ಮತ್ತೆ ಹಳೇ ನಿಯಮಗಳಿಗೆ ಜಾರಲಿದೆಯೇ ರಣಜಿ ಕ್ರಿಕೆಟ್ ಪಂದ್ಯಾವಳಿ?
ಮುಂಬೈ, ಮೇ 24: ರಣಜಿ ಪಂದ್ಯಾವಳಿಯಲ್ಲಿ ಕಳೆದ ವರ್ಷ ನೂತನವಾಗಿ ಜಾರಿಗೆ ತರಲಾಗಿದ್ದ ತಟಸ್ಥ ಸ್ಥಳಗಳಲ್ಲಿ ಪಂದ್ಯ ಎಂಬ ನಿಯಮದ ಬಗ್ಗೆ ರಣಜಿ ತಂಡಗಳ ನಾಯಕರು ಹಾಗೂ ತರಬೇತುದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿಯು (ಬಿಸಿಸಿಐ) ಪ್ರಾಯೋಗಿಕವಾಗಿ ತಟಸ್ಥ ಸ್ಥಳಗಳಲ್ಲಿ ರಣಜಿ ಪಂದ್ಯಗಳನ್ನು ಆಡಿಸುವ ವಿಚಾರಕ್ಕೆ ಅನುಮೋದನೆ ನೀಡಿತ್ತು.
ಮುಂಬೈನಲ್ಲಿ ಮಂಗಳವಾರದಿಂದ ಆರಂಭವಾಗಿರುವ ರಣಜಿ ತಂಡಗಳ ನಾಯಕರು ಹಾಗೂ ತರಬೇತುದಾರರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಎಲ್ಲಾ ನಾಯಕರೂ ಹಾಗೂ ತರಬೇತುದಾರರು ತಟಸ್ಥ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ದೂರುಗಳನ್ನು ಆಲಿಸಿದ ಬಿಸಿಸಿಐನ ಪ್ರಭಾರಿ ಅಧ್ಯಕ್ಷ ಸಿ.ಕೆ. ಖನ್ನಾ, ಕಾರ್ಯದರ್ಶಿ ಅಮಿತಾಭ್ ಚೌಧರಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಡಯಾನಾ ಎಡುಜಿ ಹಾಗೂ ರಾಮಚಂದ್ರ ಗುಹಾ, ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದರು.
ರಣಜಿ ತಂಡಗಳ ನಾಯಕರ ಸಭೆಯಲ್ಲಿ ನಡೆದ ಮುಖ್ಯಾಂಶಗಳೇನು, ಸಭೆಯಲ್ಲಿ ಮತ್ಯಾವ ವಿಚಾರಗಳು ಚರ್ಚೆಯಾದವು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಬೇರೆಡೆ ಪಂದ್ಯ ಆಡಿಸುವ ಸಂಸ್ಕೃತಿ
ತಟಸ್ಥ ಸ್ಥಳಗಳ ನಿಯಮ ಎಂದರೆ, ಯಾವುದೇ ರಣಜಿ ಪಂದ್ಯದಲ್ಲಿ ಆಡುವ ಎರಡು ತಂಡಗಳು ಪ್ರತಿನಿಧಿಸುವ ರಾಜ್ಯಗಳನ್ನು ಬಿಟ್ಟು ಆ ಪಂದ್ಯವನ್ನು ಬೇರೆ ಕಡೆ ಆಡಿಸುವುದು.

ತವರಿನ ಅಭಿಮಾನಿಗಳಿಗೆ ನಿರಾಸೆ
ಉದಾಹರಣೆಗೆ, ರಣಜಿ ಪಂದ್ಯವೊಂದರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಮುಖಾಮುಖಿಯಾಗುವುದಿದ್ದರೆ, ಆ ಪಂದ್ಯವು ಈ ಹಿಂದೆ ನಡೆಯುತ್ತಿದ್ದಂತೆ ಕರ್ನಾಟಕದಲ್ಲಾಗಲೀ ತಮಿಳುನಾಡಿನಲ್ಲಾಗಲೀ ನಡೆಯುತ್ತಿರಲಿಲ್ಲ. ಅದಕ್ಕೆ ಬದಲಾಗಿ, ಬೇರೊಂದು ರಾಜ್ಯದಲ್ಲಿ ನಡೆಯುತ್ತಿತ್ತು. ಹಾಗಾಗಿ, ಕಳೆದ ವರ್ಷ ಕರ್ನಾಟಕ ತಂಡದ ಪಂದ್ಯಗಳನ್ನು ಆ ತಂಡದ ತವರು ಕ್ರೀಡಾಂಗಣವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಳಿತು ನೋಡುವ ಅವಕಾಶದಿಂದ ರಾಜ್ಯದ ಕ್ರಿಕೆಟ್ ಅಭಿಮಾನಿಗಳು ವಂಚಿತರಾಗಿದ್ದರು.

ನಿಯಮ ಜಾರಿ ಹಿಂದಿತ್ತು ಸಕಾರಣ
ತಮ್ಮ ರಾಜ್ಯಗಳಲ್ಲಿರುವ ಪಿಚ್ ಗಳಲ್ಲೇ ರಣಜಿ ಪಂದ್ಯಗಳು ನಡೆದರೆ ಆಯಾ ಪಂದ್ಯದ ಆತಿಥ್ಯ ವಹಿಸುವ ರಾಜ್ಯ ಕ್ರಿಕೆಟ್ ಮಂಡಳಿಗಳಲ್ಲಿನ ಕೆಲವರು ಪಿಚ್ ಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತವೆ ಎಂಬ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ತಟಸ್ಥ ಪಿಚ್ ನಿಯಮವನ್ನು 2016-17ನೇ ಕ್ರಿಕೆಟ್ ವರ್ಷದಲ್ಲಿ ಜಾರಿಗೆ ತಂದಿತ್ತು.

ಅಭಿಮಾನಿಗಳಿಗೆ ಕ್ರಿಕೆಟ್ ಮನರಂಜನೆ
ತಟಸ್ಥ ನಿಯಮಗಳ ಬಗ್ಗೆ ಸಭೆಯಲ್ಲಿ ವ್ಯಕ್ತವಾದ ಅಸಮಾಧಾನವನ್ನು ಹಾಲಿ ಬಿಸಿಸಿಐ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದರೆ, ಈ ಬಾರಿಯ ರಣಜಿ ಪಂದ್ಯಾವಳಿಯ ವೇಳೆ ಆಯಾ ರಾಜ್ಯಗಳ ಪಂದ್ಯಗಳನ್ನು ಆಯಾ ರಾಜ್ಯಗಳ ಅಭಿಮಾನಿಗಳು ಸಾಕ್ಷಾತ್ ಕಣ್ತುಂಬಿಕೊಳ್ಳಬಹುದು.

ಆಟಗಾರರ ಸಂಭಾವನೆ ಹೆಚ್ಚುತ್ತಾ?
ಸಭೆಯಲ್ಲಿ ಮತ್ತಷ್ಟು ವಿಚಾರಗಳು ಚರ್ಚೆಯಾದವು. ಇತ್ತೀಚೆಗೆ, ಆಟಗಾರರ ಸಂಭಾವನೆ ಹೆಚ್ಚಿಸುವಂತೆ ಹಾಲಿ ಭಾರತೀಯ ತಂಡದ ಕೋಚ್ ಅನಿಲ್ ಕುಂಬ್ಳೆ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಒತ್ತಾಯವನ್ನು ಸಭೆಯ ಗಮನಕ್ಕೆ ತಂದ ಕೆಲವು ತಂಡಗಳ ನಾಯಕರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications