
ಜಮೈಕಾ ತಲ್ಲವಾಸ್ ತಂಡದ ಅಸಿಸ್ಟೆಂಡ್ ಕೋಚ್ ಹುದ್ದೆಯಲ್ಲಿದ್ದ ವೆಸ್ಟ್ ಇಂಡೀಸ್ ಮಾಜಿ ಆಟಗಾರ ರಾಮ್ನರೇಶ್ ಸರ್ವಾನ್ ಈ ಬಾರಿಯ ಸಿಪಿಎಲ್ನಿಂದ ಹೊರಗುಳಿಯುವ ನಿರ್ಧಾರವನ್ನು ಮಾಡಿದ್ದಾರೆ. ವೈಯಕ್ತಿಕ ಕಾರಣವನ್ನು ನೀಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಸರ್ವಾನ್.
ಕಳೆದ ಕೆಲ ತಿಂಗಳ ಹಿಂದೆ ರಾಮ್ ನರೇಶ್ ಸರ್ವಾನ್ ಬಗ್ಗೆ ಜಮೈಕಾ ತಲ್ಲವಾಸ್ ತಂಡದ ಪ್ರಮುಖ ಸದಸ್ಯ ಕ್ರಿಸ್ ಗೇಲ್ ಆರೋಪವನ್ನು ಮಾಡಿದ್ದರು. ಅತ್ಯಂತ ಕೆಟ್ಟದಾಗಿ ವರ್ತನೆಯನ್ನು ತೋರುತ್ತಾರೆ ಹಾಗೂ ಆತ ಕೊರೊನಾ ವೈರಸ್ಗಿಂತಲೂ ಕೆಟ್ಟ ವ್ಯಕ್ತಿ ಎಂದು ಜರಿದಿದ್ದರು. ಈ ಹೇಳಿಕೆ ಸಾಕಷ್ಟು ಸದ್ದು ಮಾಡಿತ್ತು.
ವೆಸ್ಟ್ ತಂಡದ ಮಾಜಿ ಆಟಗಾರ ರಿಯಾನ್ ಆಸ್ಟಿನ್ ಅವರನ್ನು ಸರ್ವಾನ್ಗೆ ಬದಲಿಯಾಗಿ ತಲ್ಲವಾಸ್ ತಂಡದ ಸಹಾಯಕ ಕೋಚ್ ಆಗಿ ಈಗಾಗಲೇ ನೇಮಿಸಿಕೊಳ್ಳಲಾಗಿದೆ ಎಂದು ಮಾಹಿತಿ ದೊರೆತಿದೆ. ಈ ಬಗ್ಗೆ ತಲ್ಲವಾ್ಸ ತಮಡದ ಸಿಇಒ ಪ್ರತಿಕ್ರಿಯಿಸಿ, ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯ ಟೂರ್ನಿಯನ್ನು ತೊರೆಯಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಅವರ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಂಡದಲ್ಲಿ ಸರ್ವಾನ್ ಲಭ್ಯರಿಲ್ಲದೆ ಇರುವುದು ತಂಡಕ್ಕೆ ಬಹಳ ನಷ್ಟ. ಆಟದಲ್ಲಿ ಸಾಕಷ್ಟು ವಿಚಾರಗಳನ್ನು ಅವರು ತರುತ್ತಾರೆ. ಅವರ ಅನುಭವ, ಅವರ ಜ್ಞಾನ ಇಷ್ಟು ವರ್ಷಗಳ ಕಾಲ ಆಟದಲ್ಲಿ ವ್ಯವಹರಿಸಿದ ರೀತಿ ತಂಡಕ್ಕೆ ಉಪಯುಕ್ತವಾಗುತ್ತಿತ್ತು. ತಂಡಕ್ಕೆ ಇದೊಂದು ನಷ್ಟ ಎಂದು ಜಮೈಕಾ ತಲ್ಲವಾಸ್ ತಂಡದ ಸಿಇಒ ಜೆಫ್ ಮಿಲ್ಲರ್ ಹೇಳಿದ್ದಾರೆ.
ತಲ್ಲವಾಸ್ ತಂಡಕ್ಕೆ ಕ್ರಿಸ್ ಗೇಲ್ ಅವರನ್ನು ರಿಟೈನ್ ಮಾಡಿಕೊಳ್ಳದಿರಲು ಸರ್ವಾನ್ ಅವರೇ ಕಾರಣ ಎಂದು ಗೇಲ್ ಆರೋಪವನ್ನು ಮಾಡಿದ್ದ ನಂತರ ಸರ್ವಾನ್ ವಿವಾದದ ಕೇಂದ್ರ ಬಿಂದುವಾಗಿದ್ದರು. ಅಚ್ಚರಿಯೆಂದರೆ ಕ್ರಿಸ್ ಗೇಲ್ ಕೂಡ ವೈಯಕ್ತಿಕ ಕಾರಣಗಳನ್ನು ನೀಡಿ ಈ ಬಾರಿಯ ಸಿಪಿಎಲ್ನಿಂದ ಹೊರಕ್ಕುಳಿದಿದ್ದಾರೆ.