ರಣಜಿ ಟ್ರೋಫಿ: ಪ್ರಸಿದ್ಧ್ ಕೃಷ್ಣ ಬೌಲಿಂಗ್ ದಾಳಿಗೆ ಬೆಚ್ಚಿದ ಜಮ್ಮು ಕಾಶ್ಮೀರ: ಕರ್ನಾಟಕದ ಬಿಗಿ ಹಿಡಿತದಲ್ಲಿ ಪಂದ್ಯ!

ರಣಜಿ ಟ್ರೋಫಿಯ ಎರಡನೇ ಪಂದ್ಯದ ಎರಡನೇ ದಿನದಾಟದಲ್ಲಿ ಕರ್ನಾಟಕ ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನ ಜಮ್ಮು ಕಾಶ್ಮೀರ ಬೌಲರ್ಗಳು ಕರ್ನಾಟಕದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಮೇಲುಗೈ ಸಾಧಿಸಿದ್ದರೂ ಅನುಭವಿ ಕರುಣ್ ನಾಯರ್ ಭರ್ಜರಿ ಶತಕದ ನೆರವಿನೊಂದಿಗೆ ಕರ್ನಾಟಕ ಪೈಪೋಟಿ ನೀಡಿತ್ತು. ಆದರೆ ಎರಡನೇ ದಿನದಾಟದಲ್ಲಿ ಕರ್ನಾಟಕ ಸ್ಪಷ್ಟ ಮೇಲುಗೈ ಸಾಧಿಸಿದೆ.
ಕರುಣ್ ನಾಯರ್ 175, ಕರ್ನಾಟಕ 302 ರನ್ಗಳಿಗೆ ಆಲೌಟ್: ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ತಂಡದ ಪರವಾಗಿ ಏಕಾಂಗಿ ಹೋರಾಟವನ್ನು ನಡೆಸಿದ್ದು ಅನುಭವಿ ಆಟಗಾರ ಕರುಣ್ ನಾಯರ್. ಇತರ ಎಲ್ಲಾ ಆಟಗಾರರು ಕೂಡ ಕ್ರೀಸ್ನಲ್ಲಿ ನೆಲೆವೂರಲು ವಿಫಲವಾಗಿದ್ದರೂ ಕರುಣ್ ನಾಯರ್ ಗಟ್ಟಿಯಾಗಿ ನಿಂತು ಭರ್ಜರಿ ಪ್ರದರ್ಶನ ನೀಡಿದರು. ಮೊದಲ ದಿನ 152 ರನ್ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಕರುಣ್ ನಾಯರ್ ಎರಡನೇ ದಿನ 175 ರನ್ಗಳಿಸಿ ವಿಕೆಟ್ ಕಳೆದುಕೊಂಡರು. ಕರುಣ್ ನಾಯರ್ ಅವರ ಈ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ 302 ರನ್ಗಳಿಸಿ ಆಲೌಟ್ ಆಯಿತು.

ಜಮ್ಮು ಕಾಶ್ಮೀರ ಉತ್ತಮ ಬೌಲಿಂಗ್
ಜಮ್ಮು ಕಾಶ್ಮೀರ ತಂಡದ ಪರವಾಗಿ ಪರ್ವೇಜ್ ರಸೂಲ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು 4 ವಿಕೆಟ್ ಸಂಪಾದಿಸಿದರು. ಮುಜ್ತಾಬಾ ಯೂಸೂಫ್, ಉಮ್ರಾನ್ ಮಲಿಕ್ ತಲಾ ಎರಡು ವಿಕೆಟ್ ಸಂಪಾದಿಸಿದರೆ ಅಕೀಬ್ ನಬಿ ಹಾಗೂ ಅಬ್ದುಲ್ ಸಮದ್ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

ಪ್ರಸಿದ್ಧ್ ಕೃಷ್ಣ ದಾಳಿಗೆ ಜಮ್ಮು ಕಾಶ್ಮೀರ ದಾಂಡಿಗರು ಕಂಗಾಲು
ಇನ್ನು 302 ರನ್ಗಳಿಗೆ ಆಲೌಟ್ ಆದ ಬಳಿಕ ಬೌಲಿಂಗ್ ದಾಳಿಗೆ ಇಳಿದ ಕರ್ನಾಟಕ ತಂಡದ ಪರವಾಗಿ ವೇಗಿ ಪ್ರಸಿದ್ಧ್ ಕೃಷ್ಣ ಅಮೋಘ ಪ್ರದರ್ಶನ ನೀಡಿದ್ದಾರೆ. ಪ್ರಸಿದ್ಧ್ ಬೌಲಿಂಗ್ ದಾಳಿಗೆ ಜಮ್ಮು ಕಾಶ್ಮೀರದ ದಾಂಡಿಗರು ಅಕ್ಷರಶಃ ಕಂಗಾಲಾಗಿ ಹೋದರು. ಮೊದಲ ವಿಕೆಟ್ಗೆ 55 ರನ್ಗಳ ಉತ್ತಮ ಜೊತೆಯಾಟವನ್ನು ಪಡೆದಿದ್ದರೂ ಜಮ್ಮು ಕಾಶ್ಮೀರ 93 ರನ್ಗಳಿಗೆ ಆಲೌಟ್ ಆಗಿತ್ತು. ಇದರಲ್ಲಿ 6 ವಿಕೆಟ್ಗಳು ಪ್ರಸಿದ್ಧ್ ಕೃಷ್ಣ ಪಾಲಾಗಿತ್ತು.

ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮುನ್ನಡೆ
ಜಮ್ಮು ಕಾಶ್ಮೀರದ ಪ್ರಮುಖ ಎಲ್ಲಾ ದಾಂಡಿಗರು ಕೂಡ ಪ್ರಸಿದ್ಧ್ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದರು. 12 ಓವರ್ ಬೌಲಿಂಗ್ ಮಾಡಿದ ಕರ್ನಾಟಕದ ಈ ವೇಗಿ 35 ರನ್ ನೀಡಿ 6 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಜಮ್ಮು ಕಾಶ್ಮೀರದ ಮೊದಲ ಇನ್ನಿಂಗ್ಸ್ 29.5 ಓವರ್ಗಳಿಗೆ ಅಂತ್ಯವಾಗಿತ್ತು. ಈ ಮೂಲಕ 209 ರನ್ಗಳ ದೊಡ್ಡ ಮುನ್ನಡೆಯನ್ನು ಪಡೆಯುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ.

ಗೆಲುವಿನ ಮೇಲೆ ಕರ್ನಾಟಕ ಚಿತ್ತ
ಇನ್ನು 209 ರನ್ಗಳ ದೊಡ್ಡ ಮುನ್ನಡೆ ಪಡೆದ ಕರ್ನಾಟಕ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದೆ. ಮೊದಲ ವಿಕೆಟ್ಗೆ ಶತಕದ ಜೊತೆಯಾಟದ ಕಾರಣ ಕರ್ನಾಟಕ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿದೆ. ಆರಂಭಿಕ ಆಟಗಾರ ಆರ್ ಸಮರ್ಥ್ 62 ರನ್ಗಳಿಸಿ ಔಟಾಗಿದ್ದರೆ ದೇವದತ್ ಪಡಿಕ್ಕಲ್ 49 ರನ್ಗಳಿಗೆ ಔಟಾಗಿದ್ದಾರೆ. ಕರುಣ್ ನಾಯರ್(10 ರನ್) ಹಾಗೂ ಕೃಷ್ಣಮೂರ್ತಿ ಸಿದ್ಧಾರ್ಥ್(1 ರನ್) ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಹೀಗಾಗಿ ಎರಡನೇ ದಿನದಾಟದ ಅಂತ್ಯದಲ್ಲಿ ಕರ್ನಾಟಕ 337 ರನ್ಗಳ ಮುನ್ನಡೆಯೊಂದುಗೆ ಸುಸ್ಥಿತಿಯಲ್ಲಿದ್ದು ಸುಲಭ ಗೆಲುವಿನತ್ತ ಚಿತ್ತ ನೆಟ್ಟಿದೆ.

ಆಡುವ ಬಳಗ
ಕರ್ನಾಟಕ ಆಡುವ ಬಳಗ: ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ
ಬೆಂಚ್: ವಿಜಯ್ಕುಮಾರ್ ವೈಶಾಕ್, ದೇಗಾ ನಿಶ್ಚಲ್, ಕೆಸಿ ಕಾರಿಯಪ್ಪ, ಜಗದೀಶ ಸುಚಿತ್, ಮುರಳೀಧರ ವೆಂಕಟೇಶ್, ಶುಭಾಂಗ್ ಹೆಗ್ಡೆ, ಅನೀಶ್ವರ್ ಗೌತಮ್, ಶ್ರೀನಿವಾಸ್ ಶರತ್
ಜಮ್ಮು ಕಾಶ್ಮೀರ ಆಡುವ ಬಳಗ: ಕಮ್ರಾನ್ ಇಕ್ಬಾಲ್, ಜತಿನ್ ವಾಧ್ವಾನ್, ಶುಭಂ ಪುಂಡೀರ್, ಇಯಾನ್ ದೇವ್ ಸಿಂಗ್ (ನಾಯಕ), ಅಬ್ದುಲ್ ಸಮದ್, ಪರ್ವೇಜ್ ರಸೂಲ್, ಫಾಜಿಲ್ ರಶೀದ್ (ವಿಕೆಟ್ ಕೀಪರ್), ಮುಜ್ತಾಬಾ ಯೂಸುಫ್, ಅಬಿದ್ ಮುಷ್ತಾಕ್, ಔಕಿಬ್ ನಬಿ, ಉಮ್ರಾನ್ ಮಲಿಕ್
ಬೆಂಚ್: ರಾಮ್ ದಯಾಳ್, ಉಮರ್ ನಜೀರ್ ಮಿರ್, ಆಕಾಶ್ ಚೌಧರಿ, ಸೂರ್ಯಾಂಶ್ ರೈನಾ, ಯುದ್ವೀರ್ ಸಿಂಗ್ ಚರಕ್, ಹೆನಾನ್ ನಜೀರ್ ಮಲಿಕ್, ರೋಹಿತ್ ಶರ್ಮಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications