
ಗುರುವಾರ, ಫೆಬ್ರವರಿ 16ರಿಂದ ಆರಂಭವಾಗಿರುವ 2022-23ರ ರಣಜಿ ಟ್ರೋಫಿ ಋತುವಿನ ಫೈನಲ್ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿದ್ದು, ಪ್ರಶಸ್ತಿಗಾಗಿ ಬಂಗಾಳ ಮತ್ತು ಸೌರಾಷ್ಟ್ರ ತಂಡಗಳು ಸೆಣಸಾಡುತ್ತಿವೆ.
ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಪಶ್ಚಿಮ ಬಂಗಾಳ ಕ್ರೀಡಾ ಸಚಿವ ಮನೋಜ್ ತಿವಾರಿ ನಾಯಕತ್ವದ ಆತಿಥೇಯ ಬಂಗಾಳ ತಂಡ ಮೊದಲು ಬ್ಯಾಟಿಂಗ್ ಆರಂಭಿಸಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಬಂಗಾಳ ತಂಡಕ್ಕೆ ಸೌರಾಷ್ಟ್ರ ಬೌಲರ್ಗಳು ಆಘಾತ ನೀಡಿದರು. ತಂಡದ ಮೊತ್ತ 2 ರನ್ಗಳಾಗುವಷ್ಟರಲ್ಲಿ ಆರಂಭಿಕ ಮೂರು ವಿಕೆಟ್ ಉರುಳಿದವು. ನಂತರ 17 ರನ್ಗಳಾಗಿದ್ದಾಗ ನಾಲ್ಕನೇ ವಿಕೆಟ್ ಸಹ ಬಿತ್ತು.
ಆರಂಭಿಕ ಬ್ಯಾಟರ್ಗಳಾದ ಅಭಿಮನ್ಯು ಈಶ್ವರನ್ ಸೊನ್ನೆ ಸುತ್ತಿದರೆ, ಸುಮಂತ ಗುಪ್ತಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸುದೀಪ್ ಕುಮಾರ್ ಘರಾಮಿ ಕೂಡ ಯಾವುದೇ ರನ್ ಗಳಿಸಿದೆ ಔಟಾದರು. ಇನ್ನು ಬಂಗಾಳ ತಂಡದ ನಾಯಕ ಮನೋಜ್ ತಿವಾರಿ 7 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು.

ಸದ್ಯ ತಂಡದ ಮೊತ್ತ 11 ಓವರ್ಗಳಲ್ಲಿ 4 ವಿಕೆಟ್ಗೆ 28 ರನ್ಗಳಾಗಿದ್ದು, ಅನುಸ್ತುಪ್ ಮಜುಂದಾರ್ 15 ರನ್ ಮತ್ತು ಯಾವುದೇ ಖಾತೆ ತೆರೆಯದ ಆಕಾಶ್ ಘಟಕ್ ಕ್ರೀಸ್ನಲ್ಲಿದ್ದಾರೆ.
ಸೌರಾಷ್ಟ್ರ ಪರ ಬೌಲಿಂಗ್ನಲ್ಲಿ ನಾಯಕ ಜಯದೇವ್ ಉನಾದ್ಕತ್ 2 ವಿಕೆಟ್ ಪಡೆದರೆ, ಚೆತನ್ ಸಕಾರಿಯಾ ಸಹ 2 ವಿಕೆಟ್ ಪಡೆದು ಮಿಂಚಿದ್ದಾರೆ.
ಪಶ್ಚಿಮ ಬಂಗಾಳ ಕ್ರೀಡಾ ಸಚಿವ ಮನೋಜ್ ತಿವಾರಿ ಅವರು ಆತಿಥೇಯ ಬಂಗಾಳ ಮುನ್ನಡೆಸುತ್ತಿದ್ದು, 33 ವರ್ಷಗಳ ನಂತರ ರಣಜಿ ಟ್ರೋಫಿ ಪ್ರಶಸ್ತಿ ಎತ್ತಿ ಹಿಡಿಯುವುದೇ ಎಂಬ ಮತ್ತೊಂದು ರೋಚಕತೆಗೆ ಸಾಕ್ಷಿಯಾಗಿದ್ದರೆ, ಇತ್ತ ದೇಶೀಯ ಕ್ರಿಕೆಟ್ ಸ್ಟಾರ್ ಬೌಲರ್ ಜಯದೇವ್ ಉನಾದ್ಕತ್ ಸೌರಾಷ್ಟ್ರ ತಂಡವನ್ನು ಮುನ್ನಡೆಸಲು ಮರಳಿರುವುದು ಫೈನಲ್ ಪಂದ್ಯದ ರೋಚಕತೆ ಹೆಚ್ಚಿಸಿದೆ.
ಬಂಗಾಳ vs ಸೌರಾಷ್ಟ್ರ ರಣಜಿ ಟ್ರೋಫಿ ಫೈನಲ್ ಪಂದ್ಯದ ಆಡುವ 11ರ ಬಳಗ
ಬಂಗಾಳ ತಂಡ: ಅಭಿಮನ್ಯು ಈಶ್ವರನ್, ಸುಮಂತ ಗುಪ್ತಾ, ಸುದೀಪ್ ಕುಮಾರ್ ಘರಾಮಿ, ಅನುಸ್ತುಪ್ ಮಜುಂದಾರ್, ಮನೋಜ್ ತಿವಾರಿ(ನಾಯಕ), ಶಹಬಾಜ್ ಅಹ್ಮದ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಆಕಾಶ್ ದೀಪ್, ಮುಖೇಶ್ ಕುಮಾರ್, ಇಶಾನ್ ಪೊರೆಲ್, ಆಕಾಶ್ ಘಟಕ್
ಸೌರಾಷ್ಟ್ರ ತಂಡ: ಜಯದೇವ್ ಉನದ್ಕತ್(ನಾಯಕ), ಹಾರ್ವಿಕ್ ದೇಸಾಯಿ(ವಿಕೆಟ್ ಕೀಪರ್), ಜಯ್ ಗೋಹಿಲ್, ವಿಶ್ವರಾಜ್ ಜಡೇಜಾ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾದ, ಚಿರಾಗ್ ಜಾನಿ, ಪ್ರೇರಕ್ ಮಂಕಡ್, ಪಾರ್ಥ್ ಭುತ್, ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