ಕೆಎಲ್ ರಾಹುಲ್ಗೆ ಮತ್ತೆ ನಾಯಕತ್ವ; ಸುಳಿವು ಕೊಟ್ಟ ಕೋಚ್ ರಾಹುಲ್ ದ್ರಾವಿಡ್

ಕಳೆದೊಂದು ತಿಂಗಳಿನಿಂದ ಸಾಕಷ್ಟು ದೊಡ್ಡ ಮಟ್ಟದ ಸುದ್ದಿ ಮಾಡಿದ ಮತ್ತು ಚರ್ಚೆಗಳಿಗೆ ಕಾರಣವಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೆಣಸಾಟಕ್ಕೆ ಜನವರಿ 23ರಂದು ಇತ್ತಂಡಗಳ ನಡುವೆ ನಡೆದ ಅಂತಿಮ ಏಕದಿನ ಪಂದ್ಯದ ಮೂಲಕ ತೆರೆಬಿದ್ದಿದೆ.
ಇನ್ನು ಜನವರಿ 23ರಂದು ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ 4 ರನ್ಗಳ ರೋಚಕ ಜಯವನ್ನು ಸಾಧಿಸಿತು. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಎಲ್ಲಾ ಪಂದ್ಯವನ್ನು ಗೆಲ್ಲುವುದರ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸಿ ಭಾರತ ತಂಡಕ್ಕೆ ವೈಟ್ ವಾಷ್ ಬಳಿದಿದೆ. ಇನ್ನು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವ ಮುನ್ನ ಈ ಬಾರಿ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳನ್ನು ಕೂಡ ಟೀಮ್ ಇಂಡಿಯಾ ಗೆಲ್ಲಲಿದೆ ಎಂಬ ನಿರೀಕ್ಷೆಗಳು ಹೆಚ್ಚಾಗಿದ್ದವು.
ಆದರೆ ಈ ನಿರೀಕ್ಷೆಯ ಹಂತವನ್ನು ಮುಟ್ಟುವಲ್ಲಿ ವಿಫಲವಾಗಿರುವ ಭಾರತ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳನ್ನು ಕೂಡ ಸೋತು ಮುಖಭಂಗಕ್ಕೆ ಒಳಗಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತ ನಂತರ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದರೆ, ಇದೇ ಮೊದಲ ಬಾರಿಗೆ ಭಾರತ ತಂಡವನ್ನು ಅಂತರರಾಷ್ಟ್ರೀಯ ಏಕದಿನ ಸರಣಿಯಲ್ಲಿ ನಾಯಕನಾಗಿ ಮುನ್ನಡೆಸಿದ ಕೆಎಲ್ ರಾಹುಲ್ ಭಾರೀ ಟೀಕೆಗಳಿಗೆ ಒಳಗಾಗಿದ್ದಾರೆ. ಹೌದು, ಗಾಯದ ಸಮಸ್ಯೆಯಿಂದ ರೋಹಿತ್ ಶರ್ಮಾ ಅಲಭ್ಯರಾದ ಕಾರಣ ಈ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ನಿರ್ವಹಿಸಿದ ಕೆಎಲ್ ರಾಹುಲ್ ಯಾವುದೇ ಪಂದ್ಯದಲ್ಲಿಯೂ ಯಶಸ್ಸನ್ನು ಕಾಣದೇ ನಿರಾಸೆ ಮೂಡಿಸಿದ್ದಾರೆ. ಹಾಗೂ ಇದಕ್ಕೂ ಮುನ್ನ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾಗ ಕೆಎಲ್ ರಾಹುಲ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಆ ಪಂದ್ಯವನ್ನೂ ಕೂಡ ಸೋತಿತ್ತು. ಹೀಗೆ ನಾಯಕನಾಗಿ ಮುನ್ನಡೆಸಿದ 4 ಪಂದ್ಯಗಳಲ್ಲಿಯೂ ಹಿನ್ನಡೆ ಅನುಭವಿಸಿರುವ ಕೆಎಲ್ ರಾಹುಲ್ ನಾಯಕತ್ವದ ಕುರಿತು ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು, ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಇದು ಆತನ ಆರಂಭವಷ್ಟೇ ಎಂದ ದ್ರಾವಿಡ್
