

ನವದೆಹಲಿ, ಅಕ್ಟೋಬರ್ 2: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾ ಕಪ್ 2018 ಟೂರ್ನಿಯಿಂದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಹೊರಗಿಟ್ಟಿದ್ದೇಕೆ ಎಂಬುದನ್ನು ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಬಾಯ್ಬಿಟ್ಟಿದ್ದಾರೆ. ಕೊಹ್ಲಿ ಒಂಥರಾ ಗೂಳಿಯಂತೆ. ಇದೇ ಕಾರಣಕ್ಕೆ ಕೊಹ್ಲಿಗೆ ಟೂರ್ನಿಯ ವೇಳೆ ವಿಶ್ರಾಂತಿ ನೀಡಲಾಗಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.
'ಕೊಹ್ಲಿಯನ್ನು ಗ್ರೌಂಡಿನಿಂದ ಹೊರಗಿಡುವಂತಿಲ್ಲ. ಹಾಗಿರುವಾಗ ಕೊಹ್ಲಿಗೆ ಒಂಚೂರು ವಿಶ್ರಾಂತಿಯೂ ಕೊಟ್ಟರೆ ಮುಂದಿನ ಪಂದ್ಯಕ್ಕೆ ವಾಪಸ್ಸಾಗುವಾಗ ಆತ ಹೊಂದಿರಬಹುದಾಗ ಶಕ್ತಿಯ ತೀವ್ರತೆ ಎಂಥದ್ದಿರಬಹುದು ಎಂದು ಯೋಚಿಸಿ. ಹೀಗಾಗಿ ಕೊಂಚ ವಿಶ್ರಾಂತಿಯೊಂದಿಗೆ ಹೊಸತನದಿಂದ ತಂಡಕ್ಕೆ ಮರಳಲಿ ಎಂದು ಕೊಹ್ಲಿಗೆ ಸಣ್ಣ ಬಿಡುವು ನೀಡಲಾಗಿತ್ತು' ಎಂದು ರವಿ ಶಾಸ್ತ್ರಿ ಅವರು ಮಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದೇ ಮಾತು ಇತರ ಆಟಗಾರರಿಗೂ ಅನ್ವಯವಾಗುತ್ತದೆ ಎಂದು ಶಾಸ್ತ್ರಿ ಹೇಳಿದರು. 'ಇದನ್ನೇ ಇತರ ಆಟಗಾರರಿಗೂ ನಾವು ಮಾಡಬೇಕಿದೆ. ಬೂಮ (ಜಸ್ ಪ್ರೀತ್ ಬೂಮ್ರಾ), ಭುವಿ (ಭುವನೇಶ್ವರ್ ಕುಮಾರ್) ಇವರನ್ನೂ ನಾವು ಶಕ್ತಿಗುಂದದಂತೆ ನೋಡಿಕೊಳ್ಳಬೇಕಿದೆ' ಎಂಬ ಮಾತನ್ನೂ ರವಿ ಸೇರಿಸಿದರು.
ಮುಂಬರಲಿರುವ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಗೆ 15 ಆಟಗಾರರಿರುವ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡಲಿದ್ದಾರೆ. ಬೂಮ್ರಾ, ಭುವಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ. ಅಕ್ಟೋಬರ್ 4ರಿಂದ ಗುಜರಾತ್ ನ ರಾಜ್ ಕೋಟ್ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
ವಿಂಡೀಸ್ ಟೆಸ್ಟ್ ಸರಣಿಗೆ ಏಷ್ಯಾ ಕಪ್ ನಲ್ಲಿನ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಶಿಖರ್ ಧವನ್ ಗೆ ಅವಕಾಶ ನೀಡಲಾಗಿಲ್ಲ. ಏಷ್ಯಾ ಕಪ್ ಗೂ ಮೊದಲಿನ ಇಂಗ್ಲೆಂಡ್ ಟೆಸ್ಟ್ ನಲ್ಲಿ ಧವನ್ ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಯುವ ಆಟಗಾರರಾದ ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಹನುಮವಿಹಾರಿ, ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾರೆ.