ಮೊಹಮ್ಮದ್ ಶಮಿ ಇತ್ತೀಚಿನ ದಿನಗಳಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಟೀಮ್ ಇಂಡಿಯಾಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಇತ್ತೀಚೆಗೆ ಭಾರತದ ವೇಗಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಶಮಿ ಭಾರತದ ಸೈನಿಕರ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ.
ಮೊಹಮ್ಮದ್ ಶಮಿ ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಭರ್ಜರಿಯಾಗಿ ಪ್ರದರ್ಶನ ನೀಡಿದ್ದರು. ಬಾಂಗ್ಲಾದೇಶ ವಿರುದ್ಧ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದ ಬಳಿಕ ಆಡುವ ಅವಕಾಶವನ್ನು ಪಡೆದ ಶಮಿ, ಹಿಂತಿರುಗಿ ನೋಡಲೇ ಇಲ್ಲ.

ಸಿಕ್ಕ ಅವಕಾಶದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಶಮಿ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಈಗ ಅವರು ಭಾರತೀಯ ಸೈನಿಕರನ್ನು ಭೇಟಿಯಾದರು. ಸೈನಿಕರನ್ನು ಭೇಟಿಯಾದ ಚಿತ್ರಗಳನ್ನು ಶಮಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಶಮಿ ತಮ್ಮ ಅಧಿಕೃತ ಸಾಮಾಜಿಕ ತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಸೈನಿಕರೊಂದಿಗೆ ನಿಂತು, ಮಾತನಾಡುವ ಮತ್ತು ಚಹಾ ಕುಡಿಯುತ್ತಿರುವುದನ್ನು ಕಾಣಬಹುದು. ಸಾಮಾಜಿಕ ತಾಣದಲ್ಲಿ ಶಮಿ, "ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಮ್ಮ ಸೈನಿಕರ ಗೌರವ, ಧೈರ್ಯ ಮತ್ತು ಬದ್ಧತೆಗೆ ನಾನು ವಂದಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
2023ರ ಏಕದಿನ ವಿಶ್ವಕಪ್ ಬಳಿಕ ಶಮಿ ಮೈದಾನಕ್ಕೆ ಮರಳಲು ಸಾಧ್ಯವಾಗಿಲ್ಲ. ಗಾಯದ ಸಮಸ್ಯೆಯಿಂದಾಗಿ ಅವರು ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಶಮಿ, ಬಳಿಕ ಫಿಟ್ ಆಗದ ತಂಡದಿಂದ ಹೊರಗುಳಿಯಬೇಕಗಿತ್ತು. ಇದೀಗ ಬಿಸಿಸಿಐ ಕೂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಇದರಲ್ಲಿ ಶಮಿ ಕೂಡ ಸೇರಿರಲಿಲ್ಲ.
2023ರ ಏಕದಿನ ವಿಶ್ವಕಪ್ನಲ್ಲಿ ಶಮಿ ಕೇವಲ 7 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಭಾರತದ ವೇಗಿ 10.71ರ ಅತ್ಯುತ್ತಮ ಸರಾಸರಿಯಲ್ಲಿ 24 ವಿಕೆಟ್ಗಳನ್ನು ಪಡೆದಿದ್ದರು. ಈ ಅವಧಿಯಲ್ಲಿ, ಅವರು 3 ಬಾರಿ ಐದು ವಿಕೆಟ್ಗಳನ್ನು ಮತ್ತು ಒಂದು ಬಾರಿ ನಾಲ್ಕು ವಿಕೆಟ್ಗಳನ್ನು ಪಡೆದಿದ್ದಾರೆ.