ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವೆಂದರೆ ಯಾವಾಗಲೂ ರೋಚಕವಾಗಿರುತ್ತದೆ, ಅದಕ್ಕೆ ಸಾಕ್ಷಿ ಎನ್ನುವಂತೆ ಬುಧವಾರ ನಡೆದ ಐಪಿಎಲ್ 2023ರ 8ನೇ ಪಂದ್ಯ ರೋಚಕವಾಗಿ ಕೊನೆಗೊಂಡದ್ದು. ಕೊನೆಯವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 5 ರನ್ಗಳಿಂದ ಗೆದ್ದು ಸಂಭ್ರಮಿಸಿತು. ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಮೊದಲನೇ ಪಂದ್ಯವನ್ನು ಗೆದ್ದಿದ್ದ ರಾಜಸ್ಥಾನ ಎರಡನೇ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿತು.
ಪಂದ್ಯದ ಸಮಯದಲ್ಲಿ ರಾಜಸ್ಥಾನ ರಾಯಲ್ಸ್ನ ಹಿರಿಯ ಬೌಲರ್ ರವಿಚಂದ್ರನ್ ಅಶ್ವಿನ್ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ಗೆ ವಾರ್ನಿಂಗ್ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಅಶ್ವಿನ್ ಬೌಲಿಂಗ್ ಮಾಡುವಾಗ ಬ್ಯಾಟಿಂಗ್ ಮಾಡುವವರು ಮಾತ್ರವಲ್ಲದೆ, ಬೌಲರ್ ಎಂಡ್ನಲ್ಲಿ ಇರುವ ಆಟಗಾರ ಕೂಡ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಚೂರು ಮೈಮರೆತು ಮೊದಲೇ ಕ್ರೀಸ್ ಬಿಡಲು ನೋಡಿದರೆ ಅಶ್ವಿನ್ ಅದನ್ನು ಕೂಡಲೇ ಗಮನಿಸುತ್ತಾರೆ.

ಬುಧವಾರ ನಡೆದ ಪಂದ್ಯದಲ್ಲಿ ಶಿಖರ್ ಧವನ್ ಕೂಡ ಇದೇ ತಪ್ಪು ಮಾಡಿದರು. ಏಳನೇ ಓವರ್ನಲ್ಲಿ ಅವರು ಬೌಲ್ ಮಾಡುವ ಮುನ್ನವೇ ಶಿಖರ್ ಧವನ್ ಕ್ರೀಸ್ ಬಿಟ್ಟು ರನ್ ಕದಿಯಲು ಯತ್ನಿಸುತ್ತಿದ್ದರು, ಒಂದೆರಡು ಬಾರಿ ಇದನ್ನು ಗಮನಿಸಿದ ಅಶ್ವಿನ್ ಓಡಿ ಬಂದು ಚೆಂಡನ್ ಎಸೆಯದೆ ನಿಲ್ಲಿಸಿದರು, ಆದರೆ ಅಷ್ಟರಲ್ಲಾಗಲೇ ಧವನ್ ಎರಡು ಹೆಜ್ಜೆ ಮುಂದೆ ಹೋಗಿದ್ದರು. ರನೌಟ್ ಮಾಡುವ ಅವಕಾಶ ಇದ್ದರೂ, ಅದನ್ನು ಮಾಡದ ಅಶ್ವಿನ್ ಧವನ್ಗೆ ಔಪಚಾರಿಕವಾಗಿ ಎಚ್ಚರಿಕೆ ನೀಡಿದರು.
