ಚಾಂಪಿಯನ್ಸ್ ಟ್ರೋಫಿ 2025 ರ ಸಮಸ್ಯೆ ಬಗೆ ಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನೇ ದಿನೇ ಈ ಸಮಸ್ಯೆ ಹೆಮ್ಮರವಾಗಿ ಬೆಳೆಯುತ್ತಿದೆ. ಅತ್ತ ಪಾಕ್ ಆತಿಥ್ಯವನ್ನು ಬಿಡಲು ತಯಾರಿಲ್ಲ. ಇತ್ತ ಭಾರತ, ನೆರೆಯ ರಾಷ್ಟ್ರಕ್ಕೆ ಹೋಗಲು ಹಿಂದೇಟು ಹಾಕುತ್ತಿದೆ. ಮುಂದಿನ ವರ್ಷದ ಮಾರ್ಚ್ನಲ್ಲಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಿಗೆ ಪಾಕ್ ಆತಿಥ್ಯ ವಹಿಸಲಿದೆ. ಆದರೆ ಈ ಟೂರ್ನಿಯಲ್ಲಿ ಭಾರತ ಭಾಗವಹಿಸುವು ಸಾಧ್ಯತೆ ತೀರಾ ಕಡಿಮೆ ಆದಂತೆ ಕಾಣುತ್ತಿದೆ.
ಬಿಸಿಸಿಐ ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಬರುವುದಿಲ್ಲ. ಬಿಸಿಸಿಐ ಸರ್ಕಾರದ ಸೂಚನೆಯನ್ನು ಪಾಲಿಸುತ್ತದೆ ಎಂದು ಹಿಂದಿನಿಂದಲೂ ಹೇಳಲುತ್ತಲೇ ಬಂದಿದ್ದಾರೆ. ಈ ಬಗ್ಗೆ ಈಗ ಬಿಗ್ ಅಪ್ ಡೇಟ್ ಸಿಕ್ಕಿದೆ. ಕಾನ್ಪುರ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ವೀಕ್ಷಣೆಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಆಗಮಿಸಿದ್ದರು. ಈ ವೇಳೆ ಪತ್ರಕರ್ತರು ಅವರಿಗೆ ಚಾಂಪಿಯನ್ಸ್ ಟ್ರೋಫಿಯ ಪ್ರಶ್ನೆಯನ್ನು ಕೇಳಿದರು.

ರಾಜೀವ್ ಶುಕ್ಲಾ ಅವರ ಹೇಳಿಕೆಯನ್ನು ನೋಡಿದರೆ, ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವ ಸಾಧ್ಯತೆ ತೀರಾ ಕಡಿಮೆ ಆಗುತ್ತಿರುವುದು ಖಚಿತವಾಗಿದೆ. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಂತಾರಾಷ್ಟ್ರೀಯ ಪ್ರವಾಸಗಳನ್ನು ಬೆಳೆಸುವಾಗ ಬಿಸಿಸಿಐ ಯಾವಾಗಲೂ ಭಾರತ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುತ್ತದೆ ಎಂಬುದು ನೀತಿ. ನಮ್ಮ ತಂಡ ಯಾವುದೇ ಬೇರೆ ದೇಶಕ್ಕೆ ಪ್ರವಾಸ ಬೆಳೆಸಿದರೂ ಸಹ ಸರ್ಕಾರ ಒಪ್ಪಿಗೆ ಅನಿವಾರ್ಯ. ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಬಿಸಿಸಿಐ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಿಸಲು ಒತ್ತಾಯ ಮಾಡಬಹುದು. ಈ ಹಿಂದೆಯೂ ಸಹ ಪಾಕಿಸ್ತಾನಕ್ಕೆ ಏಷ್ಯಾ ಕಪ್ನ ಆತಿಥ್ಯವನ್ನು ನೀಡಲಾಗಿತ್ತು. ಆದರೆ ಈ ಟೂರ್ನಿಯನ್ನು ಸಹ ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಭಾರತ ಈ ಟೂರ್ನಿಯ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಈಗ ಪಿಸಿಬಿ ಸಂಪೂರ್ಣ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೀಜಿಸುವ ಚಿಂತನೆ ನಡೆಸಿದೆ.
ಐಸಿಸಿ ಟೂರ್ನಿಗಳನ್ನು ಹೊರತು ಪಡಿಸಿದರೆ, ಟೀಮ್ ಇಂಡಿಯಾ, ಪಾಕಿಸ್ತಾನದ ವಿರುದ್ಧ ಯಾವುದೇ ಸರಣಿಗಳನ್ನು ಆಡುತ್ತಿಲ್ಲ. ಐಸಿಸಿ ಟೂರ್ನಿಯಲ್ಲಿ ಮಾತ್ರ ಈ ಎರಡೂ ತಂಡಗಳು ಮುಖಾಮುಖಿ ಆಗುತ್ತವೆ. 2008ರ ಬಳಿಕ ಉಭಯ ದೇಶಗಳ ನಡುವೇ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಭಾರತದಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ಗೆ ಪಾಕ್ ತನ್ನ ತಂಡವನ್ನು ಕಳುಹಿಸಿಕೊಟ್ಟಿತ್ತು.
ಬಹು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಐಸಿಸಿ ಟೂರ್ನಿಯ ಆಯೋಜನೆ ಸಿಕ್ಕಿದೆ. ಆದರೆ ಭಾರತ, ಪಾಕ್ ಪ್ರವಾಸ ಬೆಳೆಸುವುದು ಈಗಿನ ಪರಿಸ್ಥಿತಿಗಳನ್ನು ನೋಡಿದಾಗ ತುಂಬ ಕಷ್ಟ ಎನಿಸುತ್ತದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಸ್ಪಷ್ಟ ಚಿತ್ರಣ ಹೊರ ಬಿದ್ದಿಲ್ಲ.