ದ್ರಾವಿಡ್ ಕೇವಲ ಬಿಲ್ಡಪ್ ಕೋಚ್ ಎನಿಸಿಕೊಳ್ಳಬಾರದೆಂದರೆ ಈ ಕೆಲಸ ಮಾಡಲಿ ಎಂದು ಎಚ್ಚರಿಸಿದ ಮಾಜಿ ಕ್ರಿಕೆಟಿಗ!

ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆಗಳು ಜರುಗಿದವು. ಮೊದಲಿಗೆ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವಇಚ್ಛೆಯಿಂದ ವಿರಾಟ್ ಕೊಹ್ಲಿ ತ್ಯಜಿಸಿದರೆ, ತನ್ನ ಅವಧಿ ಮುಗಿದ ಕಾರಣದಿಂದಾಗಿ ಭಾರತದ ಹೆಡ್ ಕೋಚ್ ರವಿಶಾಸ್ತ್ರಿ ಕೂಡ ಕೋಚ್ ಸ್ಥಾನದಿಂದ ಕೆಳಗಿಳಿದರು. ಈ ಮೂಲಕ ಹಲವಾರು ವರ್ಷಗಳಿಂದ ಭಾರತ ತಂಡವನ್ನು ನಾಯಕ ಮತ್ತು ಕೋಚ್ ಆಗಿ ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ - ರವಿಶಾಸ್ತ್ರಿ ಜೋಡಿಯ ಯುಗ ಮುಕ್ತಾಯವಾಯಿತು.
ಹೀಗೆ ರವಿಶಾಸ್ತ್ರಿ ಭಾರತ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದ ನಂತರ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ ಭಾರತದ ಹೆಡ್ ಕೋಚ್ ಸ್ಥಾನಕ್ಕೆ ನೇಮಿಸಿತು. ಹೀಗೆ ಭಾರತ ಕ್ರಿಕೆಟ್ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕವಾದ ರಾಹುಲ್ ದ್ರಾವಿಡ್ ಮೊದಲಿಗೆ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೂಲಕ ತಮ್ಮ ಕೆಲಸವನ್ನು ಆರಂಭಿಸಿದರು. ಕೋಚ್ ಆಗಿ ರಾಹುಲ್ ದ್ರಾವಿಡ್ ನೇತೃತ್ವ ವಹಿಸಿದ ಮೊದಲ ಸರಣಿಯಲ್ಲಿಯೇ ಟೀಮ್ ಇಂಡಿಯಾ ಎದುರಾಳಿ ವಿರುದ್ಧ 3-0 ಪಂದ್ಯಗಳ ಅಂತರದಲ್ಲಿ ಸರಣಿಯನ್ನು ವೈಟ್ ವಾಷ್ ಮಾಡಿತು. ಹಾಗೂ ನಂತರ ನ್ಯೂಜಿಲೆಂಡ್ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತು. ಹೀಗೆ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ನೇಮಕಗೊಂಡ ನಂತರ ನಡೆದ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳನ್ನು ಸಾಲಾಗಿ ಗೆದ್ದ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರತವಾಗಿದ್ದು ಅಕ್ಷರಶಃ ನೆಲಕಚ್ಚಿದೆ.
ಹೌದು, ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡ ಟೀಮ್ ಇಂಡಿಯಾ ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿತು. ಈ ಸರಣಿಯಲ್ಲಿ 1-2 ಅಂತರದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನ್ನು ಅನುಭವಿಸಿತು. ಅಷ್ಟೇ ಅಲ್ಲದೆ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿಯೂ ಕೂಡ ಬ್ಲೂ ಬಾಯ್ಸ್ ಸೋಲನುಭವಿಸಿದ್ದಾರೆ. ಹೀಗೆ ಸಾಲು ಸಾಲು ಸರಣಿಗಳಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸುತ್ತಿದ್ದಂತೆ ಟೀಮ್ ಇಂಡಿಯಾಗೆ ಹಲವಾರು ಪ್ರತಿಭೆಗಳನ್ನು ನೀಡಿರುವ ಪ್ರತಿಭಾವಂತ ಕೋಚ್ ರಾಹುಲ್ ದ್ರಾವಿಡ್ ಕುರಿತು ಟೀಕೆಗಳು ಹಾಗೂ ಕಾಲೆಳೆತಗಳು ಆರಂಭವಾಗಿವೆ. ಸದ್ಯ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ರಾಹುಲ್ ದ್ರಾವಿಡ್ ಕುರಿತು ಮಾತನಾಡಿದ್ದು, ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ರಾಹುಲ್ ದ್ರಾವಿಡ್ ಉತ್ತಮವಾಗಿ ತಂಡವನ್ನು ಮುನ್ನಡೆಸಬೇಕಾಗಿದೆ
ರಾಹುಲ್ ದ್ರಾವಿಡ್ ಕೋಚ್ ಹುದ್ದೆಯ ಕುರಿತಾಗಿ ಮಾತನಾಡಿರುವ ಶೋಯಬ್ ಅಖ್ತರ್ ಜನರು ರಾಹುಲ್ ದ್ರಾವಿಡ್ ಅವರನ್ನು ಅತಿಯಾಗಿ ಹೊಗಳಲ್ಪಟ್ಟ ಕೆಲಸ ಮಾಡದ ಕೋಚ್ ಎಂದು ಕರೆಯಬಾರದೆಂದರೆ ರಾಹುಲ್ ದ್ರಾವಿಡ್ ಉತ್ತಮವಾಗಿ ತಂಡವನ್ನು ಮುನ್ನಡೆಸಬೇಕಿದೆ ಎಂದಿದ್ದಾರೆ. ಈ ರೀತಿ ಹೇಳಿಕೆ ನೀಡುವುದರ ಮೂಲಕ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಹೀಗೆ ಸರಣಿಗಳನ್ನು ಸೋತರೆ ಮುಂದೊಂದು ದಿನ ಜನರು ರಾಹುಲ್ ದ್ರಾವಿಡ್ ಅವರನ್ನು ಅತಿಯಾಗಿ ಹೊಗಳಲ್ಪಟ್ಟ ಕೋಚ್ ಎಂದು ಕರೆಯುತ್ತಾರೆ ಎಂದು ಶೋಯಬ್ ಅಖ್ತರ್ ಎಚ್ಚರಿಸಿದ್ದಾರೆ.

ಭಾರತ ಕ್ರಿಕೆಟ್ ಇಳಿಮುಖವಾಗಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ಶೋಯಬ್ ಅಖ್ತರ್ ಭಾರತ ಕ್ರಿಕೆಟ್ ಇಳಿಕೆಯತ್ತ ಮುಖ ಮಾಡಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದಿಗೂ ಸಹ ಉನ್ನತ ಸ್ಥಾನದಲ್ಲಿರುವ ಭಾರತ ಕ್ರಿಕೆಟ್ ಮತ್ತಷ್ಟು ವೃದ್ಧಿಸಬೇಕೆಂದರೆ ರವಿಶಾಸ್ತ್ರಿ ನಿರ್ವಹಿಸಿದ್ದ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರಾಹುಲ್ ದ್ರಾವಿಡ್ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಬೇಕಿದೆ ಎಂದು ಶೋಯಬ್ ಅಖ್ತರ್ ಹೇಳಿದ್ದಾರೆ.

ಟೀಂ ಇಂಡಿಯಾ ಸೋಲು ದ್ರಾವಿಡ್ ಹೆಸರು ಕೆಡಿಸುತ್ತಾ?
ಸದ್ಯ ರಾಹುಲ್ ದ್ರಾವಿಡ್ ಕುರಿತಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಕ್ತರ್ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಟೀಮ್ ಇಂಡಿಯಾ ಇದೇ ರೀತಿ ಸಾಲುಸಾಲು ಸರಣಿಗಳನ್ನು ಸೋತರೆ ಕೋಚ್ ರಾಹುಲ್ ದ್ರಾವಿಡ್ ಕೆಟ್ಟ ಹೆಸರನ್ನು ಮತ್ತು ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಅಂಡರ್ 19 ಹಾಗೂ ಭಾರತ ಎ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿರುವ ರಾಹುಲ್ ದ್ರಾವಿಡ್ ಸದ್ಯ ಭಾರತ ಅಂತರರಾಷ್ಟ್ರೀಯ ತಂಡದ ಕೋಚ್ ಆಗಿ ಕೆಟ್ಟ ಹೆಸರು ಹೊತ್ತುಕೊಳ್ಳುತ್ತಾರಾ ಎಂಬ ಅನುಮಾನಗಳು ಮೂಡತೊಡಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications