
ಹ್ಯಾಂಪ್ಶೈರ್ ಪರ ಆಡಲಿರುವ ಭಾರತ ಟೆಸ್ಟ್ ತಂಡದ ಉಪನಾಯಕ
ಮುಂಬಯಿ, ಏಪ್ರಿಲ್ 19: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮೇ, ಜೂನ್ ಮತ್ತು ಜುಲೈನಲ್ಲಿ ಹ್ಯಾಂಪ್ಶೈರ್ ಪರ ಕೌಂಟಿ ಕ್ರಿಕೆಟ್ ಆಡಲು ಅನುಮತಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಶುಕ್ರವಾರ ಮನವಿ ಮಾಡಿದ್ದಾರೆ.
ರಹಾನೆ ಬರೆದಿರುವ ಮನವಿ ಪತ್ರವನ್ನು ಬಿಸಿಸಿಐ ಸುಪ್ರೀಂ ನೇಮಿತ ಬಿಸಿಸಿಐ ಆಡಳಿತ ಸಮಿ(ಸಿಒಎ)ಗೆ ವರ್ಗಾಯಿಸಿದೆ. ಬಿಸಿಸಿಐನ ಸಿಇಒ ರಾಹುಲ್ ಜೊಹ್ರಿ ಈ ಪತ್ರವನ್ನು ಸಿಒಎಗೆ ವರ್ಗಾಯಿಸಿದ್ದಾರೆ. ಅಜಿಂಕ್ಯ ರಹಾನೆ ಸದ್ಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಮೇ 30ರಂದು ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿರುವ ರಹಾನೆ, ಈ ಅವಧಿಯಲ್ಲಿ ಕೌಂಟಿ ಕ್ರಿಕೆಟ್ ಆಡುವ ಮೂಲಕ ತಮ್ಮ ತಂತ್ರಗಾರಿಕೆಯಲ್ಲಿ ಸುಧಾರಣೆ ತಂದುಕೊಳ್ಳಲು ಮುಂದಾಗಿದ್ದಾರೆ.
ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಕಳೆದ ವರ್ಷ ಸರ್ರೆ ಕೌಂಟಿ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ತಂಡದ ಉಪ ನಾಯಕ ಕೂಡ ಅದೇ ಮಾರ್ಗ ಅನುಸರಿಸುತ್ತಿದ್ದಾರೆ.
"ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ ಅವರಿಗೆ ಅನುಮತಿ ಸಿಕ್ಕಿದ ಮೇಲೆ ಅಜಿಂಕ್ಯ ರಹಾನೆ ಅವರಿಗೂ ಅನಮತಿ ಲಭ್ಯವಾಗಲಿದೆ. ವಿಶ್ವಕಪ್ನಲ್ಲಿ ರಹಾನೆ ಪಾಲ್ಗೊಳ್ಳದೇ ಇರುವ ಕಾರಣ, ಈ ಅವಧಿಯಲ್ಲಿ ಅವರು ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡುವಂತಿರುವುದಿಲ್ಲ,'' ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ವೇಗಿ ಇಶಾಂತ್ ಶರ್ಮಾ ಕೂಡ ಕೌಂಟಿ ಕ್ರಿಕೆಟ್ನಲ್ಲಿ ಪಾಲ್ಗೊಂಡು ಸಸೆಕ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲೆಸ್ಪಿ ಅವರ ಮಾರ್ಗದರ್ಶನದಲ್ಲಿ ಇಶಾಂತ್ ಮತ್ತಷ್ಟು ಪ್ರಬುದ್ಧ ಬೌಲರ್ ಆಗಿ ತಾಯ್ನಾಡಿಗೆ ಹಿಂದಿರುಗಿದ್ದರು.
ಅಜಿಂಕ್ಯ ರಹಾನೆ ಪ್ರಸಕ್ತ ಐಪಿಎಲ್ನಲ್ಲಿ 8 ಪಂದ್ಯಗಳಿಂದ 208 ರನ್ಗಳನ್ನು ಗಳಿಸಿದ್ದಾರೆ. ಆದರೆ, ರಾಜಸ್ಥಾನ್ ರಾಯಲ್ಸ್ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಅಷ್ಟೆ ಗೆದ್ದು ಅಂಕ ಪಟ್ಟಿಯಲ್ಲಿ ನಿರಾಶಾದಾಯಕ 7ನೇ ಸ್ಥಾನದಲ್ಲಿದೆ.