ಅಫ್ಘಾನಿಸ್ತಾನ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣೆಸಾಡಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ತಂಡಕ್ಕೆ ದೊಡ್ಡ ಹಿನ್ನಡೆಯೊಂದು ಉಂಟಾಗಿದ್ದು ಲಂಕಾ ಸರಣಿಯ ಆರಂಭಕ್ಕೂ ಮುನ್ನವೇ ಆಘಾತವುಂಟಾಗಿದೆ. ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ. ಅಫ್ಘನ್ ಕ್ರಿಕೆಟ್ ಮಂಡಳಿ ವಿವಾರವನ್ನು ಖಚಿತಪಡಿಸಿದೆ.
ರಶೀದ್ ಖಾನ್ ಐಪಿಎಲ್ನಲ್ಲಿ ರನ್ನರ್ಅಪ್ ಗುಜರಾತ್ ಟೈಟನ್ಸ್ ಪರವಾಗಿ ಆಡಿದ್ದು ಅಮೋಘ ಪ್ರದರ್ಶನ ನಿಡಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಸಾಮರ್ಥ್ಯ ಪ್ರದರ್ಶಿಸಿದ್ದ ರಶೀದ್ ಅಪ್ಘಾನಿಸ್ತಾನ ತಂಡದ ಬೆನ್ನೆಲುಬಾಗಿದ್ದಾರೆ. ಆದರೆ ಸರಣಿಯ ಮೊದಲ ಎರಡು ಪಂದ್ಯಗಳಿಂದ ರಶೀದ್ ಹೊರಬೀಳುತ್ತಿರುವುದು ಸಹಜವಾಗಿ ತಂಡಕ್ಕೆ ಹಿನ್ನಡೆಯಾಗಲಿದೆ.

24ರ ಹರೆಯದ ರಶೀದ್ ಖಾನ್ ಬೆನ್ನು ನೋವಿಗೆ ತುತ್ತಾಗಿದ್ದು ಮೂರನೇ ಏಕದಿನ ಪಂದ್ಯದ ವೇಳೆಗೆ ಆಡಲು ಸಮರ್ಥರಾಗುವ ನಿರೀಕ್ಷೆಯಿದೆ. ರಶೀದ್ ಖಾನ್ ಅವರು ವೈದ್ಯಕೀಯ ನಿಗಾದಲ್ಲಿದ್ದು ಜೂನ್ 7ರಂದು ನಡೆಯಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ನಿರೀಕ್ಷೆ ವ್ಯಕ್ಯಪಡಿಸಿದೆ.
ಇನ್ನು ರಶೀದ್ ಖಾನ್ ಅಲಭ್ಯತೆಯಲ್ಲಿ ನೂರ್ ಅಹ್ಮದ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಕಳೆದ ವರ್ಷ ಶ್ರೀಲಂಕಾ ವಿರುದ್ಧವೇ ಏಕದಿನ ಸರಣಿಗೆ ಪದಾರ್ಪಣೆ ಮಾಡಿದ್ದ ನೂರ್ ಅಹ್ಮದ್ ಕೂಡ ತಮ್ಮ ಬೌಲಿಂಗ್ ಕೌಶಲ್ಯದಿಂದ ಈಗಾಗಲೇ ಗಮನಸೆಳೆದಿದ್ದಾರೆ. ಐಪಿಎಲ್ನಲ್ಲಿಯೂ ನೂರ್ ಅಹ್ಮದ್ ಗುಜರಾತ್ ಟೈಟನ್ಸ್ ತಂಡದಲ್ಲಿ ರಶೀದ್ ಖಾನ್ ಜೊತೆಗೆ ಕಣಕ್ಕಿಳಿದು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮಜೀಬ್ ಉರ್ ರಹ್ಮಾನ್ ಹಾಗೂ ಮೊಹಮ್ಮದ್ ನಬಿ ಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಮತ್ತಿಬ್ಬರು ಸ್ಪಿನ್ನರ್ಗಳು.
ಇನ್ನು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಜೂನ್ 2, ಜೂನ್ 4 ಹಾಗೂ ಜೂನ್ 7ರಂದು ನಡೆಯಲಿದೆ. ಹಂಬಂತೋಟದಲ್ಲಿರುವ ಮಹಿಂದ ರಾಜಪಕ್ಷ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಮೂರು ಪಂದ್ಯಗಳು ಕೂಡ ಪಂದ್ಯ ಆಯೋಜನೆಯಾಗಲಿದೆ.
ಅಫ್ಘಾನಿಸ್ತಾನ ತಂಡ ಹೀಗಿದೆ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಷಾ (ಉಪನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖೈಲ್ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಅಬ್ದುಲ್ ರಹಮಾನ್, ಫಜಲ್ ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್.
ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ಉಪ ನಾಯಕ ಮತ್ತು ವಿಕೆಟ್ ಕೀಪರ್), ಏಂಜೆಲೊ ಮ್ಯಾಥ್ಯೂಸ್, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ಚಾಮಿಕ ಕರುಣಾರತ್ನೆ, ದುಶನ್ ಹೇಮಂತ, ವನಿಂದು ಹಸರಂಗ, ಲಹಿರು ಕುಮಾರ, ದುಷ್ಮಂತ ಚಮೀರ, ಕಸುನ್ ರಜಿತ, ಮತೀಶ ಪತಿರಣ, ಮಹೇಶ ತೀಕ್ಷಣ