
ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಎರಡು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ಕಳೆದ ಶುಕ್ರವಾರ ಭಾರತ ತಂಡವನ್ನು ಪ್ರಕಟಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ಟೆಸ್ಟ್ ತಂಡದಲ್ಲಿರುವ ಪ್ರಮುಖ ಹೆಸರುಗಳಲ್ಲಿ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಒಬ್ಬರು. ಅವರು ಗಾಯದಿಂದಾಗಿ ನಾಲ್ಕು ತಿಂಗಳಿಗಿಂತ ಹೆಚ್ಚು ಕಾಲ ಭಾರತ ತಂಡದಿಂದ ಹೊರಗುಳಿದಿದ್ದರು.
ಭಾರತ ತಂಡದ ಆಯ್ಕೆ ಸಮಿತಿಯು ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ರವೀಂದ್ರ ಜಡೇಜಾ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದೆ. ಆದರೆ, ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವುದು ಫಿಟ್ನೆಸ್ಗೆ ಒಳಪಟ್ಟಿರುತ್ತದೆ ಎಂದು ತಂಡಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ವೇಳೆ ಇದೀಗ, ರವೀಂದ್ರ ಜಡೇಜಾ ಅವರು ಭಾನುವಾರ, ಜನವರಿ 15ರಂದು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಅವರು ತಮ್ಮ ಭಾರತೀಯ ಟೆಸ್ಟ್ ಜೆರ್ಸಿಯ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ ಮತ್ತು ಅದಕ್ಕೆ ಹೀಗೆ ಶೀರ್ಷಿಕೆ ನೀಡಿದ್ದಾರೆ. "ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ, ಆದರೆ ಶೀಘ್ರದಲ್ಲೇ, ಧರಿಸುತ್ತೇನೆ,' ಎಂದು ಬರೆದುಕೊಂಡಿದ್ದಾರೆ.
ಕಳೆದ ಆಗಸ್ಟ್ 31ರಂದು ಏಷ್ಯಾ ಕಪ್ನಲ್ಲಿ ಹಾಂಗ್ಕಾಂಗ್ ವಿರುದ್ಧದ ಟಿ20 ನಂತರ ರವೀಂದ್ರ ಜಡೇಜಾ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಅವರ ಕೊನೆಯ ಟೆಸ್ಟ್ ಪಂದ್ಯವು ಕಳೆದ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಎಡ್ಜ್ಬಾಸ್ಟನ್ನಲ್ಲಿ ಮರುನಿಗದಿಪಡಿಸಲಾದ ಏಕೈಕ ಟೆಸ್ಟ್ ಆಗಿತ್ತು.
ಸ್ಟಾರ್ ಆಲ್ರೌಂಡರ್ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಿಂದ ವಂಚಿತರಾಗಿದ್ದರು. ಇದರಲ್ಲಿ ಭಾರತ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ನ ವಿರುದ್ಧ 10 ವಿಕೆಟ್ಗಳ ಆಘಾತಕಾರಿ ಸೋಲನ್ನು ಅನುಭವಿಸಿತು.
ಇನ್ನು ರವೀಂದ್ರ ಜಡೇಜಾ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರದ ಪರ ಅಂತಿಮ ಗುಂಪು ಹಂತದ ಪಂದ್ಯವನ್ನು ಆಡಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಈ ಪಂದ್ಯವು ಜನವರಿ 24ರಂದು ತಮಿಳುನಾಡು ವಿರುದ್ಧ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
"ರವೀಂದ್ರ ಜಡೇಜಾ ಸೌರಾಷ್ಟ್ರ ಪರ ಆಡಿದರೆ ಒಳ್ಳೆಯದು, ಬಹುಶಃ ಅವರು ಆಡುತ್ತಾರೆ. ಆದರೆ ನನ್ನ ಬಳಿ ಹೆಚ್ಚಿನ ವಿವರಗಳಿಲ್ಲ," ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯದೇವ್ ಶಾ ತಿಳಿಸಿದ್ದಾರೆ.
ರವೀಂದ್ರ ಜಡೇಜಾ ಅವರು ಎನ್ಸಿಎಯಲ್ಲಿ ತಮ್ಮ ತರಬೇತಿಯನ್ನು ಮುಕ್ತಾಯಗೊಳಿಸುತ್ತಿರುವುದರಿಂದ ಈ ವಾರದ ಆರಂಭದಿಂದ ಬೌಲ್ ಮಾಡಲು ಮತ್ತು ಬ್ಯಾಟಿಂಗ್ ಮಾಡಲು ಪ್ರಾರಂಭಿಸಲಿದ್ದಾರೆ ಎಂದು ವರದಿಯಾಗಿದೆ.
ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ಎಡಗೈ ಬ್ಯಾಟರ್ ರವೀಂದ್ರ ಜಡೇಜಾ ಅವರು ಭಾರತದ ಬ್ಯಾಟಿಂಗ್ ಲೈನ್ಅಪ್ನ 5 ಅಥವಾ 6ನೇ ಕ್ರಮಾಂಕದಲ್ಲಿ ತಂಡಕ್ಕೆ ಸಮತೋಲನ ತರುವ ಆಟಗಾರನಾಗಿದ್ದಾರೆ.