ಕೆಎಲ್ ರಾಹುಲ್ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವವನ್ನು ನಿರ್ವಹಿಸಿದ್ದು, ಉತ್ತಮವಾಗಿಯೇ ತಂಡವನ್ನು ಮುನ್ನಡೆಸಿದ್ದಾನೆ ಎಂದು ಕೆ ಎಲ್ ರಾಹುಲ್ ಪರ ಬ್ಯಾಟ್ ಬೀಸಿರುವ ಕೋಚ್ ರಾಹುಲ್ ದ್ರಾವಿಡ್ ಮುಂದಿನ ದಿನಗಳಲ್ಲಿ ಆತ ನಾಯಕತ್ವ ನಿರ್ವಹಿಸುತ್ತಾ ಅನುಭವಿ ನಾಯಕನಾಗಲಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಹುಲ್ಗೆ ಮತ್ತೆ ನಾಯಕತ್ವ ಸಿಗುವುದರ ಕುರಿತು ಸುಳಿವು ನೀಡಿದ ರಾಹುಲ್ ದ್ರಾವಿಡ್
ನಾಯಕತ್ವವನ್ನು ನಿರ್ವಹಿಸಿ ಯಶಸ್ಸು ಸಾಧಿಸದೇ ವಿಫಲವಾಗಿರುವ ಕೆಎಲ್ ರಾಹುಲ್ ಪರ ಬ್ಯಾಟ್ ಬೀಸಿರುವ ರಾಹುಲ್ ದ್ರಾವಿಡ್ ಮತ್ತೆ ಕೆಎಲ್ ರಾಹುಲ್ ನಾಯಕತ್ವ ನಿರ್ವಹಿಸುವ ಕುರಿತು ಸುಳಿವು ನೀಡಿದ್ದಾರೆ. ಸದ್ಯ ಕಳಪೆ ಆರಂಭವನ್ನು ಪಡೆದುಕೊಂಡಿರುವ ಕೆಎಲ್ ರಾಹುಲ್ ಅವರಿಗೆ ಮತ್ತೆ ನಾಯಕತ್ವ ಸಿಗುವುದು ಅನುಮಾನ ಎಂಬ ಮಾತುಗಳು ಕ್ರಿಕೆಟ್ ಜಗತ್ತಿನಲ್ಲಿ ಹರಿದಾಡುತ್ತಿದ್ದು, ದ್ರಾವಿಡ್ ಮಾತ್ರ ಕೆಎಲ್ ರಾಹುಲ್ ಮತ್ತೆ ನಾಯಕನಾಗಲಿದ್ದಾರೆ ಎಂಬ ವಿಷಯವನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ರಾಹುಲ್ ಕುರಿತು ಮಾತನಾಡುವಾಗ ಮುಂದಿನ ದಿನಗಳಲ್ಲಿ ಆತ ನಾಯಕತ್ವವನ್ನು ನಿರ್ವಹಿಸುತ್ತಾ ಅನುಭವವನ್ನು ಪಡೆದುಕೊಂಡ ನಂತರ ಉತ್ತಮ ನಾಯಕ ಆಗಲಿದ್ದಾನೆ ಎಂದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ನಾಯಕತ್ವ ಮುಂದಿನ ದಿನಗಳಲ್ಲಿ ರಾಹುಲ್ ಕೈ ಸೇರುವುದು ಖಚಿತ ಎಂಬುದು ದ್ರಾವಿಡ್ ಮಾತಿನಲ್ಲಿ ಕಂಡುಬಂದ ಅಂಶವಾಗಿದೆ.

ಉತ್ತರ ಕೊಡಲು ರಾಹುಲ್ಗೆ ಈ ಬಾರಿಯ ಐಪಿಎಲ್ ಸರಿಯಾದ ವೇದಿಕೆ
ಇನ್ನು ನಾಯಕತ್ವದ ವಿಚಾರವಾಗಿ ತನ್ನ ವಿರುದ್ಧ ಟೀಕೆ ನಡೆಸುತ್ತಿರುವ ಹಾಗೂ ಕಾಲನ್ನು ಎಳೆಯುತ್ತಿರುವ ಕೆಲ ಜನರಿಗೆ ತಿರುಗೇಟು ನೀಡಲು ಕೆ ಎಲ್ ರಾಹುಲ್ ಅವರಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸರಿಯಾದ ವೇದಿಕೆ ಎನ್ನಬಹುದು. ಲಕ್ನೋ ಸೂಪರ್ ಜಿಯಂಟ್ಸ್ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಳ್ಳುತ್ತಿದ್ದು, ಟೂರ್ನಿಯಲ್ಲಿ ತಂಡವನ್ನು ಉತ್ತಮ ಹಂತಕ್ಕೆ ತೆಗೆದುಕೊಂಡು ಹೋದರೆ ತಮ್ಮ ನಾಯಕತ್ವದ ಕುರಿತು ಮಾತನಾಡಿದವರಿಗೆ ಟಾಂಗ್ ನೀಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications