ಕೋಲ್ಕತಾ, ಡಿಸೆಂಬರ್ 17: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ಕರ್ನಾಟಕ-ವಿದರ್ಭ ತಂಡಗಳ ನಡುವಿನ ಮೊದಲ ಸೆಮಿಫೈನಲ್ ಪಂದ್ಯದ ಮೊದಲ ದಿನ ಮುಖ್ಯಾಂಶಗಳು ಇಲ್ಲಿದೆ...
ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಬೌಲಿಂಗ್ ದಾಳಿಗೆ ತತ್ತರಿಸಿದ ವಿದರ್ಭ, ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 185ರನ್ಗಳಿಗೆ ಸರ್ವಪತನ ಕಂಡಿದೆ.
ಟಾಸ್ ಗೆದ್ದ ವಿದರ್ಭ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಋತುವಿನಲ್ಲಿ ಉತ್ತಮ ಲಯದಲ್ಲಿರುವ ನಾಯಕ ಫೈಜ್ ಫಜಲ್ ಅವರು 12 ರನ್ನಿಗೆ ಔಟಾದರು. ಸಂಜಯ್ ರಾಮಸ್ವಾಮಿ 22 ರನ್ ಗಳಿಸಿ ಸ್ಟುವರ್ಟ್ ಬಿನ್ನಿಗೆ ವಿಕೆಟ್ ಒಪ್ಪಿಸಿದರು.

ವಾಸೀಂ ಜಾಫರ್(39) ರನ್, ಗಣೇಶ್ ಸತೀಶ್(31) ಉತ್ತಮ ಜೊತೆಯಾಟ ಸಾಧಿಸಿದರು. ಆದರೆ, ಸತೀಶ್ ಅವರು ಮಿಥುನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಆದಿತ್ಯ ವಾಡ್ಕರ್ 47ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.
ಕರ್ನಾಟಕದ ಅಭಿಮನ್ಯು ಮಿಥುನ್ 16 ಓವರ್ ಗಳಲ್ಲಿ 6 ಮೇಡನ್ ಜತೆಗೆ 45 ರನ್ನಿತ್ತು 5 ವಿಕೆಟ್ ಕಿತ್ತರು. 61.4 ಓವರ್ಗಳಲ್ಲಿ ವಿದರ್ಭ 10 ವಿಕೆಟ್ ಕಳೆದುಕೊಂಡು 185ರನ್ ಮಾತ್ರ ಗಳಿಸಿತು.
ಮಿಥುನ್ ಅಲ್ಲದೆ ವಿನಯ್ ಕುಮಾರ್ 2, ಅಭಿಮನ್ಯು ಮಿಥುನ್ 5, ಶ್ರೀನಾಥ್ ಅರವಿಂದ್, ಸ್ಟುವರ್ಟ್ ಬಿನ್ನಿ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದುಕೊಂಡರು.
ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ. ಸ್ಟಾರ್ ಆಟಗಾರ ಮಯಾಂಕ್ ಅಗರ್ವಾಲ್ 15ರನ್ ಗಳಿಸಿ ಔಟಾದರೆ, ಆರ್ ಸಮರ್ಥ್ 6 ರನ್ ಗಳಿಸಿ ಔಟಾದರು. ನಿಶ್ಚಲ್ ಶೂನ್ಯ ಸುತ್ತಿದರು. 14 ಓವರ್ ಗಳಲ್ಲಿ ಕರ್ನಾಟಕ 36ರನ್ನಿಗೆ 3ವಿಕೆಟ್ ಕಳೆದುಕೊಂಡಿದೆ.