18ನೇ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರಿನಲ್ಲಿ ಬುಧವಾರ ಈ ಆವೃತ್ತಿಯ ಮೊದಲ ಪಂದ್ಯವನ್ನು ಆಡಲಿದೆ. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಡೆ ಗೆಲ್ಲುವ ಹಾಟ್ ಫೆವರಿಟ್. ಈ ತಂಡಕ್ಕೆ ತವರಿನ ಅಭಿಮಾನಿಗಳ ಅಪಾರ ಬೆಂಬಲವೂ ಲಭಿಸಲಿದೆ.
ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ಕದನ ರೋಚಕತೆ ಹೆಚ್ಚಿಸಿದೆ. ಈಗಾಗಲೇ ಐಪಿಎಲ್ ಅಂಗಳದಲ್ಲಿ ಉಭಯ ತಂಡಗಳು ಐದು ಬಾರಿ ಮುಖಾಮುಖಿ ಆಗಿದ್ದು ಬೆಂಗಳೂರು ತಂಡ ಮೂರರಲ್ಲಿ ಜಯ ಸಾಧಿಸಿದೆ. ಅಲ್ಲದೆ ಈ ಬಾರಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದ್ದು, ಈ ಜೋಶ್ನಲ್ಲಿ ಆರ್ಸಿಬಿ ಕಣಕ್ಕೆ ಪ್ರವೇಶ ಪಡೆಯಲಿದೆ. 2023ರಿಂದ ಈವರೆಗೆ ಆರ್ಸಿಬಿ ತವರಿನಲ್ಲಿ ಪ್ರತಿಶತ 50 ರಷ್ಟು ಪಂದ್ಯಗಳನ್ನು ಗೆದ್ದಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದ ಪಿಚ್ ಬ್ಯಾಟಿಂಗ್ಗೆ ಅನುಕೂಲವಾಗಿರಲಿದೆ. ಈ ಮೈದಾನದಲ್ಲಿ ಕಳೆದ ಆವೃತ್ತಿಯಲ್ಲಿ ಬಿಗ್ ಸ್ಕೋರ್ಗಳು ಹರಿದು ಬಂದಿದ್ದವು. ಈ ಮೈದಾನದಲ್ಲಿ ಬೌಂಡರಿಗಳು ಚಿಕ್ಕದಾಗಿದ್ದು, ರನ್ ಹೊಳೆ ಹರಿದು ಬರುವ ನಿರೀಕ್ಷೆ ಇದೆ. ಈ ವರೆಗೆ ಈ ಮೈದಾನದಲ್ಲಿ ಒಟ್ಟು 91 ಐಪಿಎಲ್ ಪಂದ್ಯಗಳು ನಡೆದಿವೆ. ಇವುಗಳಲ್ಲಿ 41 ಬಾರಿ ಮೊದಲು ಬ್ಯಾಟ್ ಮಾಡಿದ ತಂಡ ಜಯ ಶಾಲಿ ಆದರೆ, 49 ಬಾರಿ ಚೇಸ್ ಮಾಡಿದ ತಂಡ ಗೆಲುವು ದಾಖಲಿಸಿದೆ. ಈ ಅಂಕಿ ಅಂಶಗಳನ್ನು ನೋಡಿದಾಗ ಟಾಸ್ ಈ ಅಂಗಳದಲ್ಲಿ ಮಹತ್ವದ ಪಾತ್ರವನ್ನು ವಹಿಸಿಲಿದೆ.
ಆರ್ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲೆಬು ವಿರಾಟ್ ಕೊಹ್ಲಿ. ಇವರ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಇವರು ಫಿಲ್ ಸಾಲ್ಟ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದು, ಭರ್ಜರಿ ಆರಂಭ ನೀಡಬೇಕಿದೆ. ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಈ ಜೋಡಿ ತಂಡಕ್ಕೆ ಆರಂಭದಲ್ಲಿ ನೆರವಾಗಿತ್ತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚಿಕ್ಕ ಇನಿಂಗ್ಸ್ ಆಡಿ ತಂಡಕ್ಕೆ ಆಧಾರವಾಗಿದ್ದ ದೇವದತ್ ತವರಿನ ಅಂಗಳದಲ್ಲಿ ಅಬ್ಬರ ನಡೆಸಬೇಕಿದೆ. ನಾಯಕ ರಜತ್ ಪಟಿದಾರ್ ಯಾವುದೇ ಒತ್ತಡವಿಲ್ಲದೇ ಶಾಂತ ಸ್ವಭಾವದಿಂದ ಬ್ಯಾಟಿಂಗ್ ಮಾಡುತ್ತಿದ್ದು, ತವರಿನಲ್ಲೂ ಇದೇ ಪ್ರದರ್ಶನ ಮುಂದುವರೆಸಬೇಕು.
