ಭಾರತ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅದೇ ಹುದ್ದೆಯಲ್ಲಿ ಮುಂದುವರಿಯುವ ಅಸಾಧ್ಯವೆನಿಸಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ನ ಫೈನಲ್ ದಿನದಂದು ಅವರ ಒಪ್ಪಂದವು ಮುಕ್ತಾಯಗೊಂಡಿದೆ. ಆದರೆ, ಬಿಸಿಸಿಐ ದ್ರಾವಿಡ್ ಅವರನ್ನು ಮುಂದುವರಿಸಲು ಒಲವು ತೋರಿಸಿದೆ ಎಂದು ವರದಿಗಳಾಗಿವೆ.
ಆದಾಗ್ಯೂ, ವಿಶ್ವಕಪ್ ಸೋಲು ಬಹಳಷ್ಟು ವಿಷಯಗಳನ್ನು ಬದಲಾಯಿಸಿದೆ. ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಈಗ ಮುಖ್ಯ ಕೋಚ್ ಆಗಿ ಉಳಿಯಲು ಉತ್ಸುಕರಾಗಿಲ್ಲ ಮತ್ತು ಆಸಕ್ತಿ ತೋರಿಸುತ್ತಿಲ್ಲ. ರಾಹುಲ್ ದ್ರಾವಿಡ್ ಅವರ ಅವಧಿ ಇನ್ನೂ ವಿಸ್ತರಣೆಯಾಗದ ಕಾರಣ, ಹೊಸ ಕೋಚ್ ನೇಮಕವಾಗುವುದು ಪಕ್ಕಾ ಆಗಿದೆ.

ಹೀಗಾಗಿ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ.
ಎನ್ಸಿಎ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಅವರು ಹಂಗಾಮಿ ಮುಖ್ಯ ಕೋಚ್ ಆಗಿಯೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ಲಕ್ಷ್ಮಣ್ ಅವರು ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಮಾರ್ಗದರ್ಶಕನ ಹುದ್ದೆ ವಹಿಸಿಕೊಂಡಿದ್ದಾರೆ.
ವಿವಿಎಸ್ ಲಕ್ಷ್ಮಣ್ ಅವರು ಭಾರತ ಕ್ರಿಕೆಟ್ ತಂಡದ ಮುಂದಿನ ಮುಖ್ಯ ಕೋಚ್ ಆಗುವ ಬಯಕೆಯನ್ನು ತೋರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

"ವಿವಿಎಸ್ ಲಕ್ಷ್ಮಣ್ ಅವರು ಕೋಚ್ ಹುದ್ದೆಗಾಗಿ ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಸಂದರ್ಭದಲ್ಲಿ ಲಕ್ಷ್ಮಣ್ ಈ ನಿಟ್ಟಿನಲ್ಲಿ ಬಿಸಿಸಿಐನ ಉನ್ನತ ಬಾಸ್ಗಳನ್ನು ಭೇಟಿ ಮಾಡಲು ಅಹಮದಾಬಾದ್ಗೆ ತೆರಳಿದ್ದರು. ಅವರು ಟೀಮ್ ಇಂಡಿಯಾಗೆ ಕೋಚ್ ಆಗಿ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ".
"ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ವಿವಿಎಸ್ ಲಕ್ಷ್ಮಣ್ ಖಂಡಿತವಾಗಿಯೂ ಭಾರತ ತಂಡದೊಂದಿಗೆ ಪ್ರಯಾಣಿಸುತ್ತಾರೆ. ಇದು ಪೂರ್ಣ ಸಮಯದ ಭಾರತ ಮುಖ್ಯ ಕೋಚ್ ಆಗಿ ಅವರ ಮೊದಲನೆಯ ನಿಯೋಜನೆಯಾಗಲಿದೆ," ಎಂದು ಬಿಸಿಸಿಐ ಮೂಲಗಳು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿವೆ.
ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ನವೆಂಬರ್ 2021ರಲ್ಲಿ ಎರಡು ವರ್ಷಗಳ ಅವಧಿಗೆ ಕೋಚ್ ಆಗಿ ನೇಮಿಸಲಾಯಿತು. ಕೋಚ್ ಆಗಿ ಅವರ ಅಧಿಕಾರಾವಧಿಯಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಿದೆ ಮತ್ತು 2023ರ ಏಷ್ಯಾ ಕಪ್ ಚಾಂಪಿಯನ್ ಆಗಿದೆ.

ಕೆಲವು ಮೂಲಗಳ ಪ್ರಕಾರ, ರಾಹುಲ್ ದ್ರಾವಿಡ್ ಅವರು ಈಗಾಗಲೇ ಬಿಸಿಸಿಐಗೆ ತಿಳಿಸಿದ್ದಾರೆ. ಭಾರತ ತಂಡದ ಮಾಜಿ ನಾಯಕ ಎನ್ಸಿಎ ಮುಖ್ಯಸ್ಥ ಹುದ್ದೆಯಲ್ಲಿ ಉತ್ತಮವಾಗಿದ್ದರು. ರಾಹುಲ್ ದ್ರಾವಿಡ್ ಭಾರತ ತಂಡಕ್ಕೆ ಸಾಂದರ್ಭಿಕವಾಗಿ ಕೋಚಿಂಗ್ ನೀಡಲಿದ್ದಾರೆ, ಆದರೆ ಪೂರ್ಣ ಸಮಯದ ಕೋಚ್ ಆಗಿ ಅಲ್ಲ.
ಆದಾಗ್ಯೂ, ರಾಹುಲ್ ದ್ರಾವಿಡ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಎರಡು ವರ್ಷಗಳ ಕಾಲ ಅಲ್ಲಿ ಮಾರ್ಗದರ್ಶನ ನೀಡಬಹುದು ಎಂದು ಬಿಸಿಸಿಐ ಮೂಲವನ್ನು ಉಲ್ಲೇಖೀಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಹಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ವಿಸ್ತರಣೆ ಏನಾಗಲಿದೆ ಎಂಬುದು ತಿಳಿದಿಲ್ಲ. ಹೊಸ ಕೋಚ್ ಇವರೊಂದಿಗೆ ಕೆಲಸ ಮಾಡಲು ಬಯಸಬಹುದು ಅಥವಾ ತಮ್ಮೊಂದಿಗೆ ತನ್ನದೇ ಆದ ಸಹಾಯಕ ಕೋಚ್ಗಳನ್ನು ಕರೆತರಬಹುದು.