
ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಟಿ20 ವಿಶ್ವಕಪ್ ಬಳಿಕ ತಮ್ಮ ಜವಾಬ್ದಾರಿ ಮುಗಿಸಿದ್ರು. ಹೊಸ ಕೋಚ್ ರಾಹುಲ್ ದ್ರಾವಿಡ್ ಈಗಾಗಲೇ ಟೀಂ ಇಂಡಿಯಾ ನೇತೃತ್ವವಹಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಹಾಗೂ ಟಿ20 ಸರಣಿಯು ಇವರ ಮಾರ್ಗದರ್ಶನದಡಿಯಲ್ಲಿ ಯಶಸ್ವಿಯಾಗಿ ಮುಗಿದಿದೆ. ಆದ್ರೆ ಇಷ್ಟೆಲ್ಲಾ ಆದ್ಮೇಲೆ ಮಾಜಿ ಕೋಚ್ ರವಿಶಾಸ್ತ್ರಿ ವಿರುದ್ಧ ಆರೋಪ ಕೇಳಿಬಂದಿದೆ.
ಭಾರತದ ಏಸ್ ಸ್ಪಿನ್ನರ್ ಮತ್ತು ಆಲ್ರೌಂಡರ್ ರವಿಚಂದ್ರನ್ ಅಶ್ವಿನ್, ರವಿಶಾಸ್ತ್ರಿಯ ಒಂದು ಹೇಳಿಕೆಯ ಕುರಿತು ಸಾಕಷ್ಟು ಮನನೊಂದು ಮಾತನಾಡಿದ್ದಾರೆ. 2019ರ ಸಿಡ್ನಿ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ವಿಕೆಟ್ಗಳನ್ನು ಕಬಳಿಸಿದ ನಂತರ ಕುಲ್ದೀಪ್ ಯಾದವ್, ಭಾರತದ ಪ್ರಮುಖ ವಿದೇಶಿ ಸ್ಪಿನ್ನರ್ ಎಂದು ಆಗಿನ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದರು. ಈ ಮಾತು ಕೇಳಿದಾಗ ನನಗೆ ಬಸ್ ಅಡಿಯಲ್ಲಿ ಎಸೆಯಲ್ಪಟ್ಟಂತಾಯಿತು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಟೆಸ್ಟ್ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರ್. ಅಶ್ವಿನ್ ಪ್ರತಿ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ ಪಡೆದರು. ಅದಾಗಲೇ ನೋವಿನಿಂದ ಬಳಲುತ್ತಿದ್ದ ಅಶ್ವಿನ್ ಬಹಳ ಕಷ್ಟದಲ್ಲಿ ಆಡಿದ್ದರು ಎನ್ನಲಾಗಿದೆ.
ಸಿಡ್ನಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ನಲ್ಲಿ ಮೊದಲ ಎರಡು ದಿನಗಳಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದ ನಂತರ ಮಳೆಯಿಂದಾಗಿ ಸಂಪೂರ್ಣ ಪಂದ್ಯ ಹಾಳಾಯಿತು. ಇಷ್ಟಾದರೂ ಭಾರತವು 2-1ರ ಅಂತರದಲ್ಲಿ ಸರಣಿ ಗೆಲುವು ಸಾಧಿಸಿತು. ಈ ಮೂಲಕ ಭಾರತವು ಇಡೀ ಏಷ್ಯಾದಲ್ಲಿಯೇ ಆಸ್ಟ್ರೇಲಿಯಾವನ್ನು ಅವರ ಸ್ವಂತ ನೆಲದಲ್ಲಿ ಸೋಲಿಸಿದ ಮೊದಲ ತಂಡವಾಗಿ ಐತಿಹಾಸಿಕ ಸಾಧನೆ ಮಾಡಿತು. ಇದಾಗಿ ಎರಡು ವರ್ಷಗಳ ನಂತರ ಭಾರತ 2021 ರಲ್ಲಿ ಈ ಸಾಧನೆಯನ್ನು ಮತ್ತೆ ಮಾಡುವ ಮೂಲಕ ಪ್ರಬಲ ಹೆಜ್ಜೆಯನ್ನಿಟ್ಟಿತು.
ಆಸ್ಟ್ರೇಲಿಯದಲ್ಲಿ ಸ್ಪಿನ್ನರ್ ಆಗಿ ಐದು ವಿಕೆಟ್ಗಳನ್ನು ಕಬಳಿಸುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿತ್ತು. ಹೀಗಾಗಿಯೇ ಕುಲ್ದೀಪ್ ಯಾದವ್ ಐದು ವಿಕೆಟ್ ಪಡೆದಿದ್ದರ ಕುರಿತು ನಿಜವಾಗಿಯೂ ಸಂತೋಷವಾಗಿದ್ದೆ. ಇದರ ಜೊತೆಗೆ ಶಾಸ್ತ್ರಿ ಅವರನ್ನು ಹೆಚ್ಚು ಗೌರವಿಸುತ್ತಾರೆ ಎಂದು ಅಶ್ವಿನ್ ಹೇಳಿದರು.
"ನಾನು ರವಿ ಭಾಯ್ ಅವರನ್ನು ತುಂಬಾ ಗೌರವಿಸುತ್ತೇನೆ. ಆದ್ರೆ ರವಿ ಬಾಯ್ ಹೇಳಿದ ಆ ಕ್ಷಣದಲ್ಲಿ, ನಾನು ಪುಡಿಪುಡಿಯಾಗಿದ್ದೆನು. ಕುಲ್ದೀಪ್ ಯಾದವ್ ಸಾಧನೆಗೆ ಸಂತೋಷಪಟ್ಟಿದ್ದೇನೆ. ಆದ್ರೆ ನಾನು ಐದು ವಿಕೆಟ್ ಗಳಿಸಲು ಸಾಧ್ಯವಾಗಲಿಲ್ಲ. ನಾನು ಚೆನ್ನಾಗಿ ಬೌಲಿಂಗ್ ಮಾಡಿದರೂ ಫೈವ್-ಫಾರ್ನೊಂದಿಗೆ ಕೊನೆಗೊಂಡಿಲ್ಲ. ಆದರೂ ಕುಲ್ದೀಪ್ ಸಾಧನೆ ಸಂತೋಷವಾಗಿತ್ತು, ಆಸ್ಟ್ರೇಲಿಯಾ ವಿರುದ್ಧ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿತು'' ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಕುಲ್ದೀಪ್ ಯಾದವ್ ಲೀಡಿಂಗ್ ವಿದೇಶಿ ಸ್ಪಿನ್ನರ್ ಎಂದು ರವಿಶಾಸ್ತ್ರಿಯವರ ಹೇಳಿಕೆಯು ಅಶ್ವಿನ್ ಅವರನ್ನು ತುಂಬಾ ನೋವಿಸಿದೆಯಂತೆ. ಹೀಗಾಗಿ ಪಂದ್ಯ ಮುಗಿದ ಬಳಿಕ ಹೋಟೆಲ್ ರೂಂಗೆ ಹಿಂತಿರುಗಿದ ಬಳಿಕ ಹೆಂಡತಿಯೊಂದಿಗೆ ಫೋನ್ನಲ್ಲಿ ಮಾತನಾಡಿದೆ, ತನ್ನ ನೋವನ್ನು ತೋಡಿಕೊಂಡೆ ಎಂದು ರವಿಚಂದ್ರನ್ ಅಶ್ವಿನ್ ಹಳೆಯ ನೆನಪುಗಳನ್ನು ಇಎಸ್ಪಿಎನ್ ಕ್ರಿಕ್ಇನ್ಫೋ ಜೊತೆಗೆ ಮೆಲುಕು ಹಾಕಿದ್ದಾರೆ.
ಅಶ್ವಿನ್ ಅವರು ತಮ್ಮ ಜೀವನದಲ್ಲಿ ಕಠಿಣ ಹಂತವನ್ನು ಎದುರಿಸಿದ್ದು, ಅವರನ್ನು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ರೀಪ್ಲೇಸ್ ಮಾಡಿದಾಗ ಅದ್ರಿಂದ ಹೊರಬರಲು ಸಾಕಷ್ಟು ಸಮಯ ಬೇಕಾಯಿತು ಎಂದು ಹೇಳಿದ್ದಾರೆ. ಯಾರಾದರೂ ಜೀವನದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿರುವಾಗ ಮತ್ತು ಅದರಿಂದ ಹೊರಬರಲು ಬೇರೊಬ್ಬರ ಪ್ರೇರಣೆ ಅಗತ್ಯ ಎಂದು ಹೇಳಿದ್ದಾರೆ.
2011ರಿಂದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ಆರ್. ಅಶ್ವಿನ್ ಕೂಡ ಒಬ್ಬರಾಗಿದ್ದಾರೆ. ಮೊದಲ ಐದು ಸ್ಥಾನಗಳಲ್ಲಿ ಮೂವರು ಸ್ಪಿನ್ನರ್ಸ್ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಆರ್ ಅಶ್ವಿನ್ ಸ್ಥಾನ ಪಡೆದಿದ್ದು, 81 ಟೆಸ್ಟ್ ಪಂದ್ಯಗಳಲ್ಲಿ 427 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ವಿಶ್ವಕಪ್ ವಿಜೇತ ಕಪಿಲ್ ದೇವ್ ಅವರ ದಾಖಲೆ ಮುರಿಯಲು ಇನ್ನು ಏಳು ವಿಕೆಟ್ಗಳಷ್ಟೇ ಬಾಕಿ ಉಳಿದಿದೆ.