
ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಗಾಯಾಳುವಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿದ್ದಾರೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಜಡ್ಡು ಮುಂಬೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದರು.
ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಆದ ಗಾಯದಿಂದಾಗಿ ಜಡ್ಡು ಕೈ ಊದಿಕೊಂಡ ಪರಿಣಾಮ ಇಡೀ ಟೆಸ್ಟ್ ಸರಣಿಯಿಂದಲೇ ಹೊರಬಂದ್ರು. ಇದರ ಜೊತೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ಚೇತರಿಕೆ ವಿಳಂಭಗೊಂಡ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಿಸ್ ಮಾಡಿಕೊಂಡಿದ್ದಾರೆ.
ಎನ್ಎಸಿನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ರವೀಂದ್ರ ಜಡೇಜಾ ಫಿಟ್ನೆಸ್ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಭಾರತ ವೆಸ್ಟ ಇಂಡೀಸ್ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಫೆಬ್ರವಿರಯಲ್ಲಿ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯ ಮತ್ತು ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೂರು ಏಕದಿನ ಪಂದ್ಯಗಳನ್ನಾಡಲಿದೆ.
ಈ ಮೂರು ಸರಣಿಗೂ ಮೊದಲು ರವೀಂದ್ರ ಜಡೇಜಾ ಚೇತರಿಕೆ ಕಾಣಲು ಮತ್ತು ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಇದರ ಜೊತೆಗೆ ಜಡೇಜಾ ಮಂಗಳವಾರ ಟ್ವಿಟರ್ನಲ್ಲಿ ತಮ್ಮ ಚೇತರಿಕೆಯ ಬಗ್ಗೆ ಅಪ್ಡೇಟ್ ನೀಡಲು ಫೋಟೋವೊಂದನ್ನ ಶೇರ್ ಮಾಡಿದ್ದು ಫೋಟೊದೊಂದಿಗಿನ ಶೀರ್ಷಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ನಗೆಗಡಲಲ್ಲಿ ತೇಲಿಸಿದೆ. ಈ ಫೋಟೊಗಳಲ್ಲಿ ಜಡೇಜಾ ಅಸ್ಥಿಪಂಜರದೊಂದಿಗೆ ಪೋಸ್ ನೀಡಿ ಅದನ್ನು ತನ್ನ ಸ್ನೇಹಿತ ಎಂದು ಕರೆದಿದ್ದಾರೆ.
"ನನ್ನ ಸ್ನೇಹಿತ ಕೀಟೋ ಡಯಟ್ ನಂತರ" ಎಂದು ಜಡೇಜಾ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಎರಡು ಫೋಟೋಗಳಿಗೆ ಟ್ಯಾಗ್ಲೈನ್ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಅಭ್ಯಾಸದ ವೇಳೆಯಲ್ಲಿ ಸ್ನಾಯು ಸೆಳೆತದಿಂದಾಗಿ ಈಗಾಗಲೇ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ರೋಹಿತ್ ಬದಲು ಪ್ರಿಯಾಂಕ್ ಪಾಂಚಾಲ್ ತಂಡದಲ್ಲಿ ಸ್ಥಾನ ಪಡೆದಿದ್ದು, ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಅವಕಾಶ ತುಂಬಾ ಕಡಿಮೆಯಿದೆ.
ಇನ್ನು ಟೀಂ ಇಂಡಿಯಾ ಫುಲ್ ಟೈಂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬದಲಿಗೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ತಂಡವನ್ನ ಮುನ್ನಡೆಸಿದ್ದು ಐತಿಹಾಸಿಕ ಗೆಲುವನ್ನ ಪಡೆಯಲು ಕಣ್ಣಿಟ್ಟಿದ್ದಾರೆ. ಭಾರತ ದ್ವಿತೀಯ ಇನ್ನಿಂಗ್ಸ್ 2 ವಿಕೆಟ್ ನಷ್ಟಕ್ಕೆ 85 ರನ್ ಕಲೆಹಾಕಿದ್ದು, 58 ರನ್ಗಳ ಮುನ್ನಡೆ ಕಂಡಿದೆ. ಭಾರತ ಪರ ಚೇತೇಶ್ವರ ಪೂಜಾರ ಅಜೇಯ 35, ಅಜಿಂಕ್ಯ ರಹಾನೆ ಅಜೇಯ 11 ರನ್ ಕಲೆಹಾಕಿದ್ದಾರೆ.