
ಬೆಂಗಳೂರು, ಜನವರಿ 16: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗಿವೆ. ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ಮುನ್ನಡೆಯಲ್ಲಿದೆ.
ಬುಧವಾರ (ಜನವರಿ 16) ಎರಡನೇ ದಿನದಾಟದಲ್ಲಿ ಕರ್ನಾಟಕ 87.4 ಓವರ್ನಲ್ಲಿ 10 ವಿಕೆಟ್ ಕಳೆದು 263 ರನ್ ಪೇರಿಸಿ ಮೊದಲ ಇನ್ನಿಂಗ್ಸ್ನಲ್ಲಿ 39 ರನ್ ಮುನ್ನಡೆ ಸಾಧಿಸಿತ್ತು. ತಂಡದ ಮುನ್ನಡೆಗೆ ಕೃಷ್ಣಮೂರ್ತಿ ಸಿದ್ಧಾರ್ಥ್ ( 52 ರನ್) ಮತ್ತು ವಿನಯ್ ಕುಮಾರ್ ಅಜೇಯ (83 ರನ್) ಅರ್ಧಶತಕ ನೆರವು ನೀಡಿತ್ತು.
ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ತಾನ ತಂಡಕ್ಕೆ ನಾಯಕ ಮಹಿಪಾಲ್ ಲಾಮ್ರರ್ 50, ಚೇತನ್ ಬಿಸ್ತ್ 39, ರಾಜೇಶ್ ಬಿಶ್ನೋಯ್ 79 ರನ್ ಸೇರಿಸಿ ರನ್ ಮೊತ್ತ ಏರುವಂತೆ ನೋಡಿಕೊಂಡರು. ರಾಜಸ್ತಾನ 77.1 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದು 224 ರನ್ ಪೇರಿಸುವುದರೊಂದಿಗೆ ಇನ್ನಿಂಗ್ಸ್ ಮುಗಿಸಿತ್ತು.
ರಾಜಸ್ತಾನ್ ಇನ್ನಿಂಗ್ಸ್ ವೇಳೆ ರಾಜ್ಯದ ಕೃಷ್ಣಪ್ಪ ಗೌತಮ್ 54 ರನ್ನಿಗೆ 3, ಅಭಿಮನ್ಯು ಮಿಥುನ್ 48 ರನ್ನಿಗೆ 3, ವಿನಯ್ ಕುಮಾರ್ ಮತ್ತು ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಉರುಳಿಸಿದರೆ, ಕರ್ನಾಟಕ ಇನ್ನಿಂಗ್ಸ್ ವೇಳೆ ಎದುರಾಳಿ ತಂಡದ ರಾಹುಲ್ ಚಾಹರ್ 4, ಟಿಎಮ್ ಉಲ್-ಹಕ್ 3 ಮತ್ತು ದೀಪಕ್ ಚಾಹರ್ 2 ವಿಕೆಟ್ ಕೆಡವಿ ಗಮನ ಸೆಳೆದರು.