ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ಆಡಲಿದ್ದಾರೆ. 2024/25ರ ರಣಜಿ ಟ್ರೋಫಿ ಟೂರ್ನಿಯಲ್ಲಿ ದೆಹಲಿ ತಂಡದ ಪರ ವಿರಾಟ್ ಕೊಹ್ಲಿ ಆಡಲು ಸಜ್ಜಾಗಿದ್ದಾರೆ. ಜನವರಿ 30 ರಿಂದ ದೆಹಲಿ ಮತ್ತು ರೈಲ್ವೇಸ್ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯಲಿದೆ. ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಈ ಪಂದ್ಯಕ್ಕಾಗಿ ವಿರಾಟ್ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇದರ ಮಧ್ಯೆ ವಿರಾಟ್ ಕೊಹ್ಲಿ ದೆಹಲಿ ತಂಡದ ನಾಯಕತ್ವ ವಹಿಸಲು ಹಿಂದೇಟು ಹಾಕಿದ್ದಾರೆ.
ವಿರಾಟ್ ಕೊಹ್ಲಿ 12 ವರ್ಷಗಳ ನಂತರ ರಣಜಿ ಟ್ರೋಫಿ ಟೂರ್ನಿ ಅಖಾಡಕ್ಕಿಳಿದಿದ್ದಾರೆ. ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರಿಂದ ಕೊಹ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ, ಅವರು 25 ವರ್ಷದ ಕ್ರಿಕೆಟಿಗನ ನಾಯಕತ್ವದಲ್ಲಿ ಆಡಲಿದ್ದಾರೆ.

ವರದಿಗಳ ಪ್ರಕಾರ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ರಣಜಿ ಟ್ರೋಫಿ ಟೂರ್ನಿಯ ರೈಲ್ವೇಸ್ ವಿರುದ್ಧದ ಪಂದ್ಯಕ್ಕೆ ದೆಹಲಿಯ ನಾಯಕತ್ವವನ್ನು ವಹಿಸಲು ವಿರಾಟ್ ಕೊಹ್ಲಿಗೆ ಕೇಳಿದೆ. ಆದರೆ ಅವರು ರೈಲ್ವೇಸ್ ತಂಡದ ವಿರುದ್ಧ ದೆಹಲಿಯ ನಾಯಕತ್ವವನ್ನು ನಿರಾಕರಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ವಿರಾಟ್ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.
ಯುವ ಬಲಗೈ ಬ್ಯಾಟರ್ ಆಯುಷ್ ಬದೋನಿ ರೈಲ್ವೇಸ್ ವಿರುದ್ಧ ದೆಹಲಿ ತಂಡದ ನಾಯಕತ್ವ ವಹಿಸಲಿದ್ದಾರೆ. ಈ 25 ವರ್ಷದ ಆಟಗಾರನ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಆಯುಷ್ ದೆಹಲಿ ಪರ ದೇಶೀಯ ಕ್ರಿಕೆಟ್ ಆಡಿದರೆ, ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಾರೆ. ಇದೀಗ ದೆಹಲಿ ತಂಡದ ನಾಯಕನಾಗಿ ರಣಜಿ ಟ್ರೋಫಿ ಆಡಲಿದ್ದಾರೆ.
ಬಹುತೇಕ ಎಲ್ಲಾ ದೆಹಲಿ ತಂಡದ ಆಟಗಾರರು ಮೊದಲ ಬಾರಿಗೆ ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ದೆಹಲಿಯ ಮುಖ್ಯ ಕೋಚ್ ಸರನ್ದೀಪ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಕಸರತ್ತು ನಡೆದಿದೆ. ಆಸ್ಟ್ರೇಲಿಯಾ ವಿರುದ್ಧ ಇತ್ತೀಚಿನ ನಿರಾಶಾದಾಯಕ ಪ್ರದರ್ಶನದ ನಂತರ, ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಭಾರತದ ಎಲ್ಲಾ ಸ್ಟಾರ್ ಆಟಗಾರರು ತಮ್ಮ ತವರಿನ ರಣಜಿ ತಂಡಗಳಿಗಾಗಿ ಆಡುತ್ತಿದ್ದಾರೆ. ಆಟಗಾರರು ತಮ್ಮ ಅಂತಾರಾಷ್ಟ್ರೀಯ ವೇಳಾಪಟ್ಟಿಯಿಂದ ಸಮಯ ಸಿಕ್ಕಾಗ ದೇಶೀಯ ಕ್ರಿಕೆಟ್ಗೆ ಆದ್ಯತೆ ನೀಡಬೇಕು ಎಂಬುದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಯಮ.
ಆಯುಷ್ ಬದೋನಿ (ನಾಯಕ), ವಿರಾಟ್ ಕೊಹ್ಲಿ, ಪ್ರಣವ್ ರಾಜವಂಶಿ (ವಿಕೆಟ್ ಕೀಪರ್), ಸನತ್ ಸಾಂಗ್ವಾನ್, ಅರ್ಪಿತ್ ರಾಣಾ, ಮಯಾಂಕ್ ಗುಸೇನ್, ಶಿವಂ ಶರ್ಮಾ, ಸುಮಿತ್ ಮಾಥುರ್, ವಂಶ್ ಬೇಡಿ (ವಿಕೆಟ್ ಕೀಪರ್), ಮಣಿ ಗ್ರೇವಾಲ್, ಹರ್ಷ್ ತ್ಯಾಗಿ, ಸಿದ್ಧಾಂತ್ ಶರ್ಮಾ, ನವದೀಪ್ ಸೈನಿ. , ಯಶ್ ಧುಲ್, ಗಗನ್ ವಾಟ್ಸ್, ಜಾಂಟಿ ಸಿಧು, ಹಿಮ್ಮತ್ ಸಿಂಗ್, ವೈಭವ್ ಕಂಡ್ಪಾಲ್, ರಾಹುಲ್ ಗೆಹ್ಲೋಟ್ ಮತ್ತು ಜಿತೇಶ್ ಸಿಂಗ್.