
ಸೂರತ್, ಡಿಸೆಂಬರ್ 14: ಶುಕ್ರವಾರ ಆರಂಭವಾದ ರಣಜಿ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಕರ್ನಾಟಕ, ಆರಂಭಿಕ ಆಘಾತ ಅನುಭವಿಸಿದೆ.
ಈ ಆವೃತ್ತಿಯಲ್ಲಿ ಇದೇ ಮೊದಲ ರಣಜಿ ಪಂದ್ಯ ಆಡುತ್ತಿರುವ ಮಯಂಕ್ ಅಗರವಾಲ್ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ದಿನದ ಅಂತ್ಯದ ವೇಳೆಗೆ ಮತ್ತೊಬ್ಬ ಆರಂಭಿಕ ದೇಗಾ ನಿಶ್ಚಲ್ ಕೂಡ 12 ರನ್ಗೆ ಔಟಾದರು.
ಟಾಸ್ ಗೆದ್ದ ಆತಿಥೇಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ ಆಯ್ದುಕೊಂಡರು. ಜೊತೆಗೆ ನಾಯಕನಾಟ ಪ್ರದರ್ಶಿಸಿದರು.
ಆದರೆ, ಇನ್ನೊಂದು ಬದಿಯಲ್ಲಿ ಯಾವ ಆಟಗಾರನಿಂದಲೂ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಆರಂಭದಿಂದಲೇ ಗುಜರಾತ್ ವಿಕೆಟ್ಗಳನ್ನು ಕಳೆದುಕೊಳ್ಳತೊಡಗಿತು.
159 ರನ್ಗೆ ಎಂಟು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಗುಜರಾತ್ಗೆ ಬಾಲಂಗೋಚಿಗಳಾದ ಪಿಯೂಷ್ ಚಾವ್ಲಾ ಮತ್ತು ಪೆಹುಲ್ ಪಟೇಲ್ ಆಸರೆಯಾದರು. 9ನೇ ವಿಕೆಟ್ಗೆ ಇಬ್ಬರೂ 41 ರನ್ ಸೇರಿಸಿ ತಂಡವನ್ನು ಇನ್ನೂರರ ಗಡಿ ದಾಟಿಸಿದರು.
ಕರ್ನಾಟಕದ ಪರ ನಾಯಕ ವಿನಯ್ ಕುಮಾರ್, ಪ್ರತೀಕ್ ಜೈನ್, ರೋನಿತ್ ಮೋರೆ, ಕೆ. ಗೌತಮ್ ಮತ್ತು ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಪಡೆದರು.
ನ್ಯೂಜಿಲೆಂಡ್ ಎ ವಿರುದ್ಧದ ಭಾರತ ಎ ತಂಡದ ಪ್ರವಾಸದಲ್ಲಿದ್ದ ಮಯಾಂಕ್ ಅಗರವಾಲ್ ಮತ್ತು ಕೆ. ಗೌತಮ್ ತಂಡಕ್ಕೆ ಮರಳಿದ್ದಾರೆ. ಆದರೆ, ಭಾರತ ಎ ತಂಡದ ಸರಣಿ ಜಯಕ್ಕೆ ಕಾರಣರಾಗಿದ್ದ ನಾಯಕ ಮನೀಶ್ ಪಾಂಡೆ ಈ ಪಂದ್ಯದಲ್ಲಿ ಆಡಿಲ್ಲ. ಕಳೆದ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಆಡಿದ್ದ ಕರುಣ್ ನಾಯರ್ ಕೂಡ ತಂಡದಿಂದ ಹೊರಗುಳಿದಿದ್ದಾರೆ.
ಕರ್ನಾಟಕದ ಹೊಸ ಪ್ರತಿಭೆ, ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ರಣಜಿ ಪಾದಾರ್ಪಣೆ ಮಾಡಿದರು.
ಸಂಕ್ಷಿಪ್ತ ಸ್ಕೋರ್
ಗುಜರಾತ್: 216/10 (69.4) ಪ್ರಿಯಾಂಕ್ ಪಾಂಚಾಲ್ 74, ಪಿಯೂಷ್ ಚಾವ್ಲಾ 34, ಮೆಹುಲ್ ಪಟೇಲ್ 31*, ವಿನಯ್ ಕುಮಾರ್ 2/33, ಶ್ರೇಯಸ್ ಗೋಪಾಲ್ 2/21, ಪ್ರತೀಕ್ ಜೈನ್ 2/28
ಕರ್ನಾಟಕ: 45/2 (14.5) ಮಯಾಂಕ್ ಅಗರವಾಲ್ 25, ದೇಗಾ ನಿಶ್ಚಲ್ 12, ರವಿಕುಮಾರ್ ಸಮರ್ಥ್ 7*, ಪಿಯೂಷ್ ಚಾವ್ಲಾ 1/1, ಅರ್ಜಾನ್ ನಗ್ವಸ್ವಲ್ಲ 1/9