
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ದ್ವಿಶತಕ ಗಳಿಸಿದ್ದಾರೆ.
ನಾಯಕ ಮಯಾಂಕ್ ಅಗರ್ವಾಲ್ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಮಿಂಚುತ್ತಿದ್ದಾರೆ. ಮೊದಲನೇ ದಿನ ಶತಕ ಗಳಿಸುವ ಮೂಲಕ ವಿಕೆಟ್ ಕಾಪಾಡಿಕೊಂಡಿದ್ದ ಮಯಾಂಕ್ ಅಗರ್ವಾಲ್ ಎರಡನೇ ದಿನ ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸುವ ಮೂಲಕ ದ್ವಿಶತಕ ಸಿಡಿಸಿದರು.
ಮೊದಲ ದಿನದಿಂದಲೂ ಸೌರಾಷ್ಟ್ರ ಬೌಲರ್ ಗಳನ್ನು ಎಡಬಿಡದೆ ಕಾಡುತ್ತಿರುವ ಮಯಾಂಕ್ ಅಗರ್ವಾಲ್ ಚಿನ್ನಸ್ವಾಮಿ ಅಂಗಳದಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಮೊದಲನೇ ದಿನದಾಂತ್ಯಕ್ಕೆ 229 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಎರಡನೇ ದಿನ ಆರಂಭದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡಿತು.
ಮೊದಲನೇ ದಿನ ಅರ್ಧಶತಕ ಗಳಿಸಿದ್ದ ಶ್ರೀನಿವಾಸ್ ಶರತ್ 66 ರನ್ಗಳಾಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೃಷ್ಣಪ್ಪ ಗೌತಮ್ 2 ರನ್ ಗಳಿಸುವಷ್ಟರಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ವಿಜಯ್ ಕುಮಾರ್ ವೈಶಾಕ್ 6 ರನ್ ಗಳಿಸಿ ಔಟಾದರು. 278 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು 300 ರನ್ಗಳ ಗಡಿ ದಾಟುವುದು ಕಷ್ಟ ಎನ್ನುವಂತಾಗಿತ್ತು. ನಂತರ ಬಂದ ವಿದ್ವತ್ ಕಾವೇರಪ್ಪ ನಾಯಕನಿಗೆ ಅತ್ಯುತ್ತಮ ಸಾಥ್ ನೀಡಿದರು.

ಮಯಾಂಕ್ ಅಗರ್ವಾಲ್ ಅದ್ಭುತ ಇನ್ನಿಂಗ್ಸ್
ನಾಯಕನಾಗಿ ತಾಳ್ಮೆಯ ಆಟವಾಡಿದ ಮಯಾಂಕ್ ಅಗರ್ವಾಲ್ ಸೌರಾಷ್ಟ್ರ ಬೌಲರ್ ಗಳನ್ನು ಬಿಡದೆ ಕಾಡಿದರು. ವಿದ್ವತ್ ಕಾವೇರಪ್ಪ ಕೂಡ ತಮ್ಮ ವಿಕೆಟ್ ಕೈಚೆಲ್ಲದೆ ತಾಳ್ಮೆಯಿಂದಲೇ ಆಡಿದರು. ಮಯಾಂಕ್ ಅಗರ್ವಾಲ್ಗೆ ಹೆಚ್ಚಿನ ಸ್ಟ್ರೈಕ್ ಬಿಟ್ಟುಕೊಡುವ ಮೂಲಕ ಜವಾಬ್ದಾರಿಯುತ ಕ್ರಿಕೆಟ್ ಆಡಿದರು.
367 ಎಸೆತಗಳಲ್ಲಿ ಅವರು ತಮ್ಮ ದ್ವಿಶತಕವನ್ನು ಪೂರೈಸಿದರು. ಅಂತಿಮವಾಗಿ 429 ಎಸೆತಗಳಲ್ಲಿ 249 ರನ್ ಗಳಿಸಿ ರನೌಟ್ ಆದರು. ಅವರ ಇನ್ನಿಂಗ್ಸ್ನಲ್ಲಿ 28 ಬೌಂಡರಿ 6 ಭರ್ಜರಿ ಸಿಕ್ಸರ್ ಸೇರಿವೆ. ಮಯಾಂಕ್ ಅಗರ್ವಾಲ್ ಆಟಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿದ್ವತ್ ಕಾವೇರಪ್ಪ 41 ಎಸೆತಗಳಲ್ಲಿ 15 ರನ್ ಗಳಿಸಿ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿದರು. ಮಯಾಂಕ್ ಅಗರ್ವಾಲ್ ಮತ್ತು ವಿದ್ವತ್ ಕಾವೇರಪ್ಪ 9ನೇ ವಿಕೆಟ್ಗೆ 89 ರನ್ಗಳ ಅಮೂಲ್ಯ ಜೊತೆಯಾಟ ಆಡಿದರು. ಮೊದಲನೇ ಇನ್ನಿಂಗ್ಸ್ನಲ್ಲಿ ಕರ್ನಾಟಕ 407 ರನ್ಗಳಿಗೆ ಆಲೌಟ್ ಆಯಿತು. ಅತ್ಯುತ್ತಮ ರನ್ ಕಲೆಹಾಕಿರುವ ಕರ್ನಾಟಕ ಸದ್ಯ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.