
ಇಸ್ಲಮಾಬಾದ್, ಸೆಪ್ಟೆಂಬರ್ 12: ಪಾಕಿಸ್ತಾನ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿರುವ ಶ್ರೀಲಂಕಾ ಕ್ರಿಕೆಟಿಗರ ನಿಲುವಿಗೆ ಪಾಕಿಸ್ತಾನ ಮಾಜಿ ಆಟಗಾರ ರಮೀಝ್ ರಾಜಾ ಕಿಡಿಕಾರಿದ್ದಾರೆ. ಭದ್ರತೆಯ ಕಾರಣ ನೀಡಿ ಶ್ರೀಲಂಕಾ ತಂಡ ಪಾಕ್ ಸರಣಿಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದೆ. ಆದರೆ ರಮೀಝ್ಗೆ ಲಂಕಾ ಆಟಗಾರರ ನಿರ್ಧಾರ ಸರಿ ಕಾಣಿಸಿಲ್ಲ.
ಭಯೋತ್ಪಾದನಾ ದಾಳಿಯ ಭಯದಿಂದ ಶ್ರೀಲಂಕಾ ಟಿ20 ತಂಡದ ನಾಯಕ ಲಸಿತ್ ಮಾಲಿಂಗ, ಮಾಜಿ ನಾಯಕ ಏಂಜಲೋ ಮ್ಯಾಥ್ಯೂಸ್, ತಿಸರ ಪೆರೆರಾ ಸೇರಿದಂತೆ ಶ್ರೀಲಂಕಾ ಕ್ರಿಕೆಟಿಗರು ಪಾಕ್ ಪ್ರವಾಸ ಸರಣಿಯಿಂದ ಹಿಂದೆ ಸರಿದಿದ್ದಾರೆ. ಶ್ರೀಲಂಕಾದ ಪಾಕ್ ಪ್ರವಾಸ ಸರಣಿ ಸೆಪ್ಟೆಂಬರ್ 27ರಂದು ಆರಂಭಗೊಳ್ಳಲಿದೆ.
2009ರ ಮಾರ್ಚ್ನಲ್ಲಿ ಲಾಹೋರ್ನಲ್ಲಿನ ಟೆಸ್ಟ್ ಪಂದ್ಯವೊಂದಕ್ಕಾಗಿ ಶ್ರೀಲಂಕಾ ತಂಡ ಪಾಕ್ಗೆ ತೆರಳಿದ್ದಾಗ ಲಂಕಾ ಆಟಗಾರರಿದ್ದ ಬಸ್ನ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಅನಂತರ ಇದೇ ಮೊದಲ ಬಾರಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಸಂಪೂರ್ಣ ಪ್ರವಾಸ ಸರಣಿಗಾಗಿ ಪಾಕ್ಗೆ ತೆರಳುವುದರಲ್ಲಿತ್ತು.
ಲಂಕಾ ಆಟಗಾರರ ನಿರ್ಧಾರಕ್ಕೆ ಟ್ವಿಟರ್ನಲ್ಲಿ ರಮೀಝ್ ರಾಜಾ ಅಸಮಾಧಾನ ಹೊರ ಹಾಕಿದ್ದಾರೆ. 'ಪಾಕಿಸ್ತಾನ ಪ್ರವಾಸದಿಂದ 10 ಶ್ರೀಲಂಕಾ ಆಟಗಾರರು ಹಿಂದೆ ಸರಿದಿರುವುದು ಯಾಕೆಂದು ನನಗರ್ಥವಾಗುತ್ತಿಲ್ಲ. ನಿರಾಶೆಯಾಗಿದೆ. ಇನ್ನು ಕೆಲವು ಆಟಗಾರರು ಪ್ರವಾಸಕ್ಕೆ ಬದಲು ಫ್ರಾಂಚೈಸಿ ಕ್ರಿಕೆಟ್ನಲ್ಲಿ ಆಡಲು ನಿರ್ಧರಿಸಿದ್ದಾರೆ. ವಾವ್!' ಎಂದು ರಾಜಾ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಶ್ರೀಲಂಕಾದ ಪಾಕಿಸ್ತಾನ ಪ್ರವಾಸ ಸರಣಿ 3 ಪಂದ್ಯಗಳ ಏಕದಿನ, 3 ಪಂದ್ಯಗಳ ಟಿ20 ಸರಣಿಗಳನ್ನು ಒಳಗೊಂಡಿದೆ. ಸೆಪ್ಟೆಂಬರ್ 27ರಂದು ಕರಾಚಿಯಲ್ಲಿ ಏಕದಿನ ಪಂದ್ಯದ ಮೂಲಕ ಪ್ರವಾಸ ಪಂದ್ಯಗಳು ನಡೆಯುವುದರಲ್ಲಿದೆ. ಅಕ್ಟೋಬರ್ 9ರಂದು ಕೊನೇ ಟಿ20 ಪಂದ್ಯದ ಮೂಲಕ ಸರಣಿ ಕೊನೆಗೊಳ್ಳಲಿದೆ.