
ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷಗಳ ಕಾಲ ನಡೆಯದೇ ಇದ್ದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಈ ವರ್ಷ ಮರಳಿ ಬಂದಿದ್ದು ಫೆಬ್ರವರಿ 17ರಿಂದ ಆರಂಭವಾಗಿದೆ. ಸದ್ಯ ಟೂರ್ನಿಯ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದ್ದು, ಎಲ್ಲಾ ತಂಡಗಳ ಮೊದಲ 2 ಪಂದ್ಯಗಳು ಮುಕ್ತಾಯಗೊಂಡು ಲೀಗ್ ಹಂತದ ಮೂರನೇ ಪಂದ್ಯಗಳು ಮಾರ್ಚ್ 3ರಿಂದ ಆರಂಭಗೊಂಡಿವೆ. ಇನ್ನು ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಲೀಗ್ ಹಂತದ ತನ್ನ ಮೊದಲನೇ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಡ್ರಾ ಮಾಡಿಕೊಂಡಿತ್ತು ಹಾಗೂ ನಂತರ ನಡೆದ ದ್ವಿತೀಯ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ಜಯವನ್ನು ಸಾಧಿಸಿತ್ತು. ಹೀಗೆ ತನ್ನ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಡ್ರಾ ಮತ್ತು ಜಯವನ್ನು ಸಾಧಿಸಿದ ಕರ್ನಾಟಕ ತಂಡ ಮಾರ್ಚ್ 3ರಿಂದ ಆರಂಭವಾಗಿರುವ ಮೂರನೇ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಸೆಣಸಾಟವನ್ನು ನಡೆಸುತ್ತಿದೆ.
ಹೌದು, ಕರ್ನಾಟಕ ಮತ್ತು ಪುದುಚೇರಿ ತಂಡಗಳ ನಡುವಿನ ಪಂದ್ಯ ಚೆನ್ನೈನ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿ ನಾಡಾರ್ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಪುದುಚೆರಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಕರ್ನಾಟಕ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶವನ್ನು ನೀಡಿತ್ತು. ಅದರಂತೆ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ಮೊದಲ ದಿನದಾಟದಂತ್ಯಕ್ಕೆ 90 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿ ಮೇಲುಗೈ ಸಾಧಿಸಿತ್ತು. ಮೊದಲನೇ ದಿನ ಕರ್ನಾಟಕ ತಂಡದ ಪರ ಅಬ್ಬರಿಸಿದ್ದ ದೇವದತ್ ಪಡಿಕ್ಕಲ್ 161 ರನ್ ಗಳಿಸಿ ಅಜೇಯರಾಗಿ ಉಳಿದುಕೊಂಡು ಎರಡನೇ ದಿನದಾಟದಂದು ದ್ವಿಶತಕ ಬಾರಿಸುವ ನಿರೀಕ್ಷೆಯನ್ನು ಮೂಡಿಸಿದ್ದರು. ಮೊದಲ ದಿನ ದೇವದತ್ ಪಡಿಕ್ಕಲ್ ಹೊರತುಪಡಿಸಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಕೃಷ್ಣಮೂರ್ತಿ ಸಿದ್ಧಾರ್ಥ 85 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದ್ದರು. ಉಳಿದಂತೆ 21 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ನಾಯಕ ಮನೀಷ್ ಪಾಂಡೆ ದೇವದತ್ ಪಡಿಕ್ಕಲ್ ಜೊತೆ ಎರಡನೇ ದಿನದಾಟವನ್ನು ಆರಂಭಿಸಿದರು.
ಮೊದಲನೇ ದಿನ ಕಡಿಮೆ ವಿಕೆಟ್ ಕಳೆದುಕೊಂಡು ಉತ್ತಮ ರನ್ ಕಲೆ ಹಾಕುವುದರ ಮೂಲಕ ಮೇಲುಗೈ ಸಾಧಿಸಿದ್ದ ಕರ್ನಾಟಕ ತಂಡ ಎರಡನೇ ದಿನವೂ ಕೂಡ ಉತ್ತಮ ಆಟವನ್ನು ಆಡುವುದರ ಮೂಲಕ ಮೇಲುಗೈ ಸಾಧಿಸಿದೆ. ಮೊದಲನೇ ದಿನದಾಟದಂದು ಅಜೇಯ 161 ರನ್ ಕಲೆಹಾಕಿದ್ದ ದೇವದತ್ ಪಡಿಕ್ಕಲ್ 178 ರನ್ ಗಳಿಸಿ ಔಟ್ ಆದರೆ, ಅಜೇಯ 21 ರನ್ ಗಳಿಸಿದ್ದ ಮನೀಷ್ ಪಾಂಡೆ ಎರಡನೇ ದಿನ ಅಜೇಯ ಶತಕ ಸಿಡಿಸುವುದರ ಮೂಲಕ ಕರ್ನಾಟಕ ತಂಡದ ಮೊತ್ತ 453 ಆಗುವಂತೆ ಮಾಡಿದ್ದಾರೆ. ಹೌದು, ಎರಡನೇ ದಿನ ಕರ್ನಾಟಕದ ಮನೀಷ್ ಪಾಂಡೆ ಅಜೇಯ 107, ಶರತ್ ಬಿಆರ್ 6, ಶ್ರೇಯಸ್ ಗೋಪಾಲ್ 10, ಕೃಷ್ಣಪ್ಪ ಗೌತಮ್ 0, ವಿದ್ಯಾಧರ್ ಪಾಟೀಲ್ 25 ಮತ್ತು ಪ್ರಸಿದ್ಧ್ ಕೃಷ್ಣ ಅಜೇಯ 12 ರನ್ ಕಲೆಹಾಕಿದ್ದು, ಕರ್ನಾಟಕ ಎರಡನೆ ದಿನದಾಟದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 453 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಅತ್ತ ಎರಡನೇ ದಿನ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಪುದುಚೆರಿ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದ್ದು, 401 ರನ್ಗಳ ಹಿನ್ನಡೆಯಲ್ಲಿದೆ. ಪುದುಚೇರಿ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ನಿಯಾನ್ ಶ್ಯಾಮ್ ಕಂಗಾಯಂ ಅಜೇಯ 24 ರನ್ ಗಳಿಸಿದ್ದರೆ, ಮತ್ತೋರ್ವ ಆರಂಭಿಕ ಆಟಗಾರ ಅರವಿಂದ್ ಕೋದಂಡಪಾಣಿ 13 ರನ್ ಗಳಿಸಿ ಔಟ್ ಆದರು, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಗರ್ ಉದೇಶಿ 2 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ಜಿ ಚಿರಂಜೀವಿ ಅಜೇಯ 12 ರನ್ ಗಳಿಸಿದ್ದಾರೆ. 22 ರನ್ಗಳಿಗೆ ತನ್ನ ಮೊದಲನೇ ವಿಕೆಟ್ ಕಳೆದುಕೊಂಡ ಪುದುಚೆರಿ 31 ರನ್ಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿದ್ದು, ಎರಡನೇ ದಿನವೂ ಕೂಡ ಕರ್ನಾಟಕದ ಎದುರು ಹಿನ್ನಡೆಯನ್ನು ಅನುಭವಿಸಿದೆ. ಇನ್ನು ಕರ್ನಾಟಕ ತಂಡದ ಪರ ವಿದ್ಯಾಧರ್ ಪಾಟೀಲ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ವಿದ್ಯಾಧರ್ ಪಾಟೀಲ್, ವಿಧ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ
ಪಾಂಡಿಚೇರಿ ಪ್ಲೇಯಿಂಗ್ ಇಲೆವೆನ್: ಪಾರಸ್ ಡೋಗ್ರಾ, ದಾಮೋದರನ್ ರೋಹಿತ್ (ನಾಯಕ), ಸುಬೋತ್ ಭಾಟಿ, ಪವನ್ ದೇಶಪಾಂಡೆ, ಎಸ್ ಕಾರ್ತಿಕ್ (ವಿಕೆಟ್ ಕೀಪರ್), ಅರವಿಂದ್ ಕೋತಂಡಪಾಣಿ, ನೆಯಾನ್ ಶ್ಯಾಮ್ ಕಂಗಾಯನ್, ಸಾಗರ್ ತ್ರಿವೇದಿ, ಸಾಗರ್ ಉದೇಶಿ, ಗೊನ್ನಾಬತ್ತುಲ ಚಿರಂಜೀವಿ, ಆಶಿತ್ ರಾಜೀವ್