
ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಛತ್ತೀಸ್ಗಢ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಛತ್ತೀಸ್ಗಢವನ್ನು 177 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದ ಕರ್ನಾಟಕ ನಂತರ 3 ವಿಕೆಟ್ ಕಳೆದುಕೊಂಡು ಗುರಿಯನ್ನು ಬೆನ್ನಟ್ಟಿತು.
ವೈಶಾಖ್ ಎರಡನೇ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ವೈಶಾಖ್ 5 ವಿಕೆಟ್ ಪಡೆಯುವ ಮೂಲಕ ಮಿಂಚಿದರೆ, ಕೃಷ್ಣಪ್ಪ ಗೌತಮ್ 2 ವಿಕೆಟ್ ಪಡೆದರು. ಉಳಿದಂತೆ, ಶ್ರೇಯಸ್ ಗೋಪಾಲ್, ಕೌಶಿಕ್, ವಿದ್ವತ್ ಕಾವೇರಪ್ಪ ತಲಾ ಒಂದು ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ 55 ರನ್ಗಳ ಮುನ್ನಡೆ ಪಡೆದುಕೊಂಡಿದ್ದರಿಂದ, ಎರಡನೇ ಇನ್ನಿಂಗ್ಸ್ನಲ್ಲಿ ಗೆಲುವಿಗಾಗಿ 123 ರನ್ಗಳ ಅಗತ್ಯವಿತ್ತು.
ರವಿಕುಮಾರ್ ಸಮರ್ಥ್ 24 ರನ್, ಮಯಾಂಕ್ ಅಗರ್ವಾಲ್ 14 ರನ್, ಮನೀಶ್ ಪಾಂಡೆ 29 ರನ್ ಗಳಿಸಿ ಕರ್ನಾಟಕದ ಗೆಲುವಿಗೆ ಸಹಾಯ ಮಾಡಿದರು. ನಿಖಿನ್ ಜೋಸ್ ಅಜೇಯ 44 ಮತ್ತು ಕೃಷ್ಣಪ್ಪ ಗೌತಮ್ ಅಜೇಯ 2 ರನ್ ಗಳಿಸುವ ಮೂಲಕ ಕರ್ನಾಟಕವನ್ನು ಗೆಲುವಿನ ದಡ ಸೇರಿಸಿದರು. ಛತ್ತೀಸ್ಗಢದ ಪರವಾಗಿ ಸುಮಿತ್ ರಾಯ್ಕರ್ 2 ವಿಕೆಟ್ ಪಡೆದರು.

ವಿದ್ವತ್ ಕಾವೇರಪ್ಪ, ವೈಶಾಕ್ ಉತ್ತಮ ಬೌಲಿಂಗ್
ಮೊದಲನೇ ಇನ್ನಿಂಗ್ಸ್ನಲ್ಲಿ ವಿದ್ವತ್ ಕಾವೇರಪ್ಪ 5 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರೆ, ಎರಡನೇ ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ಪಡೆದಿದ್ದ ವೈಶಾಕ್ ಎರಡನೇ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿ 5 ವಿಕೆಟ್ ಪಡೆದು ಮಿಂಚಿದರು.
ಮೊದಲ ಇನ್ನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ಕೌಶಿಕ್ ಎರಡನೇ ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ಕೃಷ್ಣಪ್ಪ ಗೌತಮ್ 2ನೇ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ಪಡೆದರು.

ಅಗರ್ವಾಲ್, ನಿಕಿನ್ ಜೋಸ್ ಬ್ಯಾಟಿಂಗ್
ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಯುವ ಆಟಗಾರ ನಿಖಿನ್ ಜೋಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮೊದಲನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಶತಕ (117) ಸಿಡಿಸಿದ್ದ ಮಯಾಂಕ್ ಅಗರ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿ 14 ರನ್ ಗಳಿಸಿದ ಔಟಾದರು.
ಮೊದಲನೇ ಇನ್ನಿಂಗ್ಸ್ನಲ್ಲಿ ತಾಳ್ಮೆಯ ಅರ್ಧಶತಕ (67) ಗಳಿಸಿ ಮಿಂಚಿದ್ದ ನಿಕಿನ್ ಜೋಸ್ ಎರಡನೇ ಇನ್ನಿಂಗ್ಸ್ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಲ್ಲಿ ಎಚ್ಚರಿಕೆ ಆಟವಾಡಿದ ಜೋಸ್ ನಂತರ ಸತತವಾಗಿ ಬೌಂಡರಿ ಗಳಿಸಿದರು. 59 ಎಸೆತಗಳಲ್ಲಿ ಒಂದು ಬೌಂಡರಿ ಎರಡು ಸಿಕ್ಸರ್ ನೆರವಿನಿಂದ ಅಜೇಯ 44 ರನ್ ಗಳಿಸಿ ಕರ್ನಾಟಕವನ್ನು ಗೆಲುವಿನ ದಡ ಸೇರಿಸಿದರು.