ನವದೆಹಲಿ, ಜೂ. 24: ಟೀಂ ಇಂಡಿಯಾ ಮತ್ತೆ ಸೇರಲು ವಿಫಲರಾಗಿರುವ ವೀರೇಂದ್ರ ಸೆಹ್ವಾಗ್ ಮುಂಬರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ತವರು ರಾಜ್ಯ ದೆಹಲಿಯ ತಂಡ ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ದೆಹಲಿ ತೊರೆದು ಸೆಹ್ವಾಗ್ ಯಾವ ರಾಜ್ಯದ ಪರ ಆಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಈ ನಡುವೆ ಮುಂಬೈ ತಂಡದ ಮಾಜಿ ನಾಯಕ ವಾಸಿಂ ಜಾಫರ್ ವಿದರ್ಭ ತಂಡಕ್ಕೆ ವಲಸೆ ಹೋಗಿದ್ದಾರೆ. ಮೂಲಗಳ ಪ್ರಕಾರ ಸೆಹ್ವಾಗ್ ಹರಿಯಾಣ ತಂಡ ಸೇರ್ಪಡೆಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಮುಂದಿನ ಋತುವಿನಲ್ಲಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಬಯಸಿದೆ. ಹೀಗಾಗಿ ಸೆಹ್ವಾಗ್, ಗೌತಮ್ ಗಂಭೀರ್, ಮಿಥುನ್ ಮನ್ಹಾಸ್ ಹಾಗೂ ರಜತ್ ಭಾಟಿಯಾರಂಥ ಹಿರಿಯ ಆಟಗಾರರನ್ನು ಕೈಬಿಡಲಾಗುತ್ತದೆ.

ಕಳೆದ ರಣಜಿ ಟೂರ್ನಿಯಲ್ಲಿ ದೆಹಲಿ ಪರ ಸೆಹ್ವಾಗ್ 8 ಪಂದ್ಯಗಳಿಂದ 2 ಶತಕಗಳ ಸಹಿತ 51.63 ಸರಾಸರಿಯಲ್ಲಿ 568 ರನ್ ಪೇರಿಸಿದ್ದರು. ನಾಯಕ ಗೌತಮ್ಗಂಭೀರ್ ಬಳಿಕ ಅತಿ ಹೆಚ್ಚು ರನ್ಗಳಿಸಿದ ತಂಡದ 2ನೇ ಆಟಗಾರ ಎನಿಸಿಕೊಂಡಿದ್ದರು.
ಅದರೆ, ದೆಹಲಿಯಲ್ಲಿ ಮೊದಲಿನಿಂದಲೂ ಸ್ವಜನಪಕ್ಷಪಾತ ನಡೆದುಕೊಂಡು ಬಂದಿದೆ. ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಇತ್ತೀಚೆಗೆ ಅರುಣ್ ಜೇಟ್ಲಿ ಹಾಗೂ ದೆಹಲಿ ಸಂಸ್ಥೆ ವಿರುದ್ಧ ಆರೋಪ ಹೊರೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
1997-98ರಿಂದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದೆಹಲಿ ತಂಡದ ಭಾಗವಾಗಿರುವ ಸೆಹ್ವಾಗ್, 17 ವರ್ಷಗಳ ದೇಶಿ ಕ್ರಿಕೆಟ್ ಬದುಕಿಗೆ ತವರಿನ ತಂಡದಲ್ಲಿ ವಿದಾಯದ ಹೊಸ್ತಿಲಲ್ಲಿದ್ದಾರೆ. ಇನ್ನೂ ಎರಡು ಮೂರು ವರ್ಷ ದೆಹಲಿ ಪರ ಆಡುವ ಇಚ್ಛೆ ಹೊಂದಿದ್ದರು. 104 ಟೆಸ್ಟ್, 251 ಏಕದಿನ ಮತ್ತು 19 ಟಿ20 ಪಂದ್ಯಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ 17 ಸಾವಿರಕ್ಕೂ ಅಧಿಕ ರನ್ಗಳಿಸಿದ್ದಾರೆ.