ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ತಾನು ಆಡಿದ ಪ್ರಪ್ರಥಮ ಅಂತಾರಾಷ್ಟ್ರೀಯ ಪಂದ್ಯದಲ್ಲಿಯೇ ಅಮೋಘ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಜೈಸ್ವಾಲ್ ಅವರ ಈಪ್ರದರ್ಶನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲದೆ ಕ್ರಿಕೆಟ್ ಲೋಕದ ದಿಗ್ಗಜರನ್ನೂ ಸೆಳೆದಿದೆ. ಈ ವಿಚಾರವಾಗಿ ದಕ್ಷಿಣ ಆಫ್ರಿಕಾ ಹಾಗೂ ಆರ್ಸಿಬಿ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮಾತನಾಡಿದ್ದು ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟ್ರಿನಿಡಾಡ್ನಲ್ಲಿ ಎರಡನೇ ಪಂದ್ಯದ ಆರಂಭಕ್ಕೂ ಮುನ್ನ ಎಬಿ ಡಿವಿಲಿಯರ್ಸ್ ಯಶಸ್ವಿ ಜೈಸ್ವಾಲ್ ಕುರಿತಾಗಿ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಐಪಿಎಲ್ನಲ್ಲಿ ಮೊದಲ ಬಾರಿಗೆ ಯಶಸ್ವಿ ಜೈಸ್ವಾಲ್ ಅವರ ಆಟವನ್ನು ನೋಡಿದ್ದನ್ನು ನೆನಪಿಸಿಕೊಂಡಿದ್ದು ಯುವ ಆಟಗಾರನಲ್ಲಿನ ವಿಶೇಷ ಪ್ರತಿಭೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

"ಯಶಸ್ವಿ ಜೈಸ್ವಾಲ್ ಉಳಿದೆಲ್ಲರಿಗಿಂತಲೂ ನನಗೆ ವಿಶೇಷವಾಗಿ ಕಾಣಿಸಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದು ತನ್ನ ಮೊದಲ ಟೆಸ್ಟ್ನಲ್ಲಿ ಯುವ ಆಟಗಾರನೊಬ್ಬ ತನ್ನ ಮೊದಲ ಟೆಸ್ಟ್ನಲ್ಲಿ ಶತಕವನ್ನು ಗಳಿಸುವಂತಾ ಸಂದರ್ಭಗಳು ಯಾವಾಗಲೂ ನಡೆಯುವುದಿಲ್ಲ. ಇಂಥವು ಬಹಳ ಅಪರೂಪ. ಆತನನ್ನು ನಾನು ಮೊದಲಿಗೆ ನೋಡದ್ದು ಐಪಿಎಲ್ನಲ್ಲಿ. ಆತನಲ್ಲಿ ವಿಶೇಷವಾಗಿರುವುದು ಇದೆ ಎಂದು ಆಗಲೆ ಕಂಡುಕೊಂಡಿದ್ದೆ. ಆತನ ಆಟವನ್ನು ನೋಡಿ ನೀವು ಆತನಲ್ಲಿ ಎಸೆತವನ್ನು ಎದುರಿಸಲು ಎಷ್ಟು ಸಮಯವಿದೆ ಎಂಬುದನ್ನು ಭಾವಿಸಬಹುದು" ಎಂದಿದ್ದಾರೆ ಎಬಿ ಡಿವಿಲಿಯರ್ಸ್.
ಇನ್ನು ಜೈಸ್ವಾಲ್ ಬ್ಯಾಟಿಂಹ್ ಕೌಶಲ್ಯದ ಬಗ್ಗೆ ಮಾತನಾಡಿದ ಎಬಿಡಿ ಭವಿಷ್ಯದಲ್ಲಿ ಭಾರತಕ್ಕೆ ಬಹಳ ದೊಡ್ಡ ಅಸ್ತ್ರವಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ತಮ್ಮ 171 ರನ್ಗಳಿಗೆ 387 ಎಸೆತಗಳನ್ನು ಎದುರಿಸಿದ್ದು ಇದು ಅವರ ತಾಳ್ಮೆಗೆ ಸಾಕ್ಷಿಯಾಗಿದೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.
"ಆತನಲ್ಲಿ ಸಾಕಷ್ಟು ಸಮಯಾವಕಾಶವಿದೆ. ಆತ ಉತ್ತಮವಾದ ಎಡಗೈ ಆಟಗಾರ. ವೇಗದ ಬೌಲಿಂಗ್ ಆತನನ್ನು ಹಿಮ್ಮೆಟ್ಟಿಸುವುದಿಲ್ಲ. ಸ್ಪಿನ್ ಹಾಗೂ ವೇಗ ಎರಡನ್ನು ಕೂಡ ಎದುರಿಸಲು ಬೇಕಾದ ಸಮಯ ಆತನಲ್ಲಿದೆ. ಬಹಳ ಪ್ರತಿಭಾನ್ವಿತ ಯುವ ಆಟಗಾರನಾಗಿದ್ದು ಭಾರತದ ದೃಷ್ಟಿಯಿಂದ ಆತ ಭವಿಷ್ಯದ ಅತ್ಯುತ್ತಮ ಅಸ್ತ್ರ. ಆ ಪಂದ್ಯದಲ್ಲಿ ಆತ ಶತಕ ಸಿಡಿಸುವುದನ್ನು ನೋಡಲು ಬಹಳ ಖುಷಿಯಾಯಿತು" ಎಂದಿದ್ದಾರೆ ಎಬಿ ಡಿವಿಲಿಯರ್ಸ್.
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಇಂದಿನಿಂದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಟ್ರನಿಡಾಡ್ನಲ್ಲಿ ಈ ಪಂದ್ಯ ನಡೆಯಲಿದ್ದು ಎರಡು ತಮಡಗಳು ಕೂಡ ತೀವ್ರ ಪೈಪೋಟಿಯನ್ನು ಪಡೆಸಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿರುವ ಕಾರಣ ಸರಣಿಯಲ್ಲಿ 1-0 ಅಂತರದ ಮುನ್ನಡೆಯಲ್ಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ವೈಟ್ವಾಶ್ ಮಾಡುವ ಆತ್ಮವಿಶ್ವಾಸದಲ್ಲಿದೆ ರೋಹಿತ್ ಪಡೆ.
ಇನ್ನು ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ತಂಡ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಕಮ್ಬ್ಯಾಕ್ ಮಾಡಬೇಕಿದೆ. ಹಾಗಿದ್ದಲ್ಲಿ ಮಾತ್ರವೇ ಸರಣಿಯನ್ನು ವೈಟ್ವಾಶ್ ಅಂತರದಿಂದ ಕಳೆದುಕೊಳ್ಳುವ ಅವಮಾನದಿಂದ ಪಾರಾಗಲಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.