

ನವದೆಹಲಿ, ಫೆಬ್ರವರಿ 20: ಪುಲ್ವಾಮಾ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಕ್ಕೆ ಪ್ರತಿರೋಧವಾಗಿ ಮುಂಬರಲಿರುವ ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧ ಆಡದಿರುವ ಸಾಧ್ಯತೆಯಿದೆ. ಆದರೆ ಬಿಸಿಸಿಐ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.
ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪುಲ್ವಾಮಾ ಎಂಬಲ್ಲಿ ನಡೆದ ಉಗ್ರರ ದಾಳಿಗೆ ಸುಮಾರು 40ಕ್ಕೂ ಹೆಚ್ಚು ಭಾರತೀಯ ಯೋಧರು ಮೃತರಾಗಿದ್ದರು. ದಾಳಿಯಲ್ಲಿ ಪಾಕ್ ಕೈವಾಡವಿದೆ ಎನ್ನಲಾಗಿರುವುದರಿಂದ ದಾಳಿಯ ಬಿಸಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ)ಗೂ ತಟ್ಟಿದೆ.
'ವಿಶ್ವಕಪ್ ಸಮೀಪವಾದಾಗ ಸ್ಪಷ್ಟ ಚಿತ್ರಣ ಲಭಿಸಲಿದೆ. ಅಂತಿಮ ನಿರ್ಧಾರ ತಾಳಲು ಇನ್ನೊಂದಿಷ್ಟು ಸಮಯ ಬೇಕಿದೆ. ಈ ಬಗ್ಗೆ ಐಸಿಸಿ ಏನೂ ಮಾಡುವಂತಿಲ್ಲ. ಆದರೆ ನಾವು ಪಾಕಿಸ್ತಾನ ವಿರುದ್ಧ ಆಡಬಾರದು ಎಂಬ ನಿರ್ಧಾರಕ್ಕೆ ಸರ್ಕಾರ ಬಂದರೆ ನಾವು ಖಂಡಿತಾ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಕಣಕ್ಕಿಳಿಯಲಾರೆವು' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಪುಲ್ವಾಮದಲ್ಲಿ ಸಂಚರಿಸುತ್ತಿದ್ದ ಭಾರತೀಯ ಸಿಆರ್ಪಿಎಫ್ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದರಲ್ಲಿ 40ಕ್ಕೂ ಮಿಕ್ಕಿ ಯೋಧರು ಮೃತರಾಗಿದ್ದರು. ಪಾಕಿಸ್ತಾನ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಮಾದನಾ ಸಂಘಟನೆಯಾದ ಜೈಷ್ -ಮೊಹಮ್ಮದ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.