ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನ ಯಶಸ್ವಿ ತಂಡಗಳಲ್ಲಿ ಒಂದು. ಮಹೇಂದ್ರ ಸಿಂಗ್ ಧೋನಿ ಈ ತಂಡದ ಸ್ಟಾರ್ ಆಟಗಾರ. ಇವರ ಮುಂದಾಳತ್ವದಲ್ಲಿ ಚೆನ್ನೈ ಐದು ಬಾರಿ ಟ್ರೋಫಿಗೆ ಮುತ್ತಿಟ್ಟಿದೆ. ಈ ತಂಡ ಹಲವು ಆಟಗಾರರನ್ನು ಪೋಷಿಸಿದೆ. ಈಗಲೂ ಗುರಿತಿಸಿ ಮಣೆ ಹಾಕುತ್ತಲೆ ಇದೆ. ಈ ಬಾರಿಯ ರಿಟೇನ್ಷನ್ ಲೀಸ್ಟ್ ನೋಡಿದರೆ, ಸಿಎಸ್ಕೆ ಮೆಗಾ ಪ್ಲ್ಯಾನ್ ರಿವೀಲ್ ಆಗುತ್ತದೆ. ಧೋನಿ ಮತ್ತೊಮ್ಮೆ ಅಂಗಳಕ್ಕೆ ಇಳಿಯುವುದು ಪಕ್ಕಾ ಆದಂತೆ ಕಾಣುತ್ತಿದೆ. ಈ ತಂಡ ಹಲವು ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದ್ದು, ಇನ್ನು ಹಲವರನ್ನು ಕೈ ಬಿಟ್ಟಿದೆ.
ಆಟಗಾರರ ಆಟದ ಗುಣಮಟ್ಟವನ್ನು ಮತ್ತೊಂದು ಮಗ್ಗಲಿಗೆ ಕೊಂಡಯ್ಯುವ ತಂಡ ಚೆನ್ನೈ. ಈ ತಂಡದ ಜೆರ್ಸಿ ಹಾಕಿಕೊಂಡ ಮೇಲೆ ಆಟಗಾರರ ಖದರ್ ಬದಲಾಗುತ್ತದೆ. ಅದೆಷ್ಟೋ ಸ್ಟಾರ್ ಆಟಗಾರರು ಈ ತಂಡದಲ್ಲಿ ಆಡಿದ ಬಳಿಕವೇ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಸಿಎಸ್ಕೆ ಆಟಗಾರರಿಗೆ ಮಣೆ ಹಾಕುತ್ತಿದೆ ಎಂದರೆ ಅವರಲ್ಲಿ ಪ್ರತಿಭೆ ಇದೆ ಎಂಬುದು ಪಕ್ಕಾ. ಹೀಗಾಗಿ ಇವರ ತಂಡದಿಂದ ರಿಲೀಸ್ ಆದ ಆಟಗಾರರನ್ನು ಹಲವು ತಂಡಗಳು ಟಾರ್ಗೆಟ್ ಮಾಡಲಿವೆ. ಇದರಲ್ಲಿ ಆರ್ಸಿಬಿ ಸಹ ಒಂದು.

ಆರ್ಸಿಬಿ ಸಹ ಈ ಬಾರಿಯ ಹರಾಜಿನಲ್ಲಿ ಭಾರೀ ನಿರೀಕ್ಷೆಗಳೊಂದಿಗೆ ಅಂಗಳ ಪ್ರವೇಶಿಸಲಿದೆ. ಈ ಬಾರಿಯ ಬಿಡ್ನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಸಿಎಸ್ಕೆಯ ಮೂವರು ಮಾಜಿ ಆಟಗಾರರಿಗೆ ಬೆಂಗಳೂರು ತಂಡ ಬಾಜಿ ಕಟ್ಟುವ ಸಾಧ್ಯತೆ ಇದೆ.
ಸಿಎಸ್ಕೆ ತಂಡದಲ್ಲಿ ಕಳೆದ ಆವೃತ್ತಿಯಲ್ಲಿ ಆಡಿ ಸೈ ಎನಿಸಿಕೊಂಡ ಪ್ಲೇಯರ್ ರಚಿನ್ ರವೀಂದ್ರ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಇವರು ಇತ್ತೀಚಿಗೆ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಇವರ ಬ್ಯಾಟಿಂಗ್ ಕಲೆಯ ಬಗ್ಗೆ ಯಾರಿಗೂ ಡೌಟ್ ಇಲ್ಲ. ಇವರು ಬಿಡ್ ಅಂಗಳಕ್ಕೆ ಎಂಟ್ರಿ ನೀಡುತ್ತಲೆ ಮಾಲೀಕರ ನಡುವೆ ಬ್ಯಾಟಲ್ ನಡೆಯುತ್ತದೆ. ಈ ಬ್ಯಾಟಲ್ನಲ್ಲಿ ಆರ್ಸಿಬಿ ಸಹ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಟೀಮ್ ಇಂಡಿಯಾದ ಸ್ಟಾರ್ ಬೌಲರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶಾರ್ದೂಲ್ ಠಾಕೂರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ರಿಲೀಸ್ ಮಾಡಿದೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಪ್ಲೇಯರ್. ಅಲ್ಲದೆ ದೇಶೀಯ ಆಟಗಾರ. ಇವರನ್ನು ಕೊಳ್ಳಲು ಆರ್ಸಿಬಿ ಸಹ ಹಣವನ್ನು ಸುರಿಯಲಿದೆ. ಇವರು ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಈಗಾಗಲೇ ಐಪಿಎಲ್ನಲ್ಲಿ 95 ಪಂದ್ಯಗಳನ್ನು ಆಡಿದ್ದು, 94 ವಿಕೆಟ್ ಪಡೆದಿದ್ದಾರೆ.
ಮುಂಬೈ ವೇಗದ ಬೌಲರ್ ತುಷಾರ್ ದೇಶಪಾಂಡೆ ಐಪಿಎಲ್ನ ಹಿಂದಿನ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರ. ದೇಶಪಾಂಡೆ ಅವರನ್ನು ಸಿಎಸ್ಕೆ ಖರೀದಿಸಿತು ಮತ್ತು ಮೊದಲ ಸೀಸನ್ನಲ್ಲಿಯೇ ಅವರು ಅದ್ಭುತ ಪ್ರದರ್ಶನ ನೀಡಿದರು. 2023ರಲ್ಲಿ ದೇಶಪಾಂಡೆ 16 ಪಂದ್ಯಗಳಲ್ಲಿ 21 ವಿಕೆಟ್ ಪಡೆದರೆ, ಕಳೆದ ಋತುವಿನಲ್ಲಿ 13 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದರು. ಇವರಿಗೆ ಆರ್ಸಿಬಿ ಬಾಜಿ ಕಟ್ಟುವ ಸಾಧ್ಯತೆ ಇದೆ. ಯಶ್ ದಯಾಳ್ ಅವರಿಗೆ ಒಬ್ಬ ದೇಶೀಯ ಜೊತೆಗಾರನನ್ನು ಆರ್ಸಿಬಿ ತಂಡ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ವೇಗದ ಬೌಲರ್ಗೆ ಮಣೆ ಹಾಕಬಹುದು.