ಮಿಡ್ಲ್ ಆರ್ಡರ್ನಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್, ಭರವಸೆಯ ಆಟಗಾರ ಜಿತೇಶ್ ಶರ್ಮ, ಆಲ್ ರೌಂಡರ್ ಕೃನಾಲ್ ಪಾಂಡ್ಯ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ.

ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಆರ್ಸಿಬಿ ಉತ್ತಮ ಬೌಲಿಂಗ್ ಲೈನ್ ಅಪ್ನ್ನು ಹೊಂದಿದೆ. ಈಗಾಗಲೇ ಆರ್ಸಿಬಿ ಪರ ಇದೇ ಅಂಗಳದಲ್ಲಿ ಆಡಿದ ಅನುಭವ ಹೊಂದಿರುವ ಜೋಶ್ ಹ್ಯಾಜಲ್ವುಡ್ ತಮ್ಮ ಶಿಸ್ತು ಬದ್ಧ ದಾಳಿಯಿಂದ ತಂಡಕ್ಕೆ ನೆರವಾಗಬೇಕಿದೆ. ಹೊಸ ಚೆಂಡಿನಲ್ಲಿ ಭುವನೇಶ್ವರ್ ಕುಮಾರ್ ಪರಿಣಾಮಕಾರಿ. ಇವರಿಗೆ ಯಶ್ ದಯಾಳ್ ಉತ್ತಮ ಸಾಥ್ ನೀಡಿದರೆ ಬೆಸ್ಟ್. ಇನ್ನು ಸ್ಪಿನ್ ಬೌಲರ್ ಆಗಿ ಸುಯೇಶ್ ಶರ್ಮಾ ಅವರಿಗೆ ಅವಕಾಶ ಸಿಗುತ್ತದೋ ಅಥವಾ ರಸಿಕ್ ದಾರ್ಗೆ ಮಣೆ ಹಾಕುತ್ತದೋ ಕಾದು ನೋಡಬೇಕಿದೆ.
ಸಂಭಾವ್ಯ ಆರ್ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಯಶ್ ದಯಾಲ್, ಸುಯಶ್ ಶರ್ಮಾ/ರಾಸಿಖ್ ದಾರ್
ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿರುವ ಜೋಶ್ನಲ್ಲಿರುವ ಗುಜರಾತ್ ಎರಡನೇ ಗೆಲುವಿನ ಕನಸು ಕಾಣುತ್ತಿದೆ. ಈ ತಂಡದಲ್ಲಿ ಟಿ20 ಕ್ರಿಕೆಟ್ನ ಹೆಸರಾಂತ ಆಟಗಾರರು ಇದ್ದಾರೆ. ಭರವಸೆಯ ಆಟಗಾರ ಸಾಯಿ ಸುದರ್ಶನ ಭರ್ಜರಿ ಲಯದಲ್ಲಿದ್ದಾರೆ. ಶುಭಮನ್ ಗಿಲ್ ಇನ್ನು ಲಯ ಕಂಡುಕೊಂಡಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ಉಪಸ್ಥಿತಿ ತಂಡಕ್ಕೆ ದೊಡ್ಡ ಬೂಸ್ಟ್ ನೀಡಲಿದೆ. ಬಟ್ಲರ್ ಈಗಾಗಲೇ ಐಪಿಎಲ್ನಲ್ಲಿ ತಮ್ಮ ಆರ್ಭಟದ ಪ್ರದರ್ಶನ ನೀಡಿದ್ದಾರೆ. ಉಳಿದ ಬ್ಯಾಟರ್ಗಳು ಸಮಯಕ್ಕೆ ತಕ್ಕಂತೆ ಬ್ಯಾಟ್ ಮಾಡಿದರೆ ಗೆಲುವಿನ ಕನಸು ನನಸಾಗುತ್ತದೆ.
ಗುಜರಾತ್ ತಂಡದಲ್ಲಿ ವಿಶ್ವದ ಖ್ಯಾತ ನಾಮ ಬೌಲರ್ಗಳ ದಂಡೇ ಇದೆ. ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್ ಹೊಸ ಚೆಂಡನ್ನು ಹಂಚಿಕೊಳ್ಳಲಿದ್ದಾರೆ. ಇನ್ನು ಇದೇ ಅಂಗಳದಲ್ಲಿ ಆಡಿ ಬೆಳೆದಿರುವ ಪ್ರಸಿದ್ಧ ಕೃಷ್ಣ ಆರ್ಸಿಬಿ ಬ್ಯಾಟರ್ಗಳನ್ನು ಕಾಡಬಲ್ಲರು. ಆರ್ ಸಾಯಿ ಕಿಶೋರ್ ತಮ್ಮ ಪಿರ್ಕಿ ಮೂಲಕ ಮಿಂಚಲು ಸಜ್ಜಾಗಿದ್ದಾರೆ.
ಸಂಭಾವ್ಯ ಗುಜರಾತ್ ತಂಡ: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್, ಶೆರ್ಫೇನ್ ರುದರ್ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡಾ, ಆರ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಇಶಾಂತ್ ಶರ್ಮಾ,