ಮೈಸೂರು, ಅ.25 : ಇಲ್ಲಿನ ಶ್ರೀಕಂಠದತ್ತ ಒಡೆಯರ್ ಮೈದಾನದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಕರ್ನಾಟಕ ಸೋಲು ತಪ್ಪಿಸಿಕೊಂಡು ಡ್ರಾಗೆ ತೃಪ್ತಿ ಪಟ್ಟಿದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡ ಹಿನ್ನೆಲೆಯಲ್ಲಿ ಸೆಹ್ವಾಗ್ ಪಡೆ 3 ಅಂಕ ಪಡೆದರೆ, ವಿನಯ್ ಕುಮಾರ್ ಪಡೆ 1 ಅಂಕ ಮಾತ್ರ ಗಳಿಸಿದೆ.
ಸೀಸನ್ ನಿಂದ ಸೀಸನ್ ಗೆ ಸೋಲು ಕಾಣದ ತಂಡ ಎಂಬ ದಾಖಲೆ ಹೊಂದಿದ್ದರೂ ಹಾಲಿ ಚಾಂಪಿಯನ್ ಕರ್ನಾಟಕ ಈ ಬಾರಿ ರಣಜಿಯಲ್ಲಿ ಎದುರಾಳಿ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ನೀಡುತ್ತಾ ಮುಗ್ಗರಿಸುತ್ತಿದೆ.
ಕರ್ನಾಟಕಕ್ಕೆ ಗೆಲ್ಲಲು 373 ರನ್ ಟಾರ್ಗೆಟ್ ನೀಡಿದ್ದ ಹರ್ಯಾಣ ಕೊನೆ ದಿನವಾದ ಭಾನುವಾರ ಕರ್ನಾಟಕದ ಎಂಟು ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿತ್ತು. ಆದರೆ, ಕರ್ನಾಟಕ ಹಾಗೂ ಹೀಗೂ ಎರಡು ವಿಕೆಟ್ ಉಳಿಸಿಕೊಂಡು 202 ರನ್ ಗಳಿಸಿ ಡ್ರಾಗೆ ತೃಪ್ತಿ ಪಡಬೇಕಾಯಿತು.

ಕರ್ನಾಟಕದ ರನ್ ಚೇಸ್ : ರಾಬಿನ್ ಉತ್ತಪ್ಪ 66 ರನ್ ಗಳಿಸಿ ಲಯಕ್ಕೆ ಮರಳಿದರು. ಕೆ. .ಎಲ್ ರಾಹುಲ್ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸಮರ್ಥ್ 32 ರನ್ ಗಳಿಸಿದರೆ ಮತ್ತೆ ಯಾವ ಬ್ಯಾಟ್ಸ್ ಮನ್ ಗಳು ಚೇಸಿಂಗ್ ನಲ್ಲಿ ಪಾಲ್ಗೊಳ್ಳಲಿಲ್ಲ. ಶ್ರೇಯಸ್ ಗೋಪಾಲ್ ಅವರು ಕೊನೆ ಹಂತದಲ್ಲಿ ಸ್ವಲ್ಪ ಹೊತ್ತು ಕ್ರೀಸ್ ನಲ್ಲಿ ಕಾಲದೂಡಿದರು.
ಕರ್ನಾಟಕದ ಸ್ಕೋರ್ 164/5 ಆಗಿದ್ದಾಗ ಹರ್ಯಾಣ ಗೆಲುವಿನ ಕನಸು ಕಾಣತೊಡಗಿತು. ಜೆ ಸುಚಿತ್, ಶ್ರೇಯಸ್ ಗೋಪಾಲ್ (24) ವಿಕೆಟ್ ಜೆಜೆ ಯಾದವ್ ಪಾಲಾದಾಗ 197/8 ಆಗಿತ್ತು. ಗಾಯಾಳು ಮನೀಶ್ ಪಾಂಡೆ ಅವರು ಬಲಗೈಗೆ ಮೂರು ಸ್ಟಿಚ್ ಹಾಕಿಕೊಂಡು ದಿನದ ಅಂತ್ಯದ ತನಕ ವಿಕೆಟ್ ಉಳಿಯುವಂತೆ ನೋಡಿಕೊಂಡರು.
ಮೊದಲ ಇನ್ನಿಂಗ್ಸ್ ನಲ್ಲಿ ಸೆಹ್ವಾಗ್ ಜೊತೆಗೆ ಶತಕ ಸಿಡಿಸಿದ್ದ ಆಫ್ ಸ್ಪಿನ್ನರ್ ಜೆಜೆ ಯಾದವ್ ಅವರು ಎರಡನೇ ಇನ್ನಿಂಗ್ಸ್ ನಲ್ಲಿ 39 ಓವರ್ ಗಳಲ್ಲಿ 65ಕ್ಕೆ 6 ಪಡೆದು ಕರ್ನಾಟಕಕ್ಕೆ ಭಾರಿ ಪೆಟ್ಟುಕೊಟ್ಟರು.
ಸಂಕ್ಷಿಪ್ತ ಸ್ಕೋರ್ :
ಹರ್ಯಾಣ 331 ಹಾಗೂ 262/9 ಡಿಕ್ಲೇರ್.
ಕರ್ನಾಟಕ 221 ಹಾಗೂ 202/8, 98 ಓವರ್ಸ್
(ಪಿಟಿಐ)