ಧವನ್ ಅವರನ್ನು ತೀಕ್ಷ್ಣವಾಗಿ ನೋಡಿದ ಅಶ್ವಿನ್ ಕ್ರೀಸ್ ಒಳಗಡೆಯೇ ಇರುವಂತೆ ಸನ್ನೆ ಮಾಡಿದರು. ಈ ಘಟನೆ ನಡೆಯುತ್ತಿದ್ದಂತೆ ಕ್ಯಾಮೆರಾಮ್ಯಾನ್ ಜೋಸ್ ಬಟ್ಲರ್ ಅವರನ್ನು ಸ್ಕ್ರೀನ್ ಮೇಲೆ ತೋರಿಸಿದರು. ಐಪಿಎಲ್ ಪಂದ್ಯಗಳನ್ನು ನೋಡುವವರಿಗೆ ಬಟ್ಲರ್-ಅಶ್ವಿನ್ ನಡುವಿನ ವಿವಾದದ ಬಗ್ಗೆ ಮಾಹಿತಿ ಇರುತ್ತದೆ. 2019ರ ಐಪಿಎಲ್ ಪಂದ್ಯದಲ್ಲಿ ಅಶ್ವಿನ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡುವ ಮೂಲಕ ಭಾರಿ ಚರ್ಚೆ ಹುಟ್ಟುಹಾಕಿದ್ದರು.

ಮಂಕಡಿಂಗ್ ಸಮರ್ಥಿಸಿಕೊಂಡಿದ್ದ ಅಶ್ವಿನ್
2019ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ಆಡುತ್ತಿದ್ದ ಅಶ್ವಿನ್ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡಿದ್ದರು. ಅಶ್ವಿನ್ ಬೌಲಿಂಗ್ ಮಾಡುವಾಗ ಬಟ್ಲರ್ ಪದೇ ಪದೇ ಕ್ರೀಸ್ ಬಿಟ್ಟು ಮುಂದೆ ಹೋಗುತ್ತಿದ್ದರು, ಒಂದೆರಡು ಬಾರಿ ಇದನ್ನು ಗಮನಿಸಿದ ಅಶ್ವಿನ್ ನಂತರ ಬೇಲ್ಸ್ ಎಗರಿಸುವ ಮೂಲಕ ಬಟ್ಲರ್ ಅವರನ್ನು ಔಟ್ ಮಾಡಿದ್ದರು. ಅಂಪೈರ್ ಕೂಡ ಅದನ್ನು ಔಟ್ ನೀಡಿದ್ದರು. ಕ್ರಿಕೆಟ್ ಸ್ಫೂರ್ತಿಯ ಬಗ್ಗೆ ಆಗ ಸಾಕಷ್ಟು ಚರ್ಚೆ ನಡೆದಿತ್ತು.
ಮಂಕಡಿಂಗ್ ಮಾಡಿದ್ದನ್ನು ಅಶ್ವಿನ್ ಯಾವುದೇ ಮುಲಾಜಿಲ್ಲದೆ ಸಮರ್ಥಿಸಿಕೊಂಡಿದ್ದರು. ಬೌಲರ್ ಕ್ರೀಸ್ ಬಿಟ್ಟು ಹೊರಗೆ ಹೆಜ್ಜೆ ಇಟ್ಟರೆ ನೋ ಬಾಲ್ ಕೊಡ್ತಾರೆ ಅಂದ್ಮೇಲೆ, ಬ್ಯಾಟರ್ ಕೂಡ ಕ್ರೀಸ್ ಒಳಗಡೆ ನಿಲ್ಬೇಕು. ಆಡದ ನಿಯಮಗಳ ಪ್ರಕಾರವೇ ಅದನ್ನು ಔಟ್ ಕೊಟ್ಟಾಗ ಅಲ್ಲಿ ಕ್ರೀಡಾ ಸ್ಫೂರ್ತಿಯ ಮಾತೇಕೆ ಎಂದು ಕೇಳಿದ್ದರು. ನಂತರ ಮಂಕಡಿಂಗ್ ಅನ್ನು ನ್ಯಾಯಯುತ ಎಂದು ಹೇಳಿದ್ದ ಎಂಸಿಸಿ ಅದನ್ನು ಅಧಿಕೃತ ರನೌಟ್ ಎಂದು ಕರೆಯುವಂತೆ ಸೂಚನೆ ನೀಡಿದೆ. ಮಹಿಳಾ ಕ್ರಿಕೆಟ್ನಲ್ಲಿ ಕೂಡ ಭಾರತದ ದೀಪ್ತಿ ಶರ್ಮಾ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಮಂಕಡಿಂಗ್ ಮಾಡಿದ್ದು ಭಾರಿ ವಿವಾದ ಸೃಷ್ಟಿಸಿತ್ತು.