ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಒಂದೇ ವಾರದ ಅಂತರದಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇವರಿಬ್ಬರೂ ನಿವೃತ್ತಿ ಘೋಷಿಸಿದ್ದು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. ಇನ್ನು ರೋಹಿತ್ ಶರ್ಮಾ ಬದಲಿಗೆ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಹಲವು ಮಾಜಿ ಆಟಗಾರರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಸಹ ನಾಯಕತ್ವವನ್ನು ಯಾರಿಗೆ ನೀಡಬಹುದು ಎಂಬ ಬಗ್ಗೆ ಮಾತನಾಡಿದ್ದಾರೆ.
ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮಾಧ್ಯಮದಲ್ಲಿ ಬರುತ್ತಿರುವ ವರದಿಗಳ ಪ್ರಕಾರ ಶುಭ್ಮನ್ ಗಿಲ್ ತಂಡವನ್ನು ಮುನ್ನಡೆಸಬಹುದು ಎಂದು ಹೇಳುತ್ತಿವೆ. ನಾನು ಸಹ ಅದಕ್ಕೆ ಬೆಂಬಲ ನೀಡುತ್ತೇನೆ. ಆದರೆ ಇವರನ್ನು ಬಿಟ್ಟು ಸಹ ಬೇರೆ ಆಟಗಾರರು ಇದ್ದಾರೆ ಅವರಿಗೂ ತಂಡದಲ್ಲಿ ಸ್ಥಾನ ನೀಡಬಹುದು ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ. ಅನುಭವಿಗಳಿಗೆ ಚಾನ್ಸ್ ನೀಡಬೇಕು ಎಂದು ಅಶ್ವಿನ್ ತಿಳಿಸಿದ್ದಾರೆ.

ತಂಡದಲ್ಲಿರುವ ಜಸ್ಪ್ರಿತ್ ಬುಮ್ರಾ ಸಹ ನಾಯಕತ್ವ ಸ್ಥಾನವನ್ನು ಸಮರ್ಥವಾಗಿ ತುಂಬ ಬಲ್ಲ ಆಟಗಾರ. ಆದರೆ ಇಂಗ್ಲೆಂಡ್ ಪ್ರವಾಸದಲ್ಲಿ ಇವರು ಎಷ್ಟು ಪಂದ್ಯ ಆಡುತ್ತಾರೆ ಎಂಬುದರ ಬಗ್ಗೆ ನಿಶ್ಚಿತತೆ ಇಲ್ಲ. ಐದು ಸರಣಿಗಳ ಪಂದ್ಯದಲ್ಲಿ ಮೊದಲು ಮೂರು ಪಂದ್ಯಗಳಲ್ಲಿ ಬುಮ್ರಾ ತಂಡವನ್ನು ಮುನ್ನಡೆಸಿ, ಉಳಿದ ಎರಡು ಪಂದ್ಯಗಳಲ್ಲಿ ಉಪನಾಯಕನಿಗೆ ಜವಾಬ್ದಾರಿ ನೀಡುವುದು ಬೆಸ್ಟ್. ಇದರಿಂದ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದಿದ್ದಾರೆ.
ತಂಡದಲ್ಲಿ ನಾಯಕತ್ವದ ಮೇಲೆ ಕಣ್ಣು ನೆಟ್ಟಿರುವ ಹಲವು ಆಟಗಾರರು ಇದ್ದಾರೆ. ಇವರ ಅನುಭವವನ್ನು ಆಯ್ಕೆ ಸಮಿತಿ ಪರಿಗಣಿಸಬೇಕಾಗುತ್ತದೆ. ಕೋಚ್ ಗೌತಮ್ ಗಂಭೀರ್ ಸಹ ಈ ಆಯ್ಕೆಯ ಬಗ್ಗೆ ಯೋಚಿಸಬೇಕು. ಅಂದಹಾಗೆ ಅಶ್ವಿನ್ ತಿಳಿಸುವಂತೆ ಜಸ್ಪ್ರಿತ್ ಬುಮ್ರಾ, ಶುಭಮನ್ ಗಿಲ್, ರಿಷಭ್ ಪಂತ್ ನಾಯಕತ್ವದ ರೇಸ್ನಲ್ಲಿರುವ ಆಟಗಾರರು. ಆದರೆ ತಂಡ ಇನ್ನೊಬ್ಬ ಹಿರಿಯ ಆಟಗಾರನನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೂ ನಾಯಕತ್ವ ನೀಡಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ಅಶ್ವಿನ್ ತಮ್ಮ ಬಹುಕಾಲ ಸ್ಪಿನ್ ಜೋಡಿದಾರ ರವೀಂದ್ರ ಜಡೇಜಾ ಅವರಿಗೆ ನಾಯಕತ್ವ ನೀಡಬೇಕು ಎಂದು ಹೇಳಿದ್ದಾರೆ.

ತಂಡದಲ್ಲಿ ಸಮನ್ವಯ ಕಾಪಾಡಿಕೊಳ್ಳುವ ಅವಶ್ಯಕ. ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವ ಆಟಗಾರರನ್ನೇ ತಂಡದ ನಾಯಕರನ್ನಾಗಿ ಮಾಡಲಾಗುತ್ತದೆ. ರವೀಂದ್ರ ಜಡೇಜಾ ಅವರ ಬಳಿ ಸಾಕಷ್ಟು ಅನುಭವ ಇದೆ. ಇವರ ಅನುಭವ ತಂಡಕ್ಕೆ ಸಹಾಯ ಮಾಡಲಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಜಸ್ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ ಇಬ್ಬರೇ ಅನುಭವಿಗಳು. ಹೀಗಾಗಿ ರವೀಂದ್ರ ಜಡೇಜಾ ಅವರಿಗೂ ನಾಯಕತ್ವದ ಹೋಣೆ ನೀಡಬಹುದು. ಅವರಲ್ಲೂ ಸಾಕಷ್ಟು ಪ್ರತಿಭೆ ಇದೆ. ಇವರ ಅನುಭವವನ್ನು ಬಳಸಿಕೊಳ್ಳಲು ತಂಡ ಪ್ಲ್ಯಾನ್ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.