
ಟೀಂ ಇಂಡಿಯಾ ಅಭಿಮಾನಿಗಳಿಗೆ ಬೇಸರದ ಸುದ್ದಿ ಇಲ್ಲಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡ ಪರಿಣಾಮ ಏಷ್ಯಾಕಪ್ನಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಸುದ್ದಿ ಪ್ರಕಟಿಸಿದೆ.
ಅದಾಗಲೇ ಗಾಯಗೊಂಡು ಹಲವು ವಾರಗಳ ಕಾಲ ತಂಡದಿಂದ ಹೊರಗುಳಿದಿದ್ದ ಜಡೇಜಾ, ಏಷ್ಯಾಕಪ್ಗೆ ಮರಳಿದ ಬೆನ್ನಲ್ಲೇ ಮತ್ತೆ ಗಾಯಗೊಂಡಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಗೊಂಡು ಟಿ20 ಪಂದ್ಯಾವಳಿಯಿಂದ ಹೊರಗುಳಿದಿದ್ದರಿಂದ, ಏಷ್ಯಾ ಕಪ್ನಲ್ಲಿ ಸೂಪರ್ 4 ಅಭಿಯಾನಕ್ಕೂ ಮೊದಲು ಟೀಮ್ ಇಂಡಿಯಾ ದೊಡ್ಡ ಹೊಡೆತವನ್ನು ಅನುಭವಿಸಿದೆ.
ಇನ್ನು ಜಡ್ಡು ಸರಿಸಮವಾದ ಆಲ್ರೌಂಡರ್ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಬದಲು ಏಷ್ಯಾಕಪ್ ಸ್ಕ್ವಾಡ್ನಲ್ಲಿ ಸ್ಥಾನ ಪಡೆದಿದ್ದಾರೆ. ಜಡೇಜಾ ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ.
ಈ ಮೊದಲೇ ಅಕ್ಷರ್ ಪಟೇಲ್ರನ್ನು ಸ್ಟ್ಯಾಂಡ್ ಬೈ ಆಟಗಾರನಾಗಿ ನೇಮಿಸಲಾಗಿದ್ದು, ಅದಾಗಲೇ ದುಬೈನಲ್ಲಿದ್ದರು. ಹೀಗಾಗಿ ಜಡೇಜಾ ಬದಲು ಅಕ್ಷರ್ ಪಟೇಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.
ಪಾಕಿಸ್ತಾನ ವಿರುದ್ಧ ಮಿಂಚಿದ್ದ ರವೀಂದ್ರ ಜಡೇಜಾ
ಏಷ್ಯಾಕಪ್ 2022ರ ಭಾರತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರವೀಂದ್ರ ಜಡೇಜಾ ಪ್ರಮುಖ ಇನ್ನಿಂಗ್ಸ್ ಆಡಿದ್ದರು. ರವೀಂದ್ರ ಜಡೇಜಾ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಐದನೇ ವಿಕೆಟ್ಗೆ 52ರನ್ಗಳ ಜೊತೆಯಾಟವಾಡಿ ಭಾರತಕ್ಕೆ ಗೆಲುವು ತಂದುಕೊಟ್ಟರು. 29 ಎಸೆತಗಳಲ್ಲಿ 35 ರನ್ ಸಿಡಿಸಿದ ಜಡ್ಡು ಗೆಲುವಿನ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ರು.
ಏಷ್ಯಾಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾ ಸ್ಪಿನ್ನರ್ ಎಂಬ ಸಾಧನೆ ಹೊಂದಿರುವ ಜಡ್ಡು, ಸೂಪರ್ 4ಗೂ ಮುಂಚೆ ತಂಡದಿಂದ ಹೊರಬಿದ್ದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ.