
ಗುರುವಾರ, ಫೆಬ್ರವರಿ 16ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಆರಂಭವಾಗಿರುವ 2022-23ರ ರಣಜಿ ಟ್ರೋಫಿ ಋತುವಿನ ಫೈನಲ್ ಪಂದ್ಯದ ಮೊದಲ ದಿನದ ಮೊದಲ ಇನ್ನಿಂಗ್ಸ್ನಲ್ಲಿ ಆತಿಥೇಯ ಬಂಗಾಳ ತಂಡವು ಸೌರಾಷ್ಟ್ರ ತಂಡದ ಮಾರಕ ಬೌಲಿಂಗ್ ಪ್ರದರ್ಶನದ ವಿರುದ್ಧ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ ತಮ್ಮ ನಿರ್ಧಾರವನ್ನು ಸಮರ್ಥಿಸುವ ರೀತಿ ಬೌಲಿಂಗ್ ಮಾಡಿದರು. ಇನ್ನು ಪಶ್ಚಿಮ ಬಂಗಾಳ ಕ್ರೀಡಾ ಸಚಿವ ಮನೋಜ್ ತಿವಾರಿ ನಾಯಕತ್ವದ ಆತಿಥೇಯ ಬಂಗಾಳ ತಂಡ 54.1 ಓವರ್ಗಳಲ್ಲಿ 174 ರನ್ ಗಳಿಸಿ ಸರ್ವಪತನ ಕಂಡಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಬಂಗಾಳ ತಂಡಕ್ಕೆ ಸೌರಾಷ್ಟ್ರ ಬೌಲರ್ಗಳು ಎರಡನೇ ಓವರ್ನಲ್ಲೇ ಆಘಾತ ನೀಡಿದರು. ತಂಡದ ಮೊತ್ತ 2 ರನ್ಗಳಾಗುವಷ್ಟರಲ್ಲಿ ಆರಂಭಿಕ ಮೂರು ವಿಕೆಟ್ ಉರುಳಿದ್ದವು. ನಂತರ 17 ರನ್ಗಳಾಗಿದ್ದಾಗ ನಾಲ್ಕನೇ ವಿಕೆಟ್ ಕಳೆದುಕೊಂಡಿತು.
ಆರಂಭಿಕ ಬ್ಯಾಟರ್ಗಳಾದ ಅಭಿಮನ್ಯು ಈಶ್ವರನ್ ಸೊನ್ನೆ ಸುತ್ತಿದರೆ, ಸುಮಂತ ಗುಪ್ತಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸುದೀಪ್ ಕುಮಾರ್ ಘರಾಮಿ ಕೂಡ ಯಾವುದೇ ರನ್ ಗಳಿಸಿದೆ ಔಟಾದರು. ಇನ್ನು ಬಂಗಾಳ ತಂಡದ ನಾಯಕ ಮನೋಜ್ ತಿವಾರಿ 7 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು.

ಇನ್ನು 13 ಓವರ್ಗಳಲ್ಲಿ ತಂಡದ ಮೊತ್ತ 34 ರನ್ಗಳಾಗಿದ್ದಾಗ 16 ರನ್ ಗಳಿಸಿ ಆಡುತ್ತಿದ್ದ ಅನುಸ್ತುಪ್ ಮಜುಂದಾರ್ ಔಟಾಗಿ ಹೊರ ನಡೆದರು. ಅನಂತರ ಆಕಾಶ್ ಘಟಕ್ 17 ಗಳಿಸಿದ್ದಾಗ ವಿಕೆಟ್ ನೀಡಿದರು.
ನಂತರ ಕ್ರೀಸ್ಗೆ ಬಂದ ಆರ್ಸಿಬಿ ತಂಡದ ಆಲ್ರೌಂಡರ್ ಶಹಬಾಜ್ ಅಹ್ಮದ್ 112 ಎಸೆತಗಳಲ್ಲಿ 69 ರನ್ ಗಳಿಸಿದರೆ, ಅಭಿಷೇಕ್ ಪೋರೆಲ್ 98 ಎಸೆತಗಳಲ್ಲಿ 50 ರನ್ ಬಾರಿಸಿ ಬಂಗಾಳ ತಂಡವನ್ನು 150ರ ಗಡಿ ದಾಟಿಸಿದರು. ಇವರಿಬ್ಬರು 7ನೇ ವಿಕೆಟ್ ಜೊತೆಯಾಟಕ್ಕೆ 99 ರನ್ಗಳ ಜೊತೆಯಾಟ ನೀಡಿದರು.
ಸೌರಾಷ್ಟ್ರ ಪರ ಬೌಲಿಂಗ್ನಲ್ಲಿ ನಾಯಕ ಜಯದೇವ್ ಉನಾದ್ಕತ್ 44 ರನ್ ನೀಡಿ 3 ವಿಕೆಟ್ ಪಡೆದರೆ, ಚೇತನ್ ಸಕಾರಿಯಾ 33 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಚಿರಾಗ್ ಜಾನಿ ಮತ್ತು ಧರ್ಮೇಂದ್ರಸಿನ್ಹ್ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದರು.

ಸೌರಾಷ್ಟ್ರ ತಂಡ: ಜಯದೇವ್ ಉನದ್ಕತ್(ನಾಯಕ), ಹಾರ್ವಿಕ್ ದೇಸಾಯಿ(ವಿಕೆಟ್ ಕೀಪರ್), ಜಯ್ ಗೋಹಿಲ್, ವಿಶ್ವರಾಜ್ ಜಡೇಜಾ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾದ, ಚಿರಾಗ್ ಜಾನಿ, ಪ್ರೇರಕ್ ಮಂಕಡ್, ಪಾರ್ಥ್ ಭುತ್, ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