
ಬೆಂಗಳೂರು: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟೀಮ್ ಇಂಡಿಯಾಕ್ಕೆ ವಾಪಸ್ಸಾಗುವ ದಾರಿ ತೆರೆದರೂ ತೆರೆಯಬಹುದು ಎಂದು ಭಾರತದ ಮಾಜಿ ವಿಕೆಟ್ ಕೀಪರ್, ಕನ್ನಡಿಗ ರಾಬಿನ್ ಉತ್ತಪ್ಪ ನಂಬಿದ್ದಾರೆ. ರಾಷ್ಟ್ರೀಯ ತಂಡಕ್ಕೆ ವಾಪಸ್ಸಾಗುವ ಇಂಗಿತವನ್ನು ಉತ್ತಪ್ಪ ವ್ಯಕ್ತಪಡಿಸಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿದೆ. ಯುಎಇಯ ಶಾರ್ಜಾ, ದುಬೈ ಮತ್ತು ಅಬುಧಾಬಿ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಪಾಲಾಗಿರುವ ಉತ್ತಪ್ಪ ಅಂತಾರಾಷ್ಟ್ರೀಯ ಕಮ್ಬ್ಯಾಕ್ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಉತ್ತಪ್ಪ, 'ಐಪಿಎಲ್ನಲ್ಲಿ ನಾನು ಶ್ರೇಷ್ಠ ಸೀಸನ್ ಕೊಟ್ಟರೆ, ಅದ್ಭುತ ಸಂಗತಿಗಳು ನಡೆಯಬಹುದು ಎಂದು ನಾನು ನಂಬಿದ್ದೇನೆ. ಆ ಪ್ರದರ್ಶನ ನನ್ನನ್ನು ಟೀಮ್ ಇಂಡಿಯಾಕ್ಕೆ ವಾಪ್ ಕರೆತರಬಹುದು,' ಎಂದಿದ್ದಾರೆ (ಉತ್ತಪ್ಪ ಮಾತನಾಡಿರುವ ಆಡಿಯೊವನ್ನು ಆರ್ಆರ್ ಟ್ವಿಟರ್ನಲ್ಲಿ ಹಾಕಿದೆ. ಮೇಲಿನ ಟ್ವಿಟರ್ನಲ್ಲಿ ನೀವು ಆಡಿಯೊ ಆಲಿಸಬಹುದು).
ಮಾತು ಮುಂದುವರೆಸಿದ ಉತ್ತಪ್ಪ, 'ಮನುಷ್ಯನಾಗಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವವರಲ್ಲಿ ನಾನೂ ಒಬ್ಬ. ನಕಾರಾತ್ಮಕ ಸಂದರ್ಭಗಳಿದ್ದರೂ ಬೆಳ್ಳಿ ಗೆರೆಗಳತ್ತ ನೋಡುವವನು ನಾನು. ಹೀಗಾಗಿ ದೇವರು ಇಚ್ಛಿಸಿದರೆ ನಾನು ಮತ್ತೆ ದೇಶವನ್ನು ಪ್ರತಿನಿಧಿಸಿ ಪ್ರಶಸ್ತಿಗಳನ್ನು ತರಲು ಸಾಧ್ಯವಾಗಬಹುದು,' ಎಂದು ವಿಶ್ವಾಸ ತೋರಿಕೊಂಡಿದ್ದಾರೆ.