮಯವಿದೆ. ಇದಕ್ಕೆ ಸೂಕ್ತ ಸಮಯದಲ್ಲಿ ಅಭ್ಯಾಸ ಆರಂಭಿಸಲಿದ್ದೇನೆ," ಎಂದು ಪೃಥ್ವಿ ಶಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇದೇ ವೇಳೆ ಪೃಥ್ವಿ ಶಾ ಅವರ ಗಾಯದ ಸಮಸ್ಯೆ ಕುರಿತಾಗಿ ಕಿಂಚಿತ್ತೂ ಬಾಯ್ಬಿಡದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ವಿಚಾರವಾಗಿಯೂ ಎಲ್ಲಾ ಸಂಗತಿಗಳನ್ನು ಗೌಪ್ಯವಾಗಿರಿಸಿದೆ.
ಇದೇ ವೇಳೆ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಸಂದರ್ಭದಲ್ಲಿ ಎಡಗೈನ ಹೆಬೆಬರಳು ಮುರಿದುಕೊಂಡಿದ್ದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಪುನಶ್ಚೇತನದಲ್ಲಿ ಪಾಲ್ಗೊಂಡಿದ್ದಾರೆ.
"ಸಂಪೂರ್ಣ ಫಿಟ್ನೆಸ್ಗೆ ಮರಳಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಇದರ ನಿರ್ದಿಷ್ಟ ದಿನಾಂಕ ನೀಡಲಾರೆ. ನಾನು ಸಂಪೂರ್ಣ ಫಿಟ್ ಆದ ಬಳಿಕವಷ್ಟೇ ಆಯ್ಕೆದಾರರು ಮತ್ತು ಮ್ಯಾನೇಜ್ಮೆಂಟ್ ಎದುರು ಮಾತನಾಡುತ್ತೇನೆ. ಈ ಮೂಲಕ ಮುಂದೇನು ಮಾಡಬೇಕೆಂಬುದನ್ನು ಆಲೋಚಿಸಲಿದ್ದೇವೆ," ಎಂದು ಶಾ ತಿಳಿಸಿದ್ದಾರೆ.
ಇನ್ನು ಇದೇ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆಯೂ ಅಭ್ಯಾಸ ಪಂದ್ಯದಲ್ಲಿ ಪಾದದ ಗಾಯದ ಸಮಸ್ಯೆಗೆ ತುತ್ತಾಗಿದ್ದ 19 ವರ್ಷದ ಬ್ಯಾಟ್ಸ್ಮನ್ ಪೃಥ್ವಿ ಸರಣಿಯಿಂದಲೇ ಹೊರಬಿದಿದ್ದರು. ಪರಿಣಾಮ ಕರ್ನಾಟಕದ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ಗೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಲಭ್ಯವಾಗಿತ್ತು.
ಭಾರತ ತಂಡದ ಪರ ಈವರೆಗೆ ಎರಡು ಟೆಸ್ಟ್ ಪಂದ್ಯಗಳನ್ನು ಆಡಿರುವ ಪೃಥ್ವಿ ಶಾ, ತಲಾ ಶತಕ ಮತ್ತು ಅರ್ಧಶತಕ ದಾಖಲಿಸಿ ಗಮನ ಸೆಳೆದಿದ್ದು, ತಾವು ಭವಿಷ್ಯದ ತಾರೆ ಎಂಬುದನ್ನು ಸೂಚಿಸಿದ್ದರು.