
ಬೆಂಗಳೂರು, ಜೂ. 12: ಅಫ್ಘಾನಿಸ್ತಾನ ಆಟಗಾರರಿಗೆ ಬೌಲಿಂಗ್ ಮಾಡುತ್ತ ಎಲ್ಲರ ಗಮನ ಸೆಳೆಯುತ್ತಿರುವ ವಿಶೇಷ ಚೇತನ ಕನ್ನಡಿಗ ಶಂಕರ್ ಸಜ್ಜನ್ ಗೆ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಮತ್ತು ಕನ್ನಡಿಗ ಅನಿಲ್ ಕುಂಬ್ಳೆ ಸ್ಫೂರ್ತಿಯಂತೆ. ಹಾಗಂತ ಸ್ವತಃ ಶಂಕರ್ ಅವರೇ ಹೇಳಿಕೊಂಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯಾಟಕ್ಕಾಗಿ ಆಗಮಿಸಿರುವ ಅಫ್ಘಾನಿಸ್ತಾನ ಆಟಗಾರರಿಗೆ ಅಭ್ಯಾಸದ ವೇಳೆ ಬೌಲಿಂಗ್ ಮಾಡುವ ಮೂಲಕ ಶಂಕರ್ ಅಫ್ಘಾನ್ ಆಟಗಾರರನ್ನು ಬೆರಗುಗೊಳಿಸಿದ್ದು, ವಿಶೇಷ ಚೇತನ ಕ್ರಿಕೆಟಿಗನ ಈ ಕ್ರೀಡಾ ಸ್ಫೂರ್ತಿ, ಸಾಧನೆಯನ್ನು ವಿದೇಶಿ ಆಟಗಾರರು ಮೆಚ್ಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನೆಟ್ ಬೌಲರ್ ಆಗಿರುವ ಸಜ್ಜನ್ ಮೂಲತಃ ಬಿಜಾಪುರದವರು. ಬೆಳವಣಿಗೆ ಹಂತದಲ್ಲಿ ಅಸಮರ್ಪಕ ಕ್ರೋಮೋಸೋಮ್ ನಿಂದಾಗಿ ಅಂಗ ವೈಕಲ್ಯಕ್ಕೆ ತುತ್ತಾಗಿರುವ ಶಂಕರ್ ಛಲ ಬಿಡದೆ ಕ್ರಿಕೆಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಆ ಮೂಲಕ ಇತರ ವಿಶೇಷ ಚೇತನರಿಗೂ ಸ್ಫೂರ್ತಿಯಾಗಿದ್ದಾರೆ.
ಜೂನ್ 14ರಿಂದ 18ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ-ಭಾರತ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯಾಟಕ್ಕಾಗಿ ಬೆಂಗಳೂರಿಗೆ ಬಂದಿರುವ ಅಫ್ಘಾನ್ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದು, ಈ ವೇಳೆ ಅದ್ಭುತ ಗೂಗ್ಲಿಗಳನ್ನು ಎಸೆಯುವ ಮೂಲಕ ಬೆರಗು ಮೂಡಿಸಿದರು.
ನೆಟ್ ಅಭ್ಯಾಸದ ವೇಳೆ ಅಫ್ಘಾನ್ ಆಟಗಾರರಿಗೆ ಬೌಲಿಂಗ್ ಮಾಡುವ ಅವಕಾಶ ಗಿಟ್ಟಿಸಿಕೊಂಡ ಶಂಕರ್ ಅವರನ್ನು ಮಾತನಾಡಿಸಿದಾಗ ತನ್ನೀ ಸಾಧನೆಗೆ ಅನಿಲ್ ಕುಂಬ್ಳೆ, ರಶೀದ್ ಖಾನ್ ಸ್ಫೂರ್ತಿ ಎಂದಿದ್ದಾರೆ.