
ರಾಜ್ಕೋಟ್, ಅಕ್ಟೋಬರ್ 3: ಸುದೀರ್ಘ ಕಾಯುವಿಕೆಯ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ಗೆ ಗುರುವಾರದಿಂದ ರಾಜ್ಕೋಟ್ನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಆಡುವ ಅವಕಾಶ ಸಿಗುತ್ತಿಲ್ಲ.
ಅಚ್ಚರಿಯೆಂಬಂತೆ ಇದೇ ಮೊದಲ ಬಾರಿಗೆ ಭಾರತ ತಂಡ, ಪಂದ್ಯ ಆರಂಭಕ್ಕೆ ಒಂದು ದಿನ ಮುನ್ನವೇ 12ನೇ ಆಟಗಾರನನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರ ಜತೆಗಾರನಾಗಿ ಮಹಾರಾಷ್ಟ್ರದ ತರುಣ ಆಟಗಾರ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಹೀಗಾಗಿ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳುವ ಕನಸು ನನಸಾಗಿದ್ದರೂ, ಮಯಾಂಕ್ ಅವರಿಗೆ ಆಡುವ ಬಳಗದಲ್ಲಿ ಆಡುವ ಅವಕಾಶವೇ ಸಿಕ್ಕಿಲ್ಲ. ಇದರಿಂದ ಮಯಾಂಕ್ ಬೆಂಚ್ ಕಾಯುವಿಕೆ ಮತ್ತೆ ಮುಂದುವರಿಯುವಂತಾಗಿದೆ. ಕೊನೆಯ ಕ್ಷಣದ ಬದಲಾವಣೆಗಳನ್ನು ಮಾಡಿದರೆ ಮಾತ್ರ ಮಯಾಂಕ್ಗೆ ಆಡುವ ಅದೃಷ್ಟ ಲಭಿಸಬಹುದು.
ಬುಧವಾರ ಬೆಳಿಗ್ಗೆಯಷ್ಟೇ ಮಯಾಂಕ್, 'ಹೊಸ ಆರಂಭದತ್ತ' ಎಂದು ಅಭ್ಯಾಸಕ್ಕೆ ತೆರಳುವ ವೇಳೆಯ ಫೋಟೊವನ್ನು ಟ್ವಿಟ್ಟರ್ನಲ್ಲಿ ಹಾಕಿಕೊಂಡಿದ್ದರು. ಆದರೆ, ಕೆಲವೇ ಹೊತ್ತಿನ ಬಳಿಕ ಪ್ರಕಟವಾದ ಆಡುವ ತಂಡದ ಪಟ್ಟಿಯಲ್ಲಿ ಮಯಾಂಕ್ ಹೆಸರು ಇಲ್ಲದೆ ಇರುವುದು ಅಚ್ಚರಿ ಮೂಡಿಸಿದೆ.
ಪೃಥ್ವಿ ಶಾ ಒಳ್ಳೆಯ ಆಟಗಾರನಾದರೂ, ಮಯಾಂಕ್ ಅವರಿಗೇ ಆದ್ಯತೆ ನೀಡಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮುಂಬೈ ಆಟಗಾರನಾಗಿದ್ದರೆ ಮಯಾಂಕ್ಗೆ ಸ್ಥಾನ ಸಿಗುತ್ತಿತ್ತು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್ನಲ್ಲೇ ಅರ್ಧಶತಕ ದಾಖಲಿಸಿ ಗಮನ ಸೆಳೆದಿದ್ದ ಹನುಮ ವಿಹಾರಿ ಅವರನ್ನು ಸಹ ತಂಡದಿಂದ ಕೈಬಿಡಲಾಗಿದೆ.

ತಂಡದಲ್ಲಿ ಮೂವರು ಸ್ಪಿನ್ನರ್ಗಳಿಗೆ ಅವಕಾಶ ನೀಡಲಾಗಿದ್ದು, ಇಂಗ್ಲೆಂಡ್ ಸರಣಿಯಿಂದ ಕೊನೆಯ ಎರಡು ಪಂದ್ಯಗಳಲ್ಲಿ ಸ್ಥಾನ ಕಳೆದುಕೊಂಡಿದ್ದ ಕುಲದೀಪ್ ಯಾದವ್ ತಂಡಕ್ಕೆ ಮರಳಿದ್ದಾರೆ.
ವೇಗಿ ಶಾರ್ದೂಲ್ ಠಾಕೂರ್ ಹನ್ನೆರಡನೆಯ ಆಟಗಾರರಾಗಿದ್ದಾರೆ. ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ವೇಗದ ದಾಳಿಯ ಜವಾಬ್ದಾರಿ ಹೊತ್ತಿದ್ದಾರೆ.
ತಂಡ ಪ್ರಕಟಿಸಿರುವ ಆಡುವ ಅಂತಿಮ ಆಟಗಾರರ ಬಳಗ ಹೀಗಿದೆ:
ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್, ಪೃಥ್ವಿ ಶಾ (ಪಾದಾರ್ಪಣೆ), ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಬ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್